ನಕಲಿ ಗೋರಕ್ಷಕರು ನಮ್ಮವರಲ್ಲ: ಕೇಂದ್ರ ಸಚಿವರ ಗಂಭೀರ ಹೇಳಿಕೆ
ಗೋಹತ್ಯೆಯನ್ನು ನಾವು ವಿರೋಧಿಸುತ್ತೇವೆ, ಆದರೆ ನಕಲಿ 'ಗೋರಕ್ಷಕರು' ಬಿಜೆಪಿ ಅಥವಾ ಸಂಘ ಪರಿವಾರದವರಲ್ಲ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ.
ನವದೆಹಲಿ, ಮೇ 25 (ಪಿಟಿಐ) : ಬಿಜೆಪಿ ಮತ್ತು ಸಂಘ ಪರಿವಾರ ಗೋಹತ್ಯೆಯನ್ನು ವಿರೋಧಿಸುತ್ತದೆ, ಆದರೆ ಕಪಟ 'ಗೋರಕ್ಷಕರು' ನಮ್ಮವರಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡುತ್ತಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಗೋರಕ್ಷಣೆಯ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆಸುವ ಯಾವುದೇ ವ್ಯಕ್ತಿಗಳು ಬಿಜೆಪಿ ಅಥವಾ RSS ಸಂಘಟನೆಯ ಸದಸ್ಯರು ಅಂತ ಹೇಳುವಂತಿಲ್ಲ.
ಗೋವಿನ ಹೆಸರಿನಲ್ಲಿ ಸಮಾಜ ವಿರೋಧಿ ಕೆಲಸ ಮಾಡುವ ಘಾತುಕರನ್ನು ನಮ್ಮ ಪಕ್ಷ ಎಂದಿಗೂ ಬೆಂಬಲಿಸುವುದಿಲ್ಲ. ಇಂತಹ ಕಪಟಿಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾದ ಉದಾಹರಣೆಗಳು ನಮ್ಮ ಮುಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವ ಧ್ಯೇಯವಾಕ್ಯದೊಂದಿಗೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆಯಾಗುವ ಯಾವುದೇ ಕಾನೂನನ್ನು ಜಾರಿಗೆ ತರಲು ನಮ್ಮ ಸರಕಾರ ಮುಂದಾಗುವುದಿಲ್ಲ.
ಕೇಸರಿ ತೊಟ್ಟ ಯಾವುದೇ ವ್ಯಕ್ತಿಗಳಿರಲಿ ಅಂಥವರನ್ನು ಬಿಜೆಪಿ ಜೊತೆ ತುಳುಕು ಹಾಕಲಾಗುತ್ತದೆ, ಅಸಲಿಗೆ ಆ ವ್ಯಕ್ತಿಗಳ ಜೊತೆ ಪಕ್ಷಕ್ಕೆ ಸಂಬಂಧನೇ ಇರುವುದಿಲ್ಲ. ಇಂತಹ ಕೆಲವು ವಿದ್ಯಮಾನಗಳು ಎಡಪಕ್ಷಗಳಿಂದ ಪ್ರಾಯೋಜಿತವಾದ ಉದಾಹರಣೆಗಳೂ ಇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿಂದೆ ನಕಲಿ ಗೋರಕ್ಷಕರನ್ನು ಪ್ರಧಾನಿ ಮೋದಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈಗ ನಿತಿನ್ ಗಡ್ಕರಿ ನೀಡಿರುವ ಹೇಳಿಕೆ ಸರಕಾರದ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಂತಿದೆ.