ಕಾವೇರಿ : ಕಾಯ್ದಿರಿಸಿದ ತೀರ್ಪು, ಆಕ್ಷೇಪಣೆ ಸಲ್ಲಿಕೆಗೆ ಗಡುವು ನಿಗದಿ
ನವದೆಹಲಿ, ಅಕ್ಟೋಬರ್ 24: ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿರುವುದು ತಿಳಿದಿರುವ ವಿಷಯ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಬುಧವಾರ(ಅಕ್ಟೋಬರ್ 26)ದ ತನಕ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ.
ತ್ರಿಸದಸ್ಯ ಪೀಠಗಳ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತಾವ್, ಖನ್ವಿಲ್ಕರ್ ಅವರನ್ನೊಳಗೊಂಡ ಪೀಠದ ಮುಂದೆ ಸೋಮವಾರದಂದು ಕರ್ನಾಟಕ, ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಅಫಿಡವಿಟ್ ಸಲ್ಲಿಸಿದ್ದಾರೆ
ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಅತ್ಯಂತ ನಿರ್ಣಾಯಕವಾಗಲಿದೆ.
ಈ
ನಡುವೆ
ಅಕ್ಟೋಬರ್
18(ಮಂಗಳವಾರ)
ನಿರ್ದೇಶಿಸಿರುವಂತೆ
ಮುಂದಿನ
ಆದೇಶದವರೆಗೆ
ತಮಿಳುನಾಡಿಗೆ
ಪ್ರತಿದಿನ
2
ಸಾವಿರ
ಕ್ಯೂಸೆಕ್
ನೀರು
ಹರಿಸಬೇಕೆಂದು
ಕರ್ನಾಟಕಕ್ಕೆ
ಸುಪ್ರೀಂಕೋರ್ಟಿನ
ತ್ರಿಸದಸ್ಯ
ಪೀಠ
ಸೂಚನೆ
ನೀಡಿದೆ.
ಮೇಲ್ಮನವಿ ಅರ್ಜಿ ಬಗ್ಗೆ ಆಕ್ಷೇಪ
2007ರ ಫೆಬ್ರವರಿ 5ರಂದು ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪು ತಪ್ಪಾಗಿದೆ ಎಂದು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಾದಿಸಿವೆ. ಆದರೆ, ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಪ್ರಶ್ನಿಸುವಂತಿಲ್ಲ. ಅಂತಾರಾಜ್ಯ ನಡುವಿನ ಜಲ ವಿವಾದವನ್ನು ಕೇಂದ್ರ ಸರ್ಕಾರ ಬಗೆಹರಿಸಬಹುದು ಎಂದು ಎಜಿ ಮುಕುಲ್ ರೋಹ್ಟಗಿ ಹೇಳಿದ್ದಾರೆ.
ನ್ಯಾಯಾಧಿಕರಣ ನೀಡಿರುವ ತೀರ್ಪು ಏನು
ಕಾವೇರಿ ನದಿಯ ಪ್ರಮಾಣ 740 ಟಿಎಂಸಿ ಅಡಿಯಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ, ತಮಿಳುನಾಡಿಗೆ 419 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ 7 ಟಿಎಂಸಿ ಅಡಿ ನೀರು ಜತೆಗೆ 14 ಟಿಎಂಸಿ ಅಡಿ ಪರಿಸರ ಸಂರಕ್ಷಣೆಗೆ ಬಳಕೆ ಮಾಡಿಕೊಳ್ಳಿ ಎಂದು ನ್ಯಾಯಾಧೀಕರಣ ತೀರ್ಪು ನೀಡಿತ್ತು. 2007ರ ಫೆಬ್ರವರಿ 5ರಂದು ನೀಡಿದ ಈ ತೀರ್ಪಿನ ಅಂತಿಮ ವಿಚಾರಣೆ ಅಕ್ಟೋಬರ್ 19, 2016ರಂದು ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ತಾಂತ್ರಿಕ ತಂಡದ ವರದಿ ಮೇಲೆ ಆಕ್ಷೇಪ
ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಮತ್ತು ತಮಿಳುನಾಡು ಜಲಾಶಯಗಳಿಗೆ ಭೇಟಿ ನೀಡಿದ ಕಾವೇರಿ ಉನ್ನತ ತಾಂತ್ರಿಕ ತಂಡ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಆದರೆ, ಮುಂದಿನ ಮೇ ತಿಂಗಳವರೆಗೆ ಕಾವೇರಿ ಜಲಾನಯನಗಳಲ್ಲಿ ಒಳಹರಿವಿನ ಅಂದಾಜು ಲೆಕ್ಕಾಚಾರವು ಸಾಮಾನ್ಯ ಮಳೆ ವರ್ಷದ ಆಧಾರವಾಗಿದೆ ಎಂಬ ಪ್ರಮುಖ ಅಂಶವು ಈ ಆಕ್ಷೇಪಣೆಯಲ್ಲಿದೆ.
ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ
ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಅನ್ವಯ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸುವಂತಿಲ್ಲ. ಇದು ಸಂವಿಧಾನಕ್ಕೆ ಸಂಬಂಧಪಟ್ಟ ವಿಷಯ ಎಂದು ಕೇಂದ್ರ ಸರ್ಕಾರ ವಾದದ ಹಾದಿಯನ್ನು ಬೇರೆಡೆಗೆ ಕರೆದೊಯ್ದಿದೆ. ಸಂವಿಧಾನದ ಆರ್ಟಿಕಲ್ 32, 131, 136 ಹಾಗೂ 262 ಉಲ್ಲೇಖಿಸಿ ವಾದ ಎಜಿ ಮುಕುಲ್ ಮಂಡಿಸಿದ್ದರು. ಈ ಮೂಲಕ ಅಂತಾರಾಜ್ಯ ನದಿ ವಿವಾದ ಬಗೆ ಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಪ್ರತಿಪಾದಿಸಿದರು.