ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಕರೆ
ಲಖನೌ, ಆಗಸ್ಟ್ 18: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ದೆಹಲಿ ಪೊಲೀಸರಿಗೆ ಅಪರಿಚಿತರಿಂದ ಕರೆ ಬಂದಿದ್ದು, ಈ ಪ್ರಕರಣವನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದೆ.
ರಸ್ತೆಯಲ್ಲಿ ನಮಾಜ್, ಪೊಲೀಸ್ ಠಾಣೆ ಜನ್ಮಾಷ್ಟಮಿ: ಯೋಗಿ ಏನಂದ್ರು?
"ನಾವು ತನಿಖೆಯನ್ನು ಉತ್ತರಪ್ರದೇಶ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಿದ್ದೇವೆ. ಆ ಕರೆಯನ್ನು ವಾಯ್ಸ್- ಓವರ್ ಇಂಟರ್ನೆಟ್ ಪ್ರೊಟೋಕಾಲ್ ಮೂಲಕ ಮಾಡಲಾಗಿದೆ. ಆದ್ದರಿಂದ ಕರೆ ಮಾಡಿದವರನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ಆದರೆ ನಾವು ಈ ಪ್ರಕರಣದಲ್ಲಿ ಕಾರ್ಯೋನ್ಮುಖರಾಗಿದ್ದೇವೆ" ಎಂದು ಎಡಿಜಿಪಿ (ಕಾನೂನು ಸುವ್ಯವಸ್ಥೆ) ಆನಂದ್ ಕುಮಾರ್ ಹೇಳಿದ್ದಾರೆ.
ದೆಹಲಿ ಪೊಲೀಸ್ ಕಂಟ್ರೋಲ್ ರೂಮ್ ನ ಲ್ಯಾಂಡ್ ಲೈನ್ ಫೋನಿಗೆ ಗುರುವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕರೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆದಿತ್ಯನಾಥ್ ನ ಬದುಕಿಸಿಕೊಳ್ಳುವುದಕ್ಕೆ ನಿಮಗೆ ಕೆಲವೇ ಗಂಟೆಗಳಿವೆ ಎಂದು ಹೇಳಿ ಫೋನಿಟ್ಟಿದ್ದಾನೆ.
ಇದು ಹುಸಿ ಕರೆ ಇರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಇನ್ನು ಈ ಕರೆ ವಿಚಾರವಾಗಿ ದೆಹಲಿ ಪೊಲೀಸ್ ವಿಶೇಷ ವಿಭಾಗ ಕೂಡ ತನಿಖೆಯಲ್ಲಿ ತೊಡಗಿದೆ.