ಕೇರಳದ ಸಹಕಾರಿ ಬ್ಯಾಂಕ್ ಗಳಿಂದ 226 ಕೋಟಿ ರು ವಶ!
ಮಲಪ್ಪುರಂ(ಕೇರಳ), ಡಿಸೆಂಬರ್ 23: ಮಲಪ್ಪುರಂ ಸೇರಿದಂತೆ ಕೇರಳದ ಅನೇಕ ಸಹಕಾರಿ ಬ್ಯಾಂಕು ಗಳ ಮೇಲೆ ನಡೆಸಲಾದ ಸಿಬಿಐ ದಾಳಿಯಲ್ಲಿ ಅಪಾರ ಪ್ರಮಾಣವಾದ ಅಕ್ರಮ ನಗದು ಪತ್ತೆಯಾಗಿದೆ. ಸರಿಯಾದ ದಾಖಲೆಗಳಿಲ್ಲದ ಅಕ್ರಮ ನಗದು ಜಪ್ತಿಮಾಡಿಕೊಳ್ಳಲಾಗಿದ್ದು, 226 ಕೋಟಿ ರುಗೂ ಅಧಿಕ ಮೊತ್ತ ಸಿಕ್ಕಿದೆ.
ನವೆಂಬರ್ 8ರ ನೋಟ್ ಬ್ಯಾನ್ ನಂತರ ಮೊದಲ ಐದು ದಿನಗಳ ಅವಧಿಯಲ್ಲೇ ಈ ಬ್ಯಾಂಕ್ನಲ್ಲಿ 169 ಕೋಟಿ ರೂ. ಹಳೆ ನೋಟುಗಳು ಠೇವಣಿ ಇಟ್ಟಿರುವ ಸಂಗತಿ ಪತ್ತೆಯಾಗಿದೆ. ನ.9 ರಿಂದ 14ರ ನಡುವೆ ರಾಜ್ಯದಲ್ಲಿರುವ 54 ಶಾಖೆಗಳಲ್ಲಿ ಈ ಮೊತ್ತದ ಹಣ ಪತ್ತೆಯಾಗಿದೆ. ಈ ಠೇವಣಿಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೊಲ್ಲಂ, ಮಲಪ್ಪುರಂ, ಕೋಯಿಕ್ಕೊಡ್, ಕಣ್ಣೂರ್, ತ್ರಿಸ್ಸೂರ್ ಜಿಲ್ಲೆಗಳ ಜಿಲ್ಲಾ ಸಹಕಾರಿ ಬ್ಯಾಂಕ್ ಗಳ (ಎಂಡಿಸಿಬಿ) ಮೇಲೆ ಹಠಾತ್ ದಾಳಿ ನಡೆಸಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ರಹಿತ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಠೇವಣಿದಾರರಿಗೆ ಸಂಬಂಧಪಟ್ಟ ಎಲ್ಲ ದಾಖಲೆಪತ್ರಗಳನ್ನು ನೀಡುವಂತೆ ಸಿಬಿಐ ಅಧಿಕಾರಿಗಳು ಬ್ಯಾಂಕಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಸಹಕಾರ ಸಚಿವ ಕೆ ಸುರೇಂದ್ರನ್ ಅವರು, ಬ್ಯಾಂಕುಗಳ ಗೊಂದಲಮಯ ನಿಯಮದಿಂದಾಗಿ ಗ್ರಾಹಕರು ಸರಿಯಾದ ಕೆವೈಸಿ ಮಾಹಿತಿ ನೀಡಿಲ್ಲ, ಹೀಗಾಗಿ ಹೆಚ್ಚಿನ ಖಾತೆಗಳಲ್ಲಿನ ಮೊತ್ತಕ್ಕೆ ದಾಖಲೆಗಳಿಲ್ಲ ಎಂದಿದ್ದಾರೆ.