ಮಂಡಳಿ ರಚನೆಗೆ ಕೇಂದ್ರದ ವಿರೋಧ: ತಮಿಳುನಾಡು ನಾಯಕರು ಗರಂ
ಚೆನ್ನೈ, ಅ 3: ಕರ್ನಾಟಕದಲ್ಲಿ ರಾಜಕೀಯ ಲಾಭ ಪಡೆಯಲು ನರೇಂದ್ರ ಮೋದಿ ಸರಕಾರ ತಮಿಳುನಾಡಿಗೆ ದ್ರೋಹ ಎಸಗಿದೆ ಎಂದು ತಮಿಳು ಹೋರಾಟಗಾರ, ವಿಸಿಕೆ ಪಕ್ಷದ ಮುಖ್ಯಸ್ಥ ತಿರುಮಾವಲನ್ ಕಿಡಿಕಾರಿದ್ದಾರೆ.
ಸುಪ್ರೀಂಕೋರ್ಟಿಗೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. (ಮೋದಿ ಹಾಗೂ ಗೌಡರಿಗೆ ಥ್ಯಾಂಕ್ಸ್ ಎಂದ ಕರ್ನಾಟಕ)
ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಕೇಂದ್ರ ಸರಕಾರ ಪಕ್ಷಪಾತ ಧೋರಣೆ ತಾಳುತ್ತಿದೆ. ಮಂಡಳಿ ರಚನೆ ಸಾಧ್ಯವಿಲ್ಲ ಎನ್ನುವ ಕೇಂದ್ರದ ನಿರ್ಧಾರದ ಹಿಂದೆ ರಾಜಕೀಯವಿದೆ ಎಂದು ತಿರುಮಾವಲನ್ ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತ ಪಕ್ಷ ಎಐಡಿಎಂಕೆ ಕೂಡಾ ಕೇಂದ್ರದ ನಿರ್ಧಾರಕ್ಕೆ ಸಿಟ್ಟಾಗಿದೆ. ಇದು ಕರ್ನಾಟಕವನ್ನು ಓಲೈಸುವ ನಿರ್ಧಾರವೆಂದು ಪಕ್ಷದ ವಕ್ತಾರೆ ಟೀಕಿಸಿದ್ದಾರೆ.
ಈ ನಡುವೆ, ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ, ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಸ್ಥಿಕೆಯಲ್ಲಿ ಕಾವೇರಿ ವಿಚಾರ ಇತ್ಯರ್ಥಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಬೇಕು ಎನ್ನುವ ಸುಪ್ರೀಂ ನಿರ್ಧಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಂಧಿ ಜಯಂತಿಯಂದು ಪ್ರತಿಕ್ರಿಯಿಸುತ್ತಾ, ದುಡ್ಡು ನಮ್ಮದು, ಕಟ್ಟಿಸಿದ್ದು ನಾವು ಆದರೆ ರಾಜ್ಯದ ಅಣೆಕಟ್ಟುಗಳ ಮೇಲೆ ನಮಗೆ ಅಧಿಕಾರ ಇಲ್ಲ ಎಂದರೆ ಏನರ್ಥ ಎಂದು ಹೇಳಿದ್ದರು.