'ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಜನರ ಜೀವವೂ ಉಳಿಸಿ'
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿಬಿಡಿ. ಹೀಗೆ ಮಾಡುವುದರಿಂದ ಗೋರಕ್ಷಕರಿಂದ ನಡೆಯುತ್ತಿರುವ ಹಿಂಸಾಚಾರವೂ ನಿಲ್ಲುತ್ತದೆ ಎಂದು ಜಮಾಯಿತ್ ಉಲೆಮಾ-ಇ-ಹಿಂದ್ ನ ಅಧ್ಯಕ್ಷ ಮೌಲಾನಾ ಸೈಯದ್ ಅರ್ಶದ್ ಮದನಿ ಹೇಳಿದ್ದಾರೆ
ನವದೆಹಲಿ, ಮೇ 11: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವುದರ ಬಗ್ಗೆ ಸರಕಾರ ಚಿಂತಿಸಬೇಕು- ಈ ಮಾತನ್ನು ಹೇಳಿರುವುದು ಜಮಾಯಿತ್ ಉಲೆಮಾ-ಇ-ಹಿಂದ್ ನ ಅಧ್ಯಕ್ಷರಾದ ಮೌಲಾನಾ ಸೈಯದ್ ಅರ್ಶದ್ ಮದನಿ. ಗೋ ರಕ್ಷಕರ ದಾಳಿಯಿಂದ ಭಯದ ವಾತಾವರಣ ಸೃಷ್ಟಿಯಾಗಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸರಕಾರವು ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿದರೆ ನಾವದನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಗೋರಕ್ಷಕರಿಂದ ದೇಶದಲ್ಲಿ ಹಲವೆಡೆ ಹಿಂಸಾಕೃತ್ಯಗಳು ನಡೆದಿವೆ. "ಈ ಗೋರಕ್ಷಕರು ಒಂದು ನಿರ್ದಿಷ್ಟ ಧರ್ಮದ ಮೇಲೆ ಶೋಷಣೆ ಮಾಡಿ, ಜನರನ್ನು ಕೊಲ್ಲುತ್ತಿದ್ದಾರೆ, ಲೂಟಿ ಮಾಡುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ನಾವು ಗೌರವಿಸುತ್ತೇವೆ.[ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]
"ಅದರೆ, ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು" ಎಂದು ಅವರು ಹೇಳಿದ್ದಾರೆ. ಸರಕಾರ ಗೋವಿನ ರಕ್ಷಣೆಗೆ ಕಾನೂನು ತರಲಿ. ಆ ಮೂಲಕ ಜನರ ಪ್ರಾಣವನ್ನು ಕೂಡ ಉಳಿಸಿಕೊಳ್ಳಬಹುದು ಎಂದು ಮದನಿ ಹೇಳಿದ್ದಾರೆ.[ಗೋರಕ್ಷಕರ ರಕ್ಷಣೆಗೆ ಪಣ ತೊಟ್ಟ ಸಿದ್ದರಾಮಯ್ಯ ಸರ್ಕಾರ!]
ತ್ರಿವಳಿ ತಲಾಖ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಧಾರ್ಮಿಕ ವಿಚಾರ. ಇದಕ್ಕೆ ಪರಿಹಾರವನ್ನು ಧಾರ್ಮಿಕವಾಗಿಯೇ ಕಂಡುಕೊಳ್ಳಬೇಕು. ಅಂಥ ಒಪ್ಪಿಕೊಳ್ಳಬಹುದಾದ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದರೆ ಅದನ್ನು ಖಂಡಿತಾ ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.