ಕೌರ್ ಗೆ ಬೆದರಿಕೆ ಹಾಕಿದವರನ್ನು ಬಂಧಿಸಲು ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ಸೂಚನೆ
ಭಾರತೀಯ ಜನತಾ ಪಾರ್ಟಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀ ವಿದ್ಯಾರ್ಥಿ ಪರಿಷತ್ ವಿರುದ್ಧ ಆನ್ ಲೈನ್ ನಲ್ಲಿ ಆಂದೋಲನ ಆರಂಭಿಸಿದ್ದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್.
ನವದೆಹಲಿ, ಫೆಬ್ರವರಿ 27: ಭಾರತೀಯ ಜನತಾ ಪಾರ್ಟಿಯ (ಎಬಿವಿಪಿ) ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಅಂತರ್ಜಾಲದಲ್ಲಿ ಆಂದೋಲನ ನಡೆಸಿದ್ದ ನವದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅತ್ಯಾಚಾರ ಬೆದರಿಕೆಯೊಡ್ಡಿದ್ದ ದುಷ್ಕರ್ಮಿಗಳನ್ನೂ ಕೂಡಲೇ ಬಂಧಿಸುವಂತೆ ದೆಹಲಿ ಮಹಿಳಾ ಆಯೋಗವು (ಡಿಡಬ್ಲ್ಯೂಸಿ), ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ಇತ್ತೀಚೆಗೆ, ಸಾಮಾಜಿಕ ಜಾಲತಾಣವೊಂದರಲ್ಲಿ 'ಎಬಿವಿಪಿಗೆ ತಾನು ಹೆದರುವುದಿಲ್ಲ' ಎಂದು ಬರೆದುಕೊಂಡಿದ್ದ ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ವಿವಾದಕ್ಕೆ ಕಾರಣವಾಗಿದ್ದಾರೆ. ಅವರ ಈ ನಡೆ ವಿರುದ್ಧ ಅಂತರ್ಜಾಲದಲ್ಲಿ ಅನೇಕರು ಟೀಕೆಗಳನ್ನು ಮಾಡಿದ್ದರೆ, ಮತ್ತೆ ಕೆಲವರು ಅತ್ಯಾಚಾರ ಮಾಡುವುದಾಗಿ ಕೌರ್ ಅವರಿಗೆ ಬೆದರಿಕೆ ಹಾಕಿದ್ದರು.[ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ!]
ಈ ಹಿನ್ನೆಲೆಯಲ್ಲಿ, ಕೌರ್ ಅವರು, ದೆಹಲಿ ಮಹಿಳಾ ಆಯೋಗದ ಮೊರೆ ಹೋಗಿದ್ದು, ತಮಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಬೆದರಿಕೆಗಳ ಬಗ್ಗೆ ದೂರು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಬಂದ ಸ್ಕ್ರೀನ್ ಶಾಟ್ ಗಳನ್ನು ಸಾಕ್ಷ್ಯವಾಗಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ದೆಹಲಿ ಪೊಲೀಸರಿಗೆ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದೆ.[ಗುರ್ಮೆಹರ್ ಕೌರ್, ಪಾಕಿಸ್ತಾನ ಎಷ್ಟು ಭಾರತೀಯರನ್ನು ಕೊಂದಿದೆ ಗೊತ್ತಾ?]