'ಅಮೀರ್ಗೆ ಕಪಾಳಮೋಕ್ಷ ಮಾಡಿ, ಲಕ್ಷ ರು. ಇನಾಮು ಗೆಲ್ಲಿ'!
ಲುಧಿಯಾನಾ (ಪಂಜಾಬ್), ನವೆಂಬರ್ 26 : ವಿವಾದಾತ್ಮಕ ಹೇಳಿಕೆ ಕುರಿತಂತೆ ಬಾಲಿವುಡ್ ನಟ ಅಮೀರ್ ಖಾನ್ ಸ್ಪಷ್ಟೀಕರಣ ನೀಡಿದ್ದರೂ, ಅವರ ವಿರುದ್ಧ ಹೊಗೆಯಾಡುತ್ತಿರುವ ಆಕ್ರೋಶದ ಬಿಸಿ ಇನ್ನೂ ತಣ್ಣಗಾಗಿಲ್ಲ. ನಾನೊಬ್ಬ ದೇಶಪ್ರೇಮಿ, ಭಾರತದಲ್ಲೇ ಇರುತ್ತೇನೆ ಎಂದು ಅಮೀರ್ ನುಡಿದಿದ್ದರೂ, ಅವರ ಮಾತಿಗೆ ಅನೇಕರು ಇನ್ನೂ ಸೊಪ್ಪು ಹಾಕುತ್ತಿಲ್ಲ.
ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಅಮೀರ್ ವಿರುದ್ಧ ಟೀಕಾಪ್ರಹಾರ ಮುಂದುವರಿದಿದ್ದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಸೇನೆ, ಅಮೀರ್ ಖಾನ್ ಅವರಿಗೆ ಕಪಾಳಮೋಕ್ಷ ಮಾಡಿದವರಿಗೆ ಪ್ರತೀ ಹೊಡೆತಕ್ಕೂ ಒಂದು ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ. ಹೀಗೆ ಘೋಷಿಸಿರುವುದು ಮುಂಬೈ ಶಿವಸೇನೆಯಲ್ಲ, ಪಂಜಾಬ್ ಶಿವಸೇನೆ!
"ಅಮೀರ್ ಕಪಾಳಕ್ಕೆ ಬಾರಿಸಲು ಹೋಟೆಲ್ ಮ್ಯಾನೇಜರ್, ಸಿಬ್ಬಂದಿಗೆ ಮತ್ತು ಚಿತ್ರತಂಡಕ್ಕೆ ಅವಕಾಶವನ್ನು ನೀಡುತ್ತೇವೆ. ಧೈರ್ಯದಿಂದ ಯಾವ ದೇಶಪ್ರೇಮಿ ಅಮೀರ್ ಅವರ ಕಪಾಳಕ್ಕೆ ಹೊಡೆಯುತ್ತಾನೋ ಅವರಿಗೆ ನಮ್ಮಿಂದ 1 ಲಕ್ಷ ರು. ಬಕ್ಷೀಸು" ಎಂದು ಪಂಜಾಬ್ ಶಿವಸೇನೆ ಚೇರ್ಮನ್ ರಾಜೀವ್ ಟಂಡನ್ ಘೋಷಿಸಿದ್ದಾರೆ. ['ನನ್ನ ದೇಶಭಕ್ತಿಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ']
ಅಮೀರ್ ನೀಡಿದ್ದ ಸ್ಪಷ್ಟೀಕರಣ : ದೇಶ ಬಿಡುವ ವಿವಾದ ದೇಶದೆಲ್ಲೆಡೆ ಆವರಿಸಿಕೊಳ್ಳುತ್ತಿದ್ದಂತೆ ಮಂಗಳವಾರ ಅಮೀರ್ ಅವರು ಸ್ಪಷ್ಟೀಕರಣ ನೀಡಿದ್ದರು. "ನಾನು ದೇಶಪ್ರೇಮಿ, ಯಾವತ್ತೂ ದೇಶಬಿಟ್ಟು ಹೋಗುವುದಿಲ್ಲ. ಅಸಹಿಷ್ಣುತೆ ಕುರಿತು ನಾನು ಹೇಳಿದ್ದರಲ್ಲೂ ತಪ್ಪಿಲ್ಲ, ನನ್ನ ಸಂದರ್ಶನ ನೋಡಿದರೆ ನಿಮಗೇ ಅರಿವಾಗುತ್ತದೆ" ಎಂದಿದ್ದರು.
ಲುಧಿಯಾನದಲ್ಲಿ ಅಮೀರ್ : ಪ್ರಸ್ತುತ, 'ದಂಗಾಲ್' ಹಿಂದಿ ಚಿತ್ರದ ಚಿತ್ರೀಕರಣಕ್ಕೆಂದು ಲುಧಿಯಾನಾದಲ್ಲಿರುವ ಅಮೀರ್ ಖಾನ್ ಎಂಡಿಬಿ ರಾಡಿಸನ್ ಬ್ಲೂ ಹೋಟೆಲಿನಲ್ಲಿ ತಂಗಿದ್ದಾರೆ. ಹೋಟೆಲಿನ ಎದುರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜೀವ್ ಟಂಡನ್ ಈ ಕಪಾಳಮೋಕ್ಷ ಸ್ಪರ್ಧೆಯ ಘೋಷಣೆಯನ್ನು ಮಾಡಿ ಮತ್ತೆ ಕೆಂಡವನ್ನು ಕೆದಕಿದ್ದಾರೆ. [ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]
ದೇಶಪ್ರೇಮ ಅತ್ಲಾಗಿರಲಿ ಅಮೀರ್ ಕಪಾಳಕ್ಕೆ ಹೊಡೆಯುವ ಧೈರ್ಯವಾದರೂ ಯಾರಿಗಿದೆ ಎಂಬ ಪ್ರಶ್ನೆ ಎದುರಾಗಿದೆ. ಈ ನಡುವೆ, ಅಮೀರ್ ವಿರುದ್ಧ ಮುಂಬೈನ ಶಿವಸೇನೆ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಅಮೀರ್ ಒಬ್ಬ 'ಸ್ವಯಂಘೋಷಿತ ಮುಲ್ಲಾ', ಅವರು ಅಗತ್ಯಕ್ಕಿಂತ ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟಗರೊಬ್ಬರು, ಅಮೀರ್ ಕಪಾಳಕ್ಕೆ ಹೊಡೆದವನಿಗೆ 1 ಲಕ್ಷ ರು. ಕೊಡುವ ಬದಲು, ಬೆಳೆ ನಾಶವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಕುಟುಂಬಕ್ಕೆ ಇನ್ನೂ ಒಂದು ರು. ಹೆಚ್ಚಿಗೆ ಸೇರಿಸಿ ನೀಡಲಿ ಎಂದು ಕಟಕಿಯಾಡಿದ್ದಾರೆ. [ಎಲ್ಲಿಯ ಶಾಶ್ವತಿ, ಎಲ್ಲಿಯ ಕಿರಣ್; ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!]