ನಕಲಿ ಪಾಸ್ ಪೋರ್ಟ್: ಛೋಟಾ ರಾಜನ್ ಅಪರಾಧಿ ಎಂದ ದೆಹಲಿ ಕೋರ್ಟ್
ನವದೆಹಲಿ, ಏಪ್ರಿಲ್ 24: ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಛೋಟಾ ರಾಜನ್ ಹಾಗೂ ಆತನಿಗೆ ನಕಲಿ ಪಾಸ್ ಪೋರ್ಟ್ ನೀಡಿದ ಮೂವರು ಪಾಸ್ ಪೋರ್ಟ್ ಅಧಿಕಾರಿಗಳನ್ನು ದೆಹಲಿಯ ಪಟಿಯಾಲಾ ಕೋರ್ಟ್ ಅಪರಾಧಿಗಳೆಂದು ಘೋಷಿಸಿದೆ.
ತೀರ್ಪಿನ ಬಗ್ಗೆ ವಾದ, ಪ್ರತಿವಾದಗಳ ವಿಚಾರಣೆಯನ್ನು ಏಪ್ರಿಲ್ 25ರಂದು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
2017ರ ಜನವರಿಯಲ್ಲಿ ಛೋಟಾ ರಾಜನ್ ಹಾಗೂ ಆತನ ಮೂವರು ಸಹಚರರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ, ಈ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ), ಪಾಸ್ ಪೋರ್ಟ್ ಅಧಿಕಾರಿಗಳಾದ ಜಯಶ್ರೀ ರಾಹಟೆ, ದೀಪಕ್ ನಟವರ್ ಲಾಲ್, ಲಲಿತಾ ಲಕ್ಷ್ಮಣ್ ಅವರು ನಕಲಿ ಪಾಸ್ ಪೋರ್ಟ್ ನೀಡಲು ಸಹಕರಿಸಿದ್ದಾರೆಂದು ಆರೋಪಿಸಿತ್ತಲ್ಲದೆ, ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪ ಪಟ್ಟಿಯನ್ನೂ ಸಲ್ಲಿಸಿತ್ತು.
ಈ ಪ್ರಕರಣ ನಡೆದಿದ್ದು 90ರ ದಶಕದಲ್ಲಿ. ಆಗ, ಛೋಟಾ ರಾಜನ್ ಅವರಿಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ ಪೋರ್ಟ್ ನೀಡಲಾಗಿತ್ತು. ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವಾರು ದೇಶಗಳಿಗೆ ಬೇಕಿದ್ದ ಛೋಟಾ ರಾಜನ್ ಗೆ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದರಿಂದಾಗಿ ಆತ ನಕಲಿ ಪಾಸ್ ಪೋರ್ಟ್ ಪಡೆದು ತನಗೆ ಬೇಕಾದಲ್ಲಿಗೆ ಸುತ್ತಾಡಲು ಸಂಚು ರೂಪಿಸಿದ್ದ.