ಮೆಟ್ರೋ ಪಾಲಿಟಿಕ್ಸ್: ಪಿಎಂ ಪೂಜೆ ನಡೆಸುವ ಮುನ್ನ ಕಾಂಗ್ರೆಸ್ ಪೂಜೆ
ಪುಣೆ ಮೆಟ್ರೋ ಕಾಮಗಾರಿಗೆ ಪ್ರಧಾನಿ ಮೋದಿ ಭೂಮಿಪೂಜೆ ಸಲ್ಲಿಸುವ ಮುನ್ನ ಕಾಂಗ್ರೆಸ್ ಪೂಜೆ ಸಲ್ಲಿಸಿ, ಪುಣೆ ಮೆಟ್ರೋ ನಮ್ಮ ಕನಸಿನ ಕೂಸು ಎಂದಿದೆ.
ಪುಣೆ, ಡಿ 25: ಇದು ದೇಶದ ರಾಜಕೀಯ ಮೇಲಾಟಕ್ಕೊಂದು ಸಾಕ್ಷಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿಪೂಜೆ ನಡೆಸುವ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ನಡೆಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಶನಿವಾರ (ಡಿ 24) ಪ್ರಧಾನಿ ಮೆಟ್ರೋ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ್ದರು. ಆದರೆ ಇದಕ್ಕೆ ಒಂದು ದಿನದ ಮೊದಲೇ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿ ರಾಜಕೀಯ ಮಾಡಲು ಯಾವ ವೇದಿಕೆಯಾದರೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.
ಪುಣೆ ಮೆಟ್ರೋ ಎನ್ನುವುದು ಕಾಂಗ್ರೆಸ್ ಪಕ್ಷದ ಕನಸಿನ ಕೂಸು, ಇದರ ಮೇಲೆ ಮೊದಲ ಹಕ್ಕು ನಮಗೆ ಎಂದು ಪೃಥ್ವಿರಾಜ್ ಚೌಹಾಣ್ ಹೇಳಿಕೆ ನೀಡಿದ್ದಾರೆ. ನಗರದ ಸ್ವರಗೇಟ್ ಪ್ರದೇಶದಲ್ಲಿ ಭೂಮಿಗೆ ತೆಂಗಿನಕಾಯಿ ಒಡೆದು, ಕರ್ಪೂರ ಹಾಕಿ ಚೌಹಾಣ್ ಪೂಜೆ ಸಲ್ಲಿಸಿದರು.
ಈ ಪೂಜೆ ಮಾಡುವ ಮೂಲಕ ಬಿಜೆಪಿ ವಿರುದ್ದದ ನಮ್ಮ ಸಾಂಕೇತಿಕ ಪ್ರತಿಭಟನೆಯಿದು. ಮುಂಬೈ ಮತ್ತು ಪುಣೆಯ ನಗರಪಾಲಿಕೆ ಚುನಾವಣೆಯ ಹೊಸ್ತಿಲಲ್ಲಿ ಭೂಮಿಪೂಜೆ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ.
ನಾಗಪುರ ಮೆಟ್ರೋ ಕೆಲಸ ಹಿಂದೆಯೇ ಆರಂಭವಾಗಿದೆ. ಪುಣೆ ಮೆಟ್ರೋ ಕೆಲಸಕ್ಕೆ ಚುನಾವಣೆಯ ಸಮಯದಲ್ಲೇ ಹಣ ಬಿಡುಗಡೆ ಮಾಡಲಾಗಿದೆ ಎನ್ನುವುದು ಚೌಹಾಣ್ ಅವರ ಆರೋಪ.
ಕಾಂಗ್ರೆಸ್ ಮತ್ತು ಎನ್ಸಿಪಿ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದಾಗಲೇ ಮೆಟ್ರೋ ಯೋಜನೆ ಪ್ರಕ್ರಿಯೆ ಆರಂಭಿಸಿದ್ದರೂ, ಸಿಎಂ ದೇವೇಂದ್ರ ಫಡ್ನವೀಸ್ ಮತ್ತೆ ಪ್ರಧಾನಿ ಕೈಯಲ್ಲಿ ಭೂಮಿಪೂಜೆ ನಡೆಸಿ ' ರಾಜಕೀಯ' ಮಾಡುವುದರಲ್ಲಿ ತಾವೇನೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.