ಈಶಾನ್ಯ ಭಾರತಕ್ಕೆ ಸಂಕಟ, ಹೆಚ್ಚುತ್ತಲೇ ಇದೆ ಕೊಮೆನ್ ಆರ್ಭಟ
ನವದೆಹಲಿ, ಆ.03: ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಮುಂದುವರಿದಿದೆ. 81 ಮಂದಿ ಪ್ರಾಣ ಕಳೆದುಕೊಂಡಿದ್ದು, ಪ್ರವಾಹದಿಂದಾಗಿ 80 ಲಕ್ಷಕ್ಕೂ ಹೆಚ್ಚು ವಸತಿ ಕಳೆದುಕೊಂಡಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಕೊಮೆನ್ ಚಂಡಮಾರುತ ಎಡೆಬಿಡದೆ ಮಳೆ ಸುರಿಸುತ್ತಿದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಣಿಪುರ ಮತ್ತು ಒಡಿಶಾ ರಾಜ್ಯಗಳು ಮಳೆ ಹಾನಿ ಅನುಭವಿಸುತ್ತಿವೆ. [ಕೊಮೆನ್ ಎಲ್ಲಿಂದ ಬಂತು?]
ಭಾಗೀರಥಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನದಿ ತಟದ 450 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು 150 ಜನರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದು ಸೇನೆ ಅವರ ನೆರವಿಗೆ ಧಾವಿಸಿದೆ, ಮಳೆ ಅಬ್ಬರದ ಚಿತ್ರಗಳನ್ನು ಮುಂದೆ ನೋಡಿ..(ಪಿಟಿಐ ಚಿತ್ರಗಳು)
ಅಪಾಯ ಮಟ್ಟ ಮೀರಿದ ನದಿಗಳು
ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದಿಂದ ಊಶಾನ್ಯ ಭಾರತ ರಾಜ್ಯಗಳು ತತ್ತರಿಸುತ್ತಿವೆ. ಭಾಗೀರಥಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಟದ 450 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಧಾರಾಕಾರ ಮಳೆ ಮುಂದುವರಿಯಲಿದೆ.
ಇನ್ನೂ ಎರಡು ಮೂರು ದಿನಗಳ ಕಾಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಕ್ಷಣಾ ಕಾರ್ಯಕ್ಕೆ ಸೈನ್ಯ ಮತ್ತು ಪೊಲೀಸರು ಶ್ರಮಿಸುತ್ತಿದ್ದಾರೆ.
ರಾಜನಾಥ್ ಸಿಂಗ್ ಸೂಚನೆ
ಜಲಾವೃತಗೊಂಡ ನಾಲ್ಕು ರಾಜ್ಯಗಳ ಪ್ರವಾಹ ಪರಿಸ್ಥಿತಿ ಅವಲೋಕಿಸಿರುವ ಕೇಂದ್ರ ಸರ್ಕಾರ ಅಗತ್ಯ ನೆರವಿನ ಭರವಸೆ ನೀಡಿದೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಭಾನುವಾರ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮತ್ತು ಮಣಿಪುರ ಮುಖ್ಯಮಂತ್ರಿ ಓಕ್ರಮ್ ಇಬೋಬಿ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.
ಮಣಿಪುರದಲ್ಲಿ ಭೂಕುಸಿತ
ಮಳೆಯ ಪ್ರಭಾವದಿಂದ ಮಣಿಪುರ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು ಅಪಾರ ಹಾನಿ ಮಾಡಿದೆ. ಶನಿವಾರ ಮತ್ತು ಭಾನುವಾರ ಸಂಭವಿಸಿದ ಭೂ ಕುಸಿತದಿಂದ 30 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಕಾರ್ಯಾಚರಣೆಗೆ ಮಳೆ ಅಡ್ಡಿ
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 17 ತಂಡಗಳು ಸಾವಿರಾರು ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ. ಆದರೆ ಬೀಳುತ್ತಿರುವ ಮಳೆ ರಕ್ಷಣಾ ಕಾರ್ಯಕ್ಕೆ ಹಿನ್ನಡೆ ಉಂಟುಮಾಡಿದೆ.
ಗಂಜಿ ಕೇಂದ್ರಗಳು
ಬಹುತೇಕ ನಗರಗಳು ಜಲಾವೃತಗೊಂಡಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ, ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಆಹಾರ ಪೊಟ್ಟಣಗಳನ್ನು ಹೆಲಿಕಾಪ್ಟರ್ ಮೂಲಕ ವಿತರಿಸಲಾಗುತ್ತಿದ್ದು ಗಂಜಿ ಕೇಂದ್ರ ತೆರೆಯಲಾಗಿದೆ.
ಈ ಜಿಲ್ಲೆಗಳು ಮಳೆಯಿಂದ ತತ್ತರ
ಬರ್ದ್ವಾನ್, ಮುರ್ಷಿದಾಬಾದ್, ಪಶ್ಟಿಮ ಮಿಡ್ನಾಪುರ್, ಹೌರಾ ಜಿಲ್ಲೆಗಳು ಮಳೆಯಬ್ಬರದಿಂದ ತೀವ್ರ ಹಾನಿಗೀಡಾಗಿವೆ. ಕೋಲ್ಕತಾದ ಅನೇಕ ಪ್ರದೇಶಗಳೂ ಜಲಾವೃತವಾಗಿವೆ. ರೈಲು ಮತ್ತು ಬಸ್ ಸಂಚಾರ ಬಂದ್ ಆಗಿದ್ದು ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ.
|
ಪ್ರವಾಹದಲ್ಲಿ ಸಿಲುಕಿರುವ ಮಹಿಳೆಯರ ರಕ್ಷಣೆ
ಪ್ರವಾಹದಲ್ಲಿ ಸಿಲುಕಿರುವ ಮಹಿಳೆಯರ ರಕ್ಷಣೆಗೆ ವಿಶೇಷ ತಂಡಗಳು ತೆರಳಿವೆ. ಹಲವಾರು ಎನ್ ಜಿಒಗಳು ಸಹ ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.