ಕಾವೇರಿ ನ್ಯಾಯಾಧೀಕರಣ ವಿರುದ್ಧದ ಮೇಲ್ಮನವಿ ಸಮರ್ಥನೀಯ
ನವದೆಹಲಿ, ಡಿಸೆಂಬರ್ 09 : ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಸಮರ್ಥನೀಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಈ ಆದೇಶದಿಂದ ಕರ್ನಾಟಕ ನಿರಾಳವಾದಂತಾಗಿದೆ.
ಕಾವೇರಿ ನೀರು ನ್ಯಾಯಾಧೀಕರಣ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ ಎಂದು ಕರ್ನಾಟಕ ಪ್ರತಿಪಾದಿಸುತ್ತಲೇ ಇತ್ತು. ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಸಮರ್ಥನೀಯವಲ್ಲ ಎಂದೇನಾದರೂ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೆ, ನ್ಯಾಯಾಧೀಕರಣ ನೀಡಿರುವ ತೀರ್ಪೇ ಅಂತಿಮವಾಗುತ್ತಿತ್ತು.
ಈ ಮೇಲ್ಮನವಿಗಳ ಮುಂದಿನ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ನಿಗದಿಪಡಿಸಲಾಗಿದೆ. [ಜೀವನದುದ್ದಕ್ಕೂ ಕರ್ನಾಟಕದ ಪಾಲಿಗೆ 'ವಿಲನ್' ಆದ ಜಯಲಲಿತಾ]
ಕಾವೇರಿ ನೀರಿನಲ್ಲಿ ಬಳಸಲು ಲಭ್ಯವಿರುವ 740 ಟಿಎಂಸಿ ನೀರಿನಲ್ಲಿ ಕರ್ನಾಟಕ 270 ಟಿಎಂಸಿ, ತಮಿಳುನಾಡು 419, ಕೇರಳ 30 ಮತ್ತು ಪಾಂಡಿಚೇರಿ 7 ಟಿಎಂಸಿ ನೀರಿಗೆ ಅರ್ಹ ಎಂದು ನ್ಯಾಯಾಧೀಕರಣ ತೀರ್ಪಲ್ಲಿ ಹೇಳಿತ್ತು.
2007ರ ಫೆಬ್ರವರಿ 5ರಂದು ಕಾವೇರಿ ನೀರು ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಕರ್ನಾಟಕ ಮತ್ತು ತಮಿಳುನಾಡುಗಳೆರಡೂ ಪ್ರಶ್ನಿಸಿದ್ದವು. ಆದರೆ, ಈ ತೀರ್ಪು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಮಾನ ಎಂದು ಕೇಂದ್ರ ಸರಕಾರ ತಗಾದೆ ಎತ್ತಿತ್ತು.
ಕರ್ನಾಟಕದ ವಾದವನ್ನು ಪಾಂಡಿಚೇರಿ ಕೂಡ ಸಮರ್ಥಿಸಿಕೊಂಡಿತ್ತು. ಅಂತಾರಾಜ್ಯ ನೀರು ವ್ಯಾಜ್ಯ ಕಾಯ್ದೆಯ ಪ್ರಕಾರ, ಸರ್ವೋಚ್ಚ ನ್ಯಾಯಾಲಯವನ್ನು ಮೇಲ್ಮನವಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ತಮಿಳುನಾಡು ವಾದಿಸಿತ್ತು. [ಕೊಡಗಿನಲ್ಲಿ ಕುಡಿಯಲೂ ಅಯೋಗ್ಯವಾಗಿದೆ ಕಾವೇರಿ ನೀರು!]
ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿರುವ ಕರ್ನಾಟಕ, ಇಷ್ಟು ನೀರು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರು ಸರಬರಾಜಾಗುವ ಕರ್ನಾಟಕದ 6 ನಗರಗಳಿಗೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದೆ. ತಮಿಳುನಾಡು ಕೂಡ, ಕಾವೇರಿ ನೀರಿನ ಅಗತ್ಯವಿರುವ ಜಮೀನನ್ನು 29.7 ಲಕ್ಷ ಎಕರೆಯಿಂದ 24.70 ಲಕ್ಷ ಎಕರೆಗೆ ಇಳಿಸಲಾಗಿದೆ ಎಂದು ಕ್ಯಾತೆ ತೆಗೆದಿದೆ.