ಉತ್ತರಪ್ರದೇಶ ಚುನಾವಣೆ: ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಪ್ರಿಯಾಂಕ?
ದೇಶದ ರಾಜಕಾರಣದಲ್ಲಿ ಉತ್ತರಪ್ರದೇಶಕ್ಕೆ ವಿಶೇಷ ಸ್ಥಾನ. ಪ್ರಮುಖ ಪಕ್ಷಗಳಿಗೂ ಉತ್ತರಪ್ರದೇಶದ ಮೇಲೆ ಹೆಚ್ಚಿನ ಒಲವು, ಯಾಕೆಂದರೆ ಈ ರಾಜ್ಯದ ಫಲಿತಾಂಶ ದೇಶದ ರಾಜಕೀಯದ ಹಣೆಬರಹ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
403 ಸದಸ್ಯರನ್ನು ಹೊಂದಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ 2017ರ ಆದಿಯಲ್ಲಿ ನಡೆಯಲಿದೆ. ನೆಹರೂ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರಪ್ರದೇಶದ 403 ಸದಸ್ಯರ ಅಸೆಂಬ್ಲಿಯಲ್ಲಿ ಸದ್ಯ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ಸಿನ ಬಲ ಕೇವಲ 29.
ಇದನ್ನು ಮೂರಂಕಿಗೆ ದಾಟಿಸಿ, ಅಧಿಕಾರದ ಹೊಸ್ತಿಲಿಗೆ ತರುವುದು ಹೇಗೆ? ಉತ್ತರಪ್ರದೇಶದ ಚುನಾವಣೆಯಲ್ಲಿ ಪಕ್ಷದ ಮರ್ಯಾದೆ ಉಳಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಪ್ರಿಯಾಂಕ ಗಾಂಧಿ ಆಲಿಯಾಸ್ ಪ್ರಿಯಾಂಕ ವಾಧ್ರಾ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇಲ್ಲದಿಲ್ಲ ಎಂದು ಇಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಎತ್ತಿದ ಕೈ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ಅವರಿಗೆ, ಪಕ್ಷದ ಗೆಲುವಿಗೆ ತಂತ್ರ ರೂಪಿಸುವ ಹೊಣೆಯನ್ನು ಈಗಾಗಲೇ ಕಾಂಗ್ರೆಸ್ ವಹಿಸಿದ್ದಾಗಿದೆ, ಹಲವು ಸುತ್ತಿನ ಮಾತುಕತೆಯೂ ಮುಗಿದಾಗಿದೆ, ದೆಹಲಿಯಲ್ಲಿ ಪ್ರಶಾಂತ್ ಗೆ ಕಚೇರಿಯೂ ನೀಡಲಾಗಿದೆ.
ರಾಹುಲ್ ಗಾಂಧಿಗೆ ನೇರವಾಗಿ ರಿಪೋರ್ಟ್ ಮಾಡಲಿರುವ ಪ್ರಶಾಂತ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಪ್ರಿಯಾಂಕ ಗಾಂಧಿ ವಾಧ್ರಾ
ಪ್ರಶಾಂತ್ ಕಿಶೋರ್ ಜೊತೆ ರಾಹುಲ್ ಗಾಂಧಿ ನಡೆಸಿದ ಎರಡು ಸುತ್ತಿನ ಮಾತುಕತೆಯ ಸಂದರ್ಭದಲ್ಲಿ, ಪ್ರಶಾಂತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ತೋರಬೇಕಿದ್ದಲ್ಲಿ ಪ್ರಿಯಾಂಕ ಆಖಾಡಕ್ಕಿಳಿಯುವುದು ಅತ್ಯವಶ್ಯಕ ಎಂದು ಹೇಳಿದ್ದಾರೆಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಶಾಂತ್ ಕಿಶೋರ್
ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಅಭೂತಪೂರ್ವ ಗೆಲುವು ತರುವಲ್ಲಿ ವ್ಯವಸ್ಥಿತ ತಂತ್ರಗಾರಿಕೆ ರೂಪಿಸಿದ್ದ ಪ್ರಶಾಂತ್, ಆನಂತರ ಬಿಹಾರದ ಜವಾಬ್ದಾರಿಯನ್ನು ವಹಿಸಿಕೊಂಡು ಸೈ ಎನಿಸಿಕೊಂಡಿದ್ದರು.
ರಾಹುಲ್ ಗಾಂಧಿಗೆ ರಿಪೋರ್ಟ್
ಈ ವರ್ಷ ನಡೆಯಲಿರುವ ತಮಿಳುನಾಡು ರಾಜ್ಯದ ಜವಾಬ್ದಾರಿಯನ್ನು ಪ್ರಶಾಂತ್ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಶಾಂತ್ ಅವರನ್ನು ಕೈವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಪ್ರಶಾಂತ್ ಉತ್ತರಪ್ರದೇಶ ಚುನಾವಣೆಯ ಎಲ್ಲಾ ಆಗುಹೋಗುಗಳನ್ನು ರಾಹುಲ್ ಗಾಂಧಿಗೆ ರಿಪೋರ್ಟ್ ಮಾಡಲಿದ್ದಾರೆ ಎನ್ನುತ್ತದೆ ಇಕಾನಮಿಕ್ ಟೈಮ್ಸ್ ವರದಿ.
ಜವಾಬ್ದಾರಿ ಒಪ್ಪಿಕೊಂಡ ಪ್ರಶಾಂತ್
ಕಳೆದ ನವೆಂಬರ್ ಹತ್ತೊಂಬತ್ತರಂದೇ ರಾಹುಲ್ ಗಾಂಧಿಯನ್ನು, ಪ್ರಶಾಂತ್ ಭೇಟಿ ಮಾಡಿದ್ದರು. ಆದರೆ ಕಾಂಗ್ರೆಸ್ಸಿನ ಕಾರ್ಯಶೈಲಿ ಪ್ರಶಾಂತ್ ಅವರಿಗೆ ಹಿಡಿಸದೇ ಇದ್ದುದ್ದರಿಂದ ಇವರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಆದರೆ ರಾಹುಲ್ ಗಾಂಧಿ ಜೊತೆ ಮತ್ತೆರಡು ಸುತ್ತಿನ ಮಾತುಕತೆಯ ನಂತರ ಪ್ರಶಾಂತ್ ಈ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಪಂಜಾಬ್ ಮತ್ತು ಉತ್ತರಪ್ರದೇಶ
ಪಂಜಾಬ್ ಮತ್ತು ಉತ್ತರಪ್ರದೇಶದ ಚುನಾವಣೆ ಒಟ್ಟಿಗೆ ನಡೆಯುವ ಸಾಧ್ಯತೆ ಇರುವುದರಿಂದ ಇನ್ನೂರು ಜನರ ಟೀಮ್ ಎರಡೂ ರಾಜ್ಯಗಳಲ್ಲಿ ಕೆಲಸ ಮಾಡಲಿದೆ. ಪ್ರತೀ ಕ್ಷೇತ್ರದ ಅಂಕಿಅಂಶಗಳನ್ನು ಕಲೆಹಾಕಿಕೊಳ್ಳುತ್ತಿದ್ದೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಿಯಾಂಕ Vs ಸ್ಮೃತಿ
ಇತ್ತ, ಬಿಜೆಪಿ ಕೂಡಾ ರಣತಂತ್ರ ರೂಪಿಸಲು ಮುಂದಾಗಿದ್ದು, ಪಕ್ಷದ ಹೊಸ ಫೈರ್ ಬ್ರ್ಯಾಂಡ್ ಸ್ಮೃತಿ ಇರಾನಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ತನ್ನ ಸಿಎಂ ಪ್ರಕಟಿಸಿದ ನಂತರವಷ್ಟೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಲು ಮುಂದಾಗಿದೆ. ಒಟ್ಟಿನಲ್ಲಿ ಬಹುನಿರೀಕ್ಷಿತ ಉತ್ತರಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕ Vs ಸ್ಮೃತಿ ಸ್ಪರ್ಧೆ ಏರ್ಪಡುವ ಸಾಧ್ಯತೆಯಿಲ್ಲದಿಲ್ಲ.