ಹರ್ಯಾಣ ಬಿಜೆಪಿ ಅಧ್ಯಕ್ಷನ ಪುತ್ರನಿಗೆ 2 ದಿನಗಳ ಪೊಲೀಸ್ ಕಸ್ಟಡಿ
ಚಂಡೀಗಢ, ಆಗಸ್ಟ್ 10: ಯುವತಿಯನ್ನು ಮಧ್ಯ ರಾತ್ರಿ ಕಾರಿನಲ್ಲಿ ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಯುವತಿಯನ್ನು ಹಿಂಬಾಲಿಸಿದ್ದು ಹೌದು, ತಪ್ಪೊಪ್ಪಿಕೊಂಡ ವಿಕಾಸ್ ಬರಲಾ
ಇಂದು ಜಿಲ್ಲಾ ನ್ಯಾಯಾಲಯದ ಮುಂದೆ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಷ್ ರನ್ನು ಪೊಲೀಸರು ಹಾಜರು ಪಡಿಸಿದ್ದರು. ಈ ವೇಳೆ ಇಬ್ಬರನ್ನೂ ನ್ಯಾಯಾಧೀಶರು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮುಂದಿನ ವಿಚಾರಣೆಯನ್ನು ಇದೇ ಆಗಸ್ಟ್ 12ಕ್ಕೆ ಮುಂದೂಡಿದ್ದಾರೆ.
ಈ ಹಿಂದೆ ತಾನು ವರ್ಣಿಕಾ ಕುಂದುರನ್ನು ಮಧ್ಯರಾತ್ರಿ ಹಿಂಬಾಲಿಸಿದ್ದು ಹೌದು ಎಂದು ವಿಕಾಸ್ ಬರಲಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು.
ಇನ್ನು ನಿನ್ನೆಯಷ್ಟೇ ವಿಕಾಸ್ ಬರಲಾ ಮತ್ತು ಅವರ ಗೆಳೆಯ ಆಶಿಷ್ ಬರಲಾರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಹಿನ್ನಲೆ
ಆಗಸ್ಟ್ 4ರ ಮಧ್ಯರಾತ್ರಿ ತನ್ನನ್ನು ಕಾರಿನಲ್ಲಿ ಹಿಂಬಾಲಿಸಿ ಬೆದರಿಕೆ ಹಾಕಿದ್ದಲ್ಲದೆ ಅಪಹರಣಕ್ಕೆ ಯತ್ನಿಸಿದ್ದಾಗಿ ಹರಿಯಾಣ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದು ದೂರು ನೀಡಿದ್ದರು.
ಯುವತಿ ಅಪಹರಣ ಯತ್ನ, ಹರ್ಯಾಣ ಬಿಜೆಪಿ ಅಧ್ಯಕ್ಷರ ಪುತ್ರ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಸಾಕ್ಷ್ಯ ಲಭ್ಯವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಸ್.ಯು.ವಿ ಕಾರಿನಲ್ಲಿ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಶ್ ಕುಮಾರ್ ಹರಿಯಾಣದ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದುರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿತ್ತು.
ಬುಧವಾರ ಇಂದು ವಿಚಾರಣೆಗೆ ಹಾಜರಾಗುವಂತೆ ವಿಕಾಸ್ ಬರಲಾಗೆ ಪೊಲೀಸರು ಸಮನ್ಸ್ ನೀಡಲು ಹೋಗಿದ್ದರು. ಸಮನ್ಸ್ ಸ್ವೀಕರಿಸದ ಹಿನ್ನಲೆಯಲ್ಲಿ ಅವರ ಮನೆಯ ಗೇಟಿಗೆ ಸಮನ್ಸ್ ಅಂಟಿಸಿ ಬಂದಿದ್ದರು.
ಎಲ್ಲಾ ಹೈಡ್ರಾಮಗಳ ನಂತರ ಬುಧವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾದ ವಿಕಾಸ್ ಬರಲಾರನ್ನು ಪೊಲೀಸರು ಬಂಧಿಸಿದ್ದರು.