ಪಿಎಂ ಮೋದಿ ದಸರಾ ಭಾಷಣ; ಉಗ್ರರ ವಿರುದ್ದ ವಾಕ್ ಪ್ರಹಾರ
ಲಕ್ನೋ, ಅ 11: ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಸೇನೆಯ ಸೀಮಿತ ದಾಳಿಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಉಗ್ರರು ಮತ್ತು ಉಗ್ರರಿಗೆ ಬೆಂಬಲ ನೀಡುವವರ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ.
ವಿಜಯದಶಮಿಯ ದಿನವಾದ ಮಂಗಳವಾರ (ಅ 11) ನಗರದ ಐಶಾಬಾಗ್ ನಲ್ಲಿರುವ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ದೇಶದ 125 ಕೋಟಿ ನಾಗರೀಕರು ಉಗ್ರರ ವಿರುದ್ದ ಹೋರಾಡಲು ಕೈಜೋಡಿಸಿದರೆ ಉಗ್ರರನ್ನು ಮಟ್ಟ ಹಾಕುವುದು ಕಷ್ಟದ ಕೆಲಸವಲ್ಲ ಎಂದಿದ್ದಾರೆ.
1992-93ರ ಸುಮಾರಿಗೆ ಅಮೆರಿಕಾದ ವಿದೇಶಾಂಗ ಸಚಿವಾಲಯದ ಸೆಕ್ರೆಟರಿ ಬಳಿ ಮಾತನಾಡುತ್ತಿದ್ದಾಗ ನಿಮ್ಮ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೇ ದೊಡ್ಡ ಸಮಸ್ಯೆ ಎಂದಿದ್ದರು.
ನಮ್ಮ ದೇಶದಲ್ಲಿ ಲಾ ಎಂಡ್ ಆರ್ಡರ್ ಸಮಸ್ಯೆಯಿಲ್ಲ, ನಮ್ಮ ದೇಶಕ್ಕೆ ತೊಂದರೆ ಇರುವುದು ಉಗ್ರರಿಂದಾಗಿ ಎಂದಿದ್ದೆ, ಅಂದು ನನ್ನ ಮಾತಿಗೆ ಅಮೆರಿಕಾ ಸಹಮತ ವ್ಯಕ್ತ ಪಡಿಸಿರಲಿಲ್ಲ ಎಂದು ಮೋದಿ ದಶಕದ ಹಿಂದಿನ ಘಟನೆಯನ್ನು ಸಭೆಯಲ್ಲಿ ಮೆಲುಕು ಹಾಕಿಕೊಂಡರು.
ಬಹುತೇಕೆ ಈಗ ವಿಶ್ವದೆಲ್ಲಡೆ ಉಗ್ರರ ಸಮಸ್ಯೆಯಿದೆ. ಅಂದು ನಮ್ಮ ಮಾತಿಗೆ ಒಪ್ಪದವರಿಗೆ ಇಂದು ನಾವು ಎದುರಿಸುತ್ತಿರುವ ಸಮಸ್ಯೆ ಏನು ಎನ್ನುವುದರ ಅರಿವಾಗಿದೆ.
ಉಗ್ರರಿಗೆ ಸೀಮಿತ ಪ್ರದೇಶ ಎನ್ನುವುದಿಲ್ಲ, ಮರ್ಯಾದೆ ಎನ್ನುವುದು ಮೊದಲೇ ಇಲ್ಲ. ಆತಂಕವಾದಿಗಳ ವಿರುದ್ದ ಹೋರಾಡಲು ಎಲ್ಲರೂ ಒಗ್ಗಟ್ಟಾಗಿರುವುದು ಅತ್ಯವಶ್ಯಕವಾಗಿದೆ. ಉಗ್ರರಿಗೆ ಬೆಂಬಲಿಸುವರಿಗೂ ಇದರ ಅರ್ಥವಾಗಬೇಕೆಂದು ಪರೋಕ್ಷವಾಗಿ ಮೋದಿ, ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ.