ರಾಮಮಂದಿರ ನಿರ್ಮಾಣದ ಅಂತಿಮ ದಿನಾಂಕ ಉಡುಪಿಯಲ್ಲಿ ಘೋಷಣೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗುವ ಅಂತಿಮ ದಿನಾಂಕವನ್ನು ಉಡುಪಿಯಲ್ಲಿ ಘೋಷಿಸಲಾಗುವುದು ಎಂದು ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಕಾನ್ಪುರ, ಜೂ 26: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಆರಂಭವಾಗುವ ಅಂತಿಮ ದಿನಾಂಕವನ್ನು ಕರ್ನಾಟಕದ ಉಡುಪಿಯಲ್ಲಿ ಘೋಷಿಸಲಾಗುವುದು ಎಂದು ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಉತ್ತರಪ್ರದೇಶದ ಉನ್ನಾವ್ ಕ್ಷೇತ್ರದ ಫೈರ್ ಬ್ರಾಂಡ್ ಖ್ಯಾತಿಯ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಇದೇ ನವೆಂಬರ್ ನಲ್ಲಿ ಉಡುಪಿಯಲ್ಲಿ ಸಂತರ ಸಮ್ಮೇಳನ ನಡೆಯಲಿದೆ. ಆ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗುವ ಅಂತಿಮ ದಿನಾಂಕವನ್ನು ಪ್ರಕಟಿಸಲಾಗುವುದು.
ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಆಯೋಜಿಸಿದ ಆರೆಸ್ಸೆಸ್
ನಾನು ಖುದ್ದಾಗಿ ಉಡುಪಿಗೆ ಭೇಟಿ ನೀಡಿ ಪೂಜ್ಯ ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದೇನೆ. ವಿಶ್ವ ಹಿಂದೂ ಪರಿಷತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೇಜಾವರ ಶ್ರೀಗಳು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ನವೆಂಬರ್ ತಿಂಗಳಲ್ಲಿ ದಿನಾಂಕ ಘೋಷಣೆಯಾದ ನಂತರ, ವಿಶ್ವದ ಯಾವುದೇ ಶಕ್ತಿಗೆ ರಾಮಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ನಿತೀಶ್ ಕುಮಾರ್ ಬೆಂಬಲ ಸೂಚಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದ ಸಾಕ್ಷಿ ಮಹಾರಾಜ್, ನಿತೀಶ್ ತೆಗೆದುಕೊಂಡ ಕ್ರಮ ಸ್ವಾಗತಾರ್ಹ ಎಂದಿದ್ದಾರೆ.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಡಳಿತ ವೈಫಲ್ಯದಿಂದ, ಆ ರಾಜ್ಯದಲ್ಲಿ ಪದೇಪದೇ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.