ಶ್ರೀ ಶ್ರೀ ರವಿಶಂಕರ್ ಮೇಲೆ ನ್ಯಾಯಾಂಗ ನಿಂದನೆಯ ತೂಗುಗತ್ತಿ
ವಿಶ್ವ ಸಾಂಸ್ಕೃತಿಕ ಉತ್ಸವದ ಸಂದರ್ಭ ಯಮುನಾ ನದಿ ಪಾತ್ರ ಹಾಳು ಮಾಡಿದ್ದಕ್ಕೆ ಕೇಂದ್ರ ಸರಕಾರ ಮತ್ತು ಹಸಿರು ನ್ಯಾಯಾಧೀಕರಣವೇ ಹೊಣೆ ಎಂದಿದ್ದ ರವಿಶಂಕರ್ ಮೇಲೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿಗೊಳಿಸಲಾಗಿದೆ.
ನವದೆಹಲಿ, ಏಪ್ರಿಲ್ 27: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಿದೆ. ಜತೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಈ ನೊಟೀಸ್ ಜಾರಿಗೊಳಿಸಲಾಗಿದೆ.
ವಿಶ್ವ ಸಾಂಸ್ಕೃತಿಕ ಉತ್ಸವದ ಸಂದರ್ಭ ಯಮುನಾ ನದಿ ಪಾತ್ರ ಹಾಳು ಮಾಡಿದ್ದಕ್ಕೆ ಕೇಂದ್ರ ಸರಕಾರ ಮತ್ತು ಹಸಿರು ನ್ಯಾಯಾಧೀಕರಣವೇ ಹೊಣೆ ಎಂದು ರವಿಶಂಕರ್ ಹೇಳಿದ್ದರು. ಇದೀಗ ಈ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿಗೊಳಿಸಲಾಗಿದೆ.[ಮಾಧ್ಯಮಗಳಿಂದ ತಪ್ಪಾಗಿ ವರದಿ - ಆರ್ಟ್ ಆಫ್ ಲಿವಿಂಗ್ ನಿಂದ ಸ್ಪಷ್ಟನೆ]
ರವಿ ಶಂಕರ್ ಹೇಳಿಕೆ ಸಂಬಂಧ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿ ಸಾಮಾಜಿಕ ಹೋರಾಟಗಾರ ಮನೋಶ್ ಮಿಶ್ರಾ ನ್ಯಾಯಾಧೀಕರಣದ ಮೊರೆ ಹೋಗಿದ್ದರು. ರವಿಶಂಕರ್ ಹೇಳಿಕೆ ನ್ಯಾಯಾಂಗದ ನೇರ ಮತ್ತು ನಿಷ್ಠುರ ನ್ಯಾಯಧಾನದಲ್ಲಿ ಮಧ್ಯಪ್ರವೇಶ ಮಾಡಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಮನೋಜ್ ಮಿಶ್ರಾ ಉಲ್ಲೇಖಿಸಿದ್ದರು.
ಇದನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಸ್ವತಂತ್ರ ಕುಮಾರ್, ಆರ್ಟ್ ಆಫ್ ಲಿವಿಂಗ್ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿಗೊಳಿಸಿದ್ದಾರೆ.[ಕೋರ್ಟ್ ತಜ್ಞರ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನನ್ನನ್ನಲ್ಲ - ರವಿಶಂಕರ್]
ಈ ಹಿಂದೆ ವಿಶ್ವ ಸಾಂಸ್ಕೃತಿಕ ಉತ್ಸವದ ಸಂದರ್ಭ ಯಮುನಾ ನದಿ ಪಾತ್ರಕ್ಕಾದ ಹಾನಿಯನ್ನು ಅಂದಾಜು ಮಾಡಲು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಲಾಗಿತ್ತು. ಈ ಸಮಿತಿ ಉತ್ಸವದಿಂದಾದ 42 ಕೋಟಿಯಷ್ಟು ನಷ್ಟವಾಗಿದೆ ಎಂದು ವರದಿ ನೀಡಿತ್ತು.
ಈ ವರದಿ ಹೊರ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ರವಿ ಶಂಕರ್ ಎಲ್ಲಾ ರೀತಿಯಲ್ಲೂ ಅನುಮತಿ ಪಡೆದೇ ಉತ್ಸವ ನಡೆಸಲಾಗಿತ್ತು. ಇದರಲ್ಲಿ ನಿಯಮಗಳನ್ನೇನೂ ಉಲ್ಲಂಘಿಸಿಲ್ಲ. ಯಾವುದೇ ರೀತಿಯಲ್ಲಿ ನಷ್ಟವಾಗಿದ್ದರೆ ಅದಕ್ಕೆ ನ್ಯಾಯಾಲಯ ಮತ್ತು ಸರಕಾರವೇ ಹೊಣೆ ಎಂದಿದ್ದರು. (ಒನ್ ಇಂಡಿಯಾ ಸುದ್ದಿ)