ಕಾಂಗ್ರೆಸ್ ನಾಯಕರ ಭದ್ರತೆ ಕಡಿತಗೊಳಿಸಿದ ಕೇಂದ್ರ ಸರಕಾರ
ನವದೆಹಲಿ, ಜೂನ್ 23: ಒಟ್ಟು 42 ರಾಜಕಾರಣಿಗಳ ಭದ್ರತೆ ಕಡಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಇದರಲ್ಲಿ 15 ಕಾಂಗ್ರೆಸ್ ರಾಜಕಾರಣಿಗಳೂ ಇದ್ದಾರೆ. ಇತ್ತೀಚೆಗೆ ಗೃಹ ಇಲಾಖೆಗಾಗಿ ಸೇನೆ ಭದ್ರತಾ ಪರಿಶೀಲನೆ ನಡೆಸಿ, ಭದ್ರತೆ ಕಡಿತಗೊಳಿಸುವ ಶಿಫಾರಸ್ಸು ಮಾಡಿತ್ತು. ಅದರಂತೆ ಈ ಭದ್ರತೆ ಕಡಿತಗೊಳಿಸಲಾಗಿದೆ.
ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿ ಭದ್ರತೆಯನ್ನು ವೈ+ ನಿಂದ ವೈ ದರ್ಜೆಗೆ ಇಳಿಸಲಾಗಿದೆ. ಇನ್ನು ವೈ ಶ್ರೇಣಿಗೆ ಭದ್ರತಾ ಕಡಿತಗೊಂಡ ಇತರ ನಾಯಕರ ಪಟ್ಟಿಯಲ್ಲಿ ಅಜಯ್ ಮಾಕೇನ್, ಶಶಿ ತರೂರ್, ಮಾಜಿ ಸಂಸದ ವಿಜಯ್ ಇಂದರ್ ಸಿಂಗ್ ಇದ್ದಾರೆ.
ಇದೇ ವೇಳೆ ರಾಜೀವ್ ಶುಕ್ಲಾ, ಗಿರಿಜಾ ವ್ಯಾಸ್, ಆರ್.ಪಿ.ಎನ್ ಸಿಂಗ್, ಪ್ರಿಯ ರಂಜನ್ ದಾಸ್ ಮುನ್ಶಿ, ಬಿಜೆಪಿ ಸಂಸದ ರಾಜ್ ಕುಮಾರ್ ಸೈನಿ ಭದ್ರತೆಯನ್ನು ವೈ ದರ್ಜೆಯಿಂದ ಎಕ್ಸ್ ದರ್ಜೆಗೆ ಇಳಿಸಲಾಗಿದೆ.
ಮಾಜಿ ಕಾಂಗ್ರೆಸ್ ಎಂಎಲ್ ಸಿ ದಿನೇಶ್ ಪ್ರತಾಪ್ ಸಿಂಗ್, ಆಮ್ ಆದ್ಮಿ ಪಕ್ಷದ ಕಪಿಲ್ ಮಿಶ್ರಾ, ಟಿಎಂಸಿ ಸಂಸದ ಶಿಶಿರ್ ಕುಮಾರ್ ಅಧಿಕಾರಿ, ಸುವೆಂದು ಅಧಿಕಾರಿ, ವೈಜ್ಞಾನಿಕ ಸಲಹೆಗಾರ ಎಸ್ ಕೆ ಸಿಕ್ಕಾ, ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್, ಪಿಸಿ ಹಾಲ್ದರ್ ಭದ್ರತೆಯನ್ನು ಸಂಪೂರ್ಣ ಹಿಂಪಡೆಯಲಾಗಿದೆ.
ಇನ್ನು ಆನಂದ್ ಬಜಾರ್ ಪತ್ರಿಕೆಯ ಮಾಜಿ ಸಂಪಾದ ಅವೀಕ್ ಸರ್ಕಾರ್ ಭದ್ರತೆಯನ್ನು ವೈನಿಂದ ಎಕ್ಸ್ ಕೆಟಗರಿಗೆ ಇಳಿಸಲಾಗಿದೆ.