ಜಾತಿ, ಧರ್ಮದ ಹೆಸರಲ್ಲಿ ಮತ ಕೇಳಬಾರದು: ಸುಪ್ರೀಂ
ನವದೆಹಲಿ, ಜನವರಿ 2: ರಾಜಕಾರಣಿಗಳು ಜಾತಿ, ಧಾರ್ಮಿಕ ನಂಬಿಕೆ ಅಥವಾ ಧರ್ಮದ ಹೆಸರಿನಲ್ಲಿ ಚುನಾವಣೆಗಳಲ್ಲಿ ಮತವನ್ನು ಕೇಳಬಾರದು. ಒಂದು ವೇಳೆ ಕೇಳಿದರೆ ಚುನಾವಣೆಯನ್ನು ಕಾನೂನಿಗೆ ವಿರುದ್ಧ ಎಂದು ಘೋಷಿಸುವುದಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶದಲ್ಲಿ ಸೋಮವಾರ ತಿಳಿಸಿದೆ.
1996ರ ಹಿಂದುತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಕೈಗೆತ್ತಿಕೊಂಡಿತ್ತು. ಚುನಾವಣೆ ಎಂಬುದು ಜಾತ್ಯತೀತವಾದಂಥದ್ದು. ಯಾವುದೇ ಅಭ್ಯರ್ಥಿ ನಿಯಮವನ್ನು ಉಲ್ಲಂಘಿಸಿದರೆ ಅನರ್ಹಗೊಳಿಸಲಾಗುವುದು ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.[ಸುಪ್ರೀಂಕೋರ್ಟಿನ ಸಿಜೆಐ ಆಗಿ ಜೆಎಸ್ ಖೇಹರ್ ನೇಮಿಸಿದ ರಾಷ್ಟ್ರಪತಿ]
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್.ವರ್ಮಾ ನೇತೃತ್ವದ ಪೀಠವು, ಹಿಂದುತ್ವ ಎಂಬುದು ಜೀವನ ಕ್ರಮ. ಆದ್ದರಿಂದ ಅದರ ಪ್ರಸ್ತಾವ ಮಾಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅದರೆ ಆ ತೀರ್ಪಿನ ಬಗ್ಗೆ ಮತ್ತೆ ಪ್ರಸ್ತಾವ ಮಾಡುವುದಿಲ್ಲ ಎಂದ ಕೋರ್ಟ್, ಸೋಮವಾರ ನೀಡಿದ ಆದೇಶದಲ್ಲಿ, ಮನುಷ್ಯ ಹಾಗೂ ದೇವರ ಮಧ್ಯದ ಸಂಬಂಧ ವೈಯಕ್ತಿಕವಾದದ್ದು. ಮತ್ತು ಸರಕಾರಗಳು, "ಇಂಥ ವಿಚಾರಗಳಲ್ಲಿ ತಲೆ ತೂರಿಸಬಾರದು" ಎಂದು ಹೇಳಿದೆ.