ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 30 : "ನಿಮಗಿದು ಕಟ್ಟಕಡೆಯ ಅವಕಾಶ. ನ್ಯಾಯಾಂಗದ ಆದೇಶಕ್ಕೆ ತಲೆಬಾಗಿ ಅಕ್ಟೋಬರ್ 1ರಿಂದ 6ರತನಕ ತಮಿಳುನಾಡಿಗೆ ನೀರುಬಿಡಿ. ಇಲ್ಲದಿದ್ದರೆ, ಪರಿಣಾಮವನ್ನು ಎದುರಿಸಿ" ಎಂದು ಸರ್ವೋಚ್ಚ ನ್ಯಾಯಾಲಯ ಕರ್ನಾಟಕಕ್ಕೆ ತಪರಾಕಿ ಕೊಟ್ಟಿದೆ.
ಇದು ನೀರಿಲ್ಲದೆ ಪರಿತಪಿಸುತ್ತಿರುವ ಕರ್ನಾಟಕದ ಜನತೆಗೆ ಸುಪ್ರೀಂ ಕೋರ್ಟ್ ಕೊಟ್ಟಿರುವ ಬಲವಾದ ಗುದ್ದು. ಇದರ ಜೊತೆಗೆ, ಕರ್ನಾಟಕ ಬಲವಾಗಿ ವಿರೋಧಿಸುತ್ತಿದ್ದ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಮೂರು ದಿನಗಳ ಗಡುವು ಕೊಟ್ಟಿರುವುದು. [ಅ.1ರಿಂದ 6ರವರೆಗೆ ಕಾವೇರಿ ನೀರು ಹರಿಸಿ : ಸುಪ್ರೀಂ ಕೋರ್ಟ್]
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿರುವುದು ಕರ್ನಾಟಕದ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಕಾವೇರಿ ಕೊಳ್ಳದಲ್ಲಿರುವ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಯಲ್ಲಿರುವ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳುವುದಾಗಿ ನಿರ್ಣಯ ತೆಗೆದುಕೊಂಡಿದ್ದು ಕರ್ನಾಟಕಕ್ಕೆ ಪ್ರತಿಕೂಲವಾಗಿದೆ.[ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]
ಕರ್ನಾಟಕಕ್ಕೆ ಆಗಿರುವ ಗಾಯಕ್ಕೆ ಕಾರದಪುಡಿ ಉದುರಿಸಿದ್ದು ಹಿರಿಯ ವಕೀಲ ಫಾಲಿ ನಾರಿಮನ್. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವವರೆಗೆ ರಾಜ್ಯದ ಪರ ವಾದಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸದಿರುವುದು ನಿಜಕ್ಕೂ ದುರಾದೃಷ್ಟಕರ. ಕರ್ನಾಟಕ ಭಾರತದ ಒಂದು ಭಾಗ. ನೀವು ಕಾನೂನಿಗೆ ಮತ್ತು ಸಂವಿಧಾನದ 144ನೇ ಅನುಚ್ಛೇದಕ್ಕೆ ತಲೆಬಾಗಲೇಬೇಕು ಎಂದು ನ್ಯಾಯಮೂರ್ತಿಗಳಾದ ದಿಲೀಪ್ ಮಿಶ್ರಾ ಮತ್ತು ಉದಯ್ ಲಲಿತ್ ಅವರು ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 4ರೊಳಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಅಕ್ಟೋಬರ್ 4 ಮತ್ತು 5ರಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ, ಅಕ್ಟೋಬರ್ 6ರಂದು ವರದಿ ನೀಡಬೇಕು ಎಂದೂ ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕರ್ನಾಟಕಕ್ಕೆ ಆಘಾತ!]