ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಇಬ್ಬರು ಬಲಿ
“ಘಟನೆಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ಹಾಗೂ ಮೂವರು ಗಾಯಗೊಂಡಿದ್ದಾರೆ,” ಎಂದು ರಜೌರಿ ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಮೇ 14: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದೆ. ಪರಿಣಾಮ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ.
7 ಗ್ರಾಮಗಳನ್ನು ಗುರಿಯಾಗಿಸಿ ಪಾಕಿಸ್ತಾನ ರಜೌರಿಯ ಮಜಕೋಟೆ ಮತ್ತು ನೌಶೆರಾ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆಸಿದೆ. ಅಟೋಮ್ಯಾಟಿಕ್ ಗನ್ ಗಳು, ಮೋರ್ಟರ್ ಗಳಿಂದ ಪಾಕಿಸ್ತಾನ ಸೈನಿಕರು ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇಲ್ಲಿನ ಜನ್ಘರ್, ಭವಾನಿ ಮ್ತು ಲಾಮ್ ಬೆಲ್ಟ್ ಗಳ ಮೇಲೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. "ಘಟನೆಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ಹಾಗೂ ಮೂವರು ಗಾಯಗೊಂಡಿದ್ದಾರೆ," ಎಂದು ರಜೌರಿ ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಹೇಳಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರನ್ನು 51 ವರ್ಷದ ತುಫೈಲ್ ಹುಸೇನ್ ಹಾಗೂ ಅವರ ಪುತ್ರಿ 13 ವರ್ಷ ಅಸಿಯಾ ಬಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಸಿಯಾ ತಾಯಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸರಕಾರಿ ವೈದ್ಯಕೀಯ ಕಾಲೇಜು ಜಮ್ಮುವಿಗೆ ದಾಖಲಿಸಲಾಗಿದೆ.
ಇನ್ನು ಸ್ಥಳಕ್ಕೆ ಭಾರತದ ಸೈನಿಕರು ತೆರಳಿದ್ದು ಪ್ರತಿ ದಾಳಿ ನಡೆಸುವಲ್ಲಿ ನಿರತರಾಗಿದ್ದಾರೆ.