ಗುಜರಾತ್ ಚುನಾವಣೆಗೆ ಕಾಂಗ್ರೆಸ್ ನಿಂದಲೂ ಹಿಂದುತ್ವ ರಣತಂತ್ರ
ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಹಿಂದುತ್ವದ ಜತೆಗೆ ಅಭಿವೃದ್ಧಿಯ ಮಂತ್ರ ಜಪಿಸಲಿದೆ ಬಿಜೆಪಿ. ಆದರೆ ಕಾಂಗ್ರೆಸ್ ಕೂಡ ಹಿಂದುತ್ವದ ಬಾವುಟ ಹಿಡಿದೇ ಗುಜರಾತ್ ಚುನಾವಣೆ ಎದುರಿಸುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ
ನವದೆಹಲಿ, ಮಾರ್ಚ್ 28: ಬಿಜೆಪಿ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ. ಮತ್ತು ಈ ಬಾರಿ ರಣಾಂಗಣ ಗುಜರಾತ್ ನಲ್ಲಿ. ಪಕ್ಷವು 150 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಜರಾತ್ ಚುನಾವಣೆಯ ಸ್ಟಾರ್ ಪ್ರಚಾರಕರು ಆಗಲಿದ್ದಾರೆ.
ಹಿಂದುತ್ವವೇ ಚುನಾವಣೆಯ ಪ್ರಮುಖ ಅಂಶವಾಗಲಿದೆ. ಈ ವರ್ಷದ ಕೊನೆಯಲ್ಲಿ ಅಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್ ಕೂಡ ಹಿಂದುತ್ವದ ಹಗ್ಗ ಹಿಡಿದೇ ರಣತಂತ್ರ ರೂಪಿಸುವ ಸಾಧ್ಯತೆ ಇದೆ. ಅವಧಿಗಿಂತ ಮುಂಚಿತವಾಗಿಯೇ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲೂ ಇದೆ.[ಬಿಜೆಪಿಯ ಗೆಲುವಿಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ, ಮೋದಿಗೆ ಅಭಿನಂದನೆ]
ಗುಜರಾತ್ ಚುನಾವಣೆಗೆ ಹಿಂದುತ್ವವನ್ನೇ ಮುಖ್ಯ ವಿಷಯ ಮಾಡಿಕೊಳ್ಳುವಂತೆ ಕಾಂಗ್ರೆಸ್ ಥಿಂಕ್ ಟ್ಯಾಂಕ್ ಸಲಹೆ ಮಾಡಿದೆ. ಬಿಜೆಪಿ ಅದಾಗಲೇ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು, ಅಭಿವೃದ್ಧಿ ಹಾಗೂ ಹಿಂದುತ್ವವನ್ನು ಚುನಾವಣೆ ವಿಷಯಗಳಾಗಿ ಮಾಡಿಕೊಂಡಿದೆ. ಈಚೆಗೆ ಉತ್ತರಪ್ರದೇಶದಲ್ಲೊಂದು ಮಹತ್ವದ ಸಭೆ ನಡೆದಿದೆ.[ರಾಷ್ಟ್ರಪತಿ ಹುದ್ದೆಗೆ ಮೋಹನ್ ಭಾಗವತ್ ಹೆಸರು ಮುಂದಿಟ್ಟ ಶಿವಸೇನೆ]
ಅಲ್ಲಿ ಮಾತನಾಡಿದ ಶಾ, ನಾವು ಯಾವಾಗಲೂ ಚುನಾವಣೆಗಳಿಗೆ ಸನ್ನದ್ಧರಾಗಿರಬೇಕು ಎಂದಿದ್ದಾರೆ. ಅಂದಹಾಗೆ ಮುಂದಿನ ಭಾನುವಾರ ಅಹ್ಮದಾಬಾದ್ ನಲ್ಲಿ ವಿರಾಟ್ ಹಿಂದೂ ಸಮ್ಮೇಳನ ನಡೆಯಲಿದೆ. ಅದರಲ್ಲಿ ಗೋ ರಕ್ಷಣೆ ಕಾನೂನು ಬಿಗಿಗೊಳಿಸುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಇದರಿಂದ ಗೊತ್ತಾಗೋದು ಏನೆಂದರೆ, ಗುಜರಾತ್ ನಲ್ಲಿ ಮತ್ತೆ ಗೆಲುವು ಸಾಧಿಸಲು ಹಿಂದುತ್ವದ ಮಂತ್ರ ಜಪಿಸಲು ಬಿಜೆಪಿ ಸಿದ್ಧವಾಗಿದೆ.