ಯೋಧರಿಗೆ ತಾಳ್ಮೆಯಿಂದಿರಿ ಆಮೇಲೆ ಸಾಯಿರಿ ಎನ್ನಕಾಗುತ್ತಾ, ನೋ..ವೇ..
ಕಾಶ್ಮೀರಿ ದೇಶದ್ರೋಹಿಗಳು ನಮ್ಮ ಯೋಧರ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುತ್ತಿರುವಾಗ, ತಾಳ್ಮೆಯಿಂದಿರಿ ಆಮೇಲೆ ಸಾಯಿರಿ ಎಂದು ಹೇಳಲು ಸಾಧ್ಯವೇ ಎಂದಿದ್ದಾರೆ ಜನರಲ್ ಬಿಪಿನ್ ರಾವತ್.
ನವದೆಹಲಿ, ಮೇ 29 (ಪಿಟಿಐ) : ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟಗಾರನೊಬ್ಬನನ್ನು ಜೀಪಿನ ಮುಂದೆ ಕಟ್ಟಿದ ಘಟನೆಯನ್ನು ಸಮರ್ಥಿಸಿಕೊಂಡಿರುವ ಭಾರತದ ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಈ ಘಟನೆಯನ್ನು ಖಂಡಿಸಿರುವ ಎಲ್ಲರಿಗೂ ಖಡಕ್ ಸಂದೇಶ ರವಾನಿಸಿದ್ದಾರೆ.
ದೇಶದ್ರೋಹಿಗಳು ನಮ್ಮ ಯೋಧರ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುತ್ತಿರುವಾಗ, ತಾಳ್ಮೆಯಿಂದಿರಿ ಆಮೇಲೆ ಸಾಯಿರಿ ಎಂದು ಹೇಳಲು ಸಾಧ್ಯವೇ, ನೋ ವೇ.. ಎಂದಿದ್ದಾರೆ ಜನರಲ್ ಬಿಪಿನ್ ರಾವತ್. (ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನ ಕೊಂದು ಹಾಕಿದ ಯೋಧರು)
ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಕೊಳಕು ಪ್ರತ್ಯೇಕತಾ ಹೋರಾಟ ನಿಯಂತ್ರಣಕ್ಕೆ ಬೇರೆ ದಾರಿ ಹುಡುಕಬೇಕಾಗಿದೆ. ಯೋಧರ ಮೇಲೆ ನಡೆಯುತ್ತಿರುವ ಕಲ್ಲುತೂರಾಟ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎನ್ನುವ ಮೂಲಕ ರಾವತ್, ಮುಂದಿನ ದಿನಗಳಲ್ಲಿ ಆರ್ಮಿ ತಿರುಗಿ ಬೀಳುವ ಎಲ್ಲಾ ಸಾಧ್ಯತೆಯ ಬಗ್ಗೆ ಹೋರಾಟಗಾರರಿಗೆ ಮುನ್ಸೂಚನೆ ನೀಡಿದ್ದಾರೆ.
ಪ್ರತ್ಯೇಕತಾ ಹೋರಾಟಗಾರರು ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುವ ಬದಲು ಗನ್ ತೆಗೆದುಕೊಂಡಿದ್ದೇ ಆಗಿದ್ದಲ್ಲಿ, ನಮ್ಮ ಯೋಧರಿಗೆ ಅವರನ್ನು ನಿಯಂತ್ರಿಸಲು ಸುಲಭವಾಗುತ್ತಿತ್ತು. ಜನರಲ್ ಬಿಪಿನ್ ರಾವತ್ ಈ ಹೇಳಿಕೆ ಮುಂದಿನ ದಿನಗಳಲ್ಲಿ ಸೇನೆ, ಕಾಶ್ಮೀರ ಹೋರಾಟಗಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ ಎನ್ನುವ ಸೂಚನೆಯೆಂದು ಹೇಳಲಾಗುತ್ತಿದೆ.
ಪ್ರತ್ಯೇಕತಾವಾದಿ ಹೋರಾಟಗಾರನನ್ನು ಜೀಪಿನ ಮುಂದೆ ಕಟ್ಟಿದ ಮೇಜರ್ ಗೊಗಾಯಿಗೆ ಪ್ರಶಸ್ತಿ ನೀಡಿದ್ದನ್ನು ಸಮರ್ಥಿಸಿಕೊಂಡ ಜನರಲ್ ರಾವತ್, ಅವರು ಅವರ ಕೆಲಸವನ್ನು ಮಾಡಿದ್ದಾರೆ. ಸೇನೆಯ ಮುಖ್ಯಸ್ಥನಾಗಿ ನನ್ನ ಯೋಧರ ಯೋಗಕ್ಷೇಮ ನನಗೆ ಅತೀ ಪ್ರಮುಖವಾದದ್ದು ಎಂದು ರಾವತ್ ಹೇಳಿದ್ದಾರೆ.
ನಾನು ಯುದ್ದರಂಗದಿಂದ ದೂರವಿರುತ್ತೇನೆ, ಆ ಕ್ಷಣದಲ್ಲಿ ಅಲ್ಲಿ ಏನಾಗುತ್ತಿದೆ ಎನ್ನುವುದು ನನಗೆ ಅರಿವಿರುವುದಿಲ್ಲ, ನನ್ನ ಹುಡುಗರಿಗೆ (ಯೋಧರು), ನಾನು ನಿಮ್ಮ ಜೊತೆಯಿರುತ್ತೇನೆ ಎಂದು ಅವರಿಗೆ ಧೈರ್ಯ ತುಂಬುವ ಕೆಲಸವನ್ನು ನಾನು ಮಾಡುತ್ತೇನೆಂದು ರಾವತ್ ಹೇಳಿದ್ದಾರೆ.