ದೇಶದಲ್ಲಿ ’ಮೋದಿ ಅಲೆ’ ಇದೆ ಅನ್ನೋದನ್ನ ಒಪ್ಪಿಕೊಳ್ಳಿ ಕಾಂಗ್ರೆಸ್ಸಿಗರೇ
ರಾಜಕೀಯ ಎನ್ನುವುದು ನಿಂತ ನೀರಲ್ಲ, ಇಲ್ಲಿ ಸೋಲು ಗೆಲುವು ಮಾಮೂಲು. ಈ ಹಾವು ಏಣಿ ಆಟದಲ್ಲಿ ಮೇಲಿದ್ದವರು ಕೆಳಗೆ ಬರಲೇ ಬೇಕು, ಹಾಗೆಯೇ ಕೆಳಗಿದ್ದವರು ಮೇಲೆ. ಇದು ವಿಧಿನಿಯವಲ್ಲದಿದ್ದರೂ, ರಾಜಕೀಯ ನಿಯಮ ಅನ್ನುವುದಕ್ಕೆ ಅಡ್ಡಿಯಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಸೋತು ಹೈರಾಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಸದ್ಯ ಬೀಸುತ್ತಿರುವುದು ಪ್ರಧಾನಿ 'ಮೋದಿ ಅಲೆ'ಎನ್ನುವುದನ್ನು ಒಪ್ಪಿಕೊಳ್ಳಲು ಬಹುಷ: ಸಂಕುಚಿತ ಮನೋಭಾವ ಇದ್ದರೂ ಇರಬಹುದು.
ಲೋಕಸಭಾ ಚುನಾವಣೆಯ ನಂತರ ನಡೆದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ನೆಲಕಚ್ಚಿ, ದೇಶದ ಅತ್ಯಂತ ಹಳೆಯ ಪಕ್ಷವೊಂದು ತೀವ್ರ ಮುಖಭಂಗ ಅನುಭವಿಸಿದ್ದು ನಮ್ಮ ಮುಂದಿದೆ.
ಈ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಹೊರತು ಪಡಿಸಿ ಮಿಕ್ಕೆಲ್ಲಾ ರಾಜ್ಯಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಮೈತ್ರಿ ಪಕ್ಷದೊಂದಿಗೆ ಅಧಿಕಾರಕ್ಕೇರುವ ಸಾಧ್ಯತೆಯನ್ನು ತಳ್ಳಿಹಾಕಲಾರದು.
ಮೋದಿ ಕಂಡರೆ ಗುರ್ರ್.. ಎನ್ನುತ್ತಿದ್ದವರು ಈಗ ಇಲ್ಲಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ. ಇದು ಮೋದಿ ಅಲೆಯಿಂದ ಎನ್ನುವುದನ್ನು ಒಪ್ಪಿಕೊಳ್ಳಲು ಮಾತ್ರ ಕಾಂಗ್ರೆಸ್ ಸುತರಾಂ ತಯಾರಿಲ್ಲ. (ಮೋದಿ ಟ್ವಿಟರ್ ನಲ್ಲಿ ಆಕ್ಟೀವ್)
ಜಮ್ಮು ಕಾಶ್ಮೀರದಲ್ಲಿ 2009ರಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಗಣನೀಯ ಸಾಧನೆ ಮಾಡಿದ್ದು ಮೋದಿ ಅಲೆಯಿಂದ ಎಂದು ಅರ್ಥ ಮಾಡಿಕೊಳ್ಳಲು ರಾಜಕೀಯ ಪಂಡಿತರ ಅವಶ್ಯಕತೆ ಕಂಡು ಬರುವುದಿಲ್ಲ.
ಆದರೆ, ಜಮ್ಮು ಕಾಶ್ಮೀರದ 'ಕಾಶ್ಮೀರ ಕಣಿವೆ' ಭಾಗದಲ್ಲಿ ಬಿಜೆಪಿ ಖಾತೆ ತೆರೆಯದೇ 'ಮಿಷನ್ 44' ಯಶಸ್ಸು ಆಗದೇ ಇದ್ದದ್ದು ಕಾಂಗ್ರೆಸ್, ಯುಪಿಎ ಮೈತ್ರಿಕೂಟದ ಪಕ್ಷಗಳಿಗೆ, ಮೋದಿ ವಿರುದ್ದ ತಿರುಗಿ ಬೀಳಲು ಕಾಯುತ್ತಿರುವ ಮಾಧ್ಯಮದವರಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿರುವುದು ಅಷ್ಟೇ ಸತ್ಯ.
ಜಾರ್ಖಂಡ್ ನಲ್ಲಿ ಇದೀಗ ತಾನೇ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ ಚುನಾವಣೆಯಲ್ಲಿ (2009) ಹದಿನೆಂಟು ಸ್ಥಾನ ಪಡೆದಿದ್ದ ಬಿಜೆಪಿ, ಈ ಬಾರಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಪಕ್ಷದ ಮೈತ್ರಿಯೊಂದಿಗೆ ಇನ್ನೇನು ಕೆಲ ದಿನಗಳಲ್ಲಿ ಸರಕಾರ ರಚಿಸಲಿದೆ.
ಜಾರ್ಖಂಡ್ ನಲ್ಲಿ ಕಳೆದ ಚುನಾವಣೆಯಲ್ಲಿ 25 ಸ್ಥಾನ ಪಡಿದಿದ್ದ ಕಾಂಗ್ರೆಸ್ ಈ ಬಾರಿ ಬರೀ 6 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೆ, ಜಾರ್ಖಂಡ್ ನಲ್ಲಿ ಎಐಸಿಸಿ ಚುನಾವಣೆ ಉಸ್ತುವಾರಿ ನೋಡಿಕೊಂಡಿದ್ದ ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡುತ್ತಾ, ನಾವು ಸ್ಥಳೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ.
ಆದರೆ ನಾವು ಸೋತಿದ್ದು ಮೋದಿ ಅಲೆಯಿಂದ ಅಲ್ಲ ಎಂದಿದ್ದಾರೆ. ಬಹುಷ: ರಾಹುಲ್ ಗಾಂಧಿಯವರನ್ನು ಸಂತೃಪ್ತಿ ಪಡೆಸಲು ಹರಿಪ್ರಸಾದ್ ಈ ರೀತಿಯ ಹೇಳಿಕೆ ನೀಡಿರಬಹುದು.
ಇನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ 2014ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಬರುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿತು. ಕಳೆದ ಚುನಾವಣೆಯಲ್ಲಿ (2009) 46 ಸ್ಥಾನ ಪಡೆದಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ 122 ಸ್ಥಾನ ಪಡೆಯುವ ಮೂಲಕ ಅಲ್ಲಿ ಸರಕಾರ ರಚಿಸಿದೆ.
ಆದರೂ, ಆ ರಾಜ್ಯದ ಕಾಂಗ್ರೆಸ್ ಮುಖಂಡರ ಪ್ರಕಾರ ಇದು ಆಡಳಿತ ವಿರೋಧಿ ಅಲೆಯೇ ಹೊರತು ಮೋದಿ ಅಲೆಯಲ್ಲ ಎನ್ನುವುದು. (ಮೊದಲ ಸ್ಥಾನಕ್ಕೆ ಜಿಗಿದ ಮೋದಿ)
ಇನ್ನು ಹರ್ಯಾಣದ ವಿಚಾರಕ್ಕೆ ಬರುವುದಾದರೆ, ಇಲ್ಲೂ ಕೂಡಾ ಕಾಂಗ್ರೆಸ್ ನೆಲಕಚ್ಚಿದೆ. ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಮೂರನೇ ಸ್ದಾನದಲ್ಲಿ ಭದ್ರವಾಗಿದೆ. 2009ರ ಅಸೆಂಬ್ಲಿ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ 47 ಸ್ಥಾನಗಳಿಸಿ ಸರಕಾರ ರಚಿಸಿದೆ. ಆದರೂ, ಇಲ್ಲಿ ಮೋದಿ ಇರಲಿಲ್ಲವಂತೆ.
ಕೊನೆಯದಾಗಿ ಜಮ್ಮು ಮತ್ತು ಕಾಶ್ಮೀರ. ಮೋದಿ, ಅಮಿತ್ ಶಾ ಅವರ ಮಹತ್ವಾಕಾಂಕ್ಷೆಯ ಮಿಷನ್ 44 ಇಲ್ಲಿ ಸೋತಿರಬಹುದು. ಕಣಿವೆ ಭಾಗದ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯದೇ ಇರಬಹುದು.
ಆದರೆ 2008ರ ಚುನಾವಣೆಗೆ ಹೋಲಿಸಿದರೆ ಹನ್ನೊಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 25 ಸ್ಥಾನ ಗೆಲ್ಲುವ ಮೂಲಕ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಸಾಧನೆ 17 ರಿಂದ 12ಕ್ಕೆ ಇಳಿದಿದೆ.
ಕಣಿವೆ (ಕಾಶ್ಮೀರ) ಭಾಗದಲ್ಲಿನ ಬಿಜೆಪಿ ಸೋಲನ್ನೇ ಈಗ ಕಾಂಗ್ರೆಸ್ ಮತ್ತು ಮೋದಿ ವಿರೋಧಿಗಳು ವರ್ಣರಂಜಿತವಾಗಿ ಬಿಂಬಿಸುತ್ತಿವೆ. ಇದು ಮೋದಿಗಾದ ಹಿನ್ನಡೆಯೆಂದೇ ವಾಖ್ಯಾನಿಸುತ್ತಿದೆ. ಹನ್ನೊಂದು ಸ್ಥಾನದಿಂದ 25 ಸ್ಥಾನಕ್ಕೆ ಏರಿದ್ದು ಅದು ಹೇಗೆ ಹಿನ್ನಡೆ ಎಂದು ಸಮರ್ಥಿಸಿಕೊಳ್ಳುತ್ತಾರೋ?
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಯಲ್ಲಿ ಮೋದಿ ಅಲೆ ಇರುವುದನ್ನು ಮಾಧ್ಯಮಗಳು ಶೇಕಡಾವಾರು ಅಂಕಿಅಂಶ ಸಹಿತ ಅಂದೇ ವಿವರಿಸಿದ್ದವು, ಒಪ್ಪಿಕೊಂಡಿದ್ದವು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯಾದಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದದ್ದು 'ಅನುಕಂಪದ ಅಲೆ'ಯಿಂದ ಎನ್ನುವುದನ್ನು ಯಾರೂ ಮರೆತಿರಲಾರರು.
ಹಾಗೆಯೇ, ಅಜಾತಶತ್ರು ವಾಜಪೇಯಿ ಅಧಿಕಾರಕ್ಕೆ ಬಂದಾಗಲೂ 'ಅಟಲ್ ಅಲೆ' ಇತ್ತು ಎನ್ನುವುದೂ ಸಾರ್ವಜನಿಕರು ಬಲ್ಲರು. ಹಾಗೆಯೇ, ಈಗ ಸದ್ಯ ದೇಶದಲ್ಲಿ 'ಮೋದಿ ಅಲೆ' ಇದೆ ಎನ್ನುವುದನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಇರುವ ತೊಂದರೆ ಏನು?