ಹಿಂದಿ ರಾಷ್ಟ್ರಭಾಷೆಯೆಂದ ವೆಂಕಯ್ಯನ ವಿರುದ್ಧ ಸಿಡಿದೆದ್ದ ಭಾಷಾಪ್ರೇಮಿಗಳು
ಅಹ್ಮದಾಬಾದ್, ಜೂನ್ 24 : ಹಿಂದಿ ಭಾಷೆಯನ್ನು ಭಾರತದ ಪ್ರತಿ ರಾಜ್ಯದ, ಪ್ರತಿ ಪ್ರಜೆಯ ಮೇಲೆ ಹೇರುವ ಕೇಂದ್ರ ಹುನ್ನಾರ ನಡೆಸುತ್ತಿದೆಯಾ? ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಉದುರಿಸಿರುವ ನುಡಿಮುತ್ತುಗಳು ಈ ಸಂಶಯಕ್ಕೆ ಸಾಕಷ್ಟು ಪುಷ್ಟಿಯನ್ನು ನೀಡಿವೆ.
ಸಾಲಮನ್ನಾ ಒಂದು ಫ್ಯಾಶನ್ ಎಂದ ನಾಯ್ಡು ರೈತರ ಕ್ಷಮೆ ಕೇಳಲಿ: ಕಾಂಗ್ರೆಸ್
ಪಾಸ್ಪೋರ್ಟ್ ನಲ್ಲಿ ಇಂಗ್ಲಿಷ್ ಜೊತೆಗೆ ಇನ್ನು ಮುಂದೆ ಹಿಂದಿ ಕೂಡ ಇರುವುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಘೋಷಿಸಿದ ನಂತರ, ವೆಂಕಯ್ಯ ನಾಯ್ಡು ಅವರು, "ಹಿಂದಿ ರಾಷ್ಟ್ರ ಭಾಷೆ, ಇದನ್ನು ಕಲಿಯದೆ ಮುಂದುವರಿಯುವುದು ಅಸಾಧ್ಯ" ಎಂದು ಶನಿವಾರ ಫರ್ಮಾನು ಹೊರಡಿಸಿದ್ದಾರೆ.
ಆಈ ರಾಜ್ಯಗಳಲ್ಲ, ಲವಲೇಶದಷ್ಟೂ ಹಿಂದಿಯ ಅವಶ್ಯಕತೆಯಿಲ್ಲದ ಬೆಂಗಳೂರಿನಲ್ಲಿ, ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳು ರಾರಾಜಿಸುತ್ತಿರುವುದು ಕನ್ನಡವನ್ನು ಆರಾಧಿಸುತ್ತಿರುವ, ಕನ್ನಡಕ್ಕಾಗಿ ಹೋರಾಡುತ್ತಿರುವ ಹೋರಾಟಗಾರರ ಕಣ್ಣು ಕೆಂಪಾಗುವಂತೆ ಮಾಡಿದೆ.
ಕೃಷಿ ಸಾಲ ಮನ್ನಾ ಶೋಕಿಯೇ? ಎಂಥ ಮಾತಾಡ್ತೀರಿ ವೆಂಕಯ್ಯ ನಾಯ್ಡು!
ಕೇಂದ್ರ ನಗರಾಭಿವೃದ್ಧಿ, ಗೃಹ ಮತ್ತು ಬಡತನ ನಿರ್ಮೂಲನ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ 68 ವರ್ಷ ವಯಸ್ಸಿನ, ಆಂಧ್ರಪ್ರದೇಶದ ವೆಂಕಯ್ಯ ನಾಯ್ಡುಗಾರು ಅವರು, ಸಾಬರಮತಿ ಆಶ್ರಮದಲ್ಲಿ ಮಹಾತ್ಮಾ ಗಾಂಧಿಯವರ ಕೃತಿಗಳ 100 ಸಂಪುಟವನ್ನು ಅರ್ಪಿಸಿದ ನಂತರ ಆಡಿರುವ ಮತ್ತಷ್ಟು ಮಾತುಗಳು ಮುಂದಿವೆ.
ನಮ್ಮ ಮಾತೃಭಾಷೆ ನಮ್ಮ ಹೆಗ್ಗುರುತು
ನಮ್ಮ ಮಾತೃಭಾಷೆ ನಮ್ಮ ಹೆಗ್ಗುರುತು. ನಮಗೆ ನಮ್ಮ ಮಾತೃಭಾಷೆಯ ಮೇಲೆ ಗರ್ವವಿರಬೇಕು ಎಂದು ನಿರರ್ಗಳವಾಗಿ ಹಿಂದಿಯಲ್ಲಿ ಮಾತನ್ನೊಪ್ಪಿಸಿದ್ದಾರೆ. ಮುಂದುವರಿಯುತ್ತ, ಆಂಗ್ಲ ಭಾಷೆ ಕಲಿಕಲಿಯುತ್ತ ಆ ಭಾಷೆ ನಮ್ಮ ಮನಸ್ಸಿನಲ್ಲಿ ಬಲವಾಗಿ ಬೇರೂರಿದೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ.
ಹಿಂದಿಯಿಲ್ಲದೆ ಮುನ್ನಡೆಯುವುದು ಅಸಂಭವ
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದಿ ನಮ್ಮ ರಾಷ್ಟ್ರಭಾಷೆ. ಹಿಂದಿಯ ಭಾಷಾ ಬೆಂಬಲವಿಲ್ಲದೆ ದೇಶದಲ್ಲಿ ಮುನ್ನಡೆಯುವುದು ಅಸಂಭವ ಎಂದು ಹೇಳಿರುವುದು, ಅವರೇ ಹೇಳಿದಂತೆ ಮಾತೃಭಾಷೆಯ ಮೇಲೆ ಅಭಿಮಾನವುಳ್ಳ ಜನರ ಆಕ್ರೋಶಕ್ಕೆ ಕಾರಣವಾಗಿವೆ.
ಏನಿದು ವೆಂಕಯ್ಯ ಅವರ ಅಸಂಬದ್ಧ ಮಾತುಗಳು?
ಇವರ ಮಾತನ್ನು ಕೇಳಿ ತೆಲುಗು ಮಾತನಾಡುವ ಜನರಾದರೂ ಏಕೆ ತಿರುಗಿಬಿದ್ದಿಲ್ಲ? ಇಂಥ ಅಸಂಬದ್ಧವಾಗಿ ಮಾತನಾಡಿ ವೆಂಕಯ್ಯ ಹೇಗೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಒಬ್ಬರು ಹೇಳಿದ್ದರೆ, ವೆಂಕಯ್ಯ ದಕ್ಷಿಣ ಭಾರತದ ದೇಶದ್ರೋಹಿ ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದೀರಿ?
ವೆಂಕಯ್ಯ ನಾಯ್ಡು ಅವರೆ ಅಸಲಿ ಸಂಗತಿಗಳ ಬಗ್ಗೆ ಮಾತನಾಡಿ. ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲಿಯೂ ಯಾರೂ ಘೋಷಿಸಿಲ್ಲ ಅಥವಾ ದಾಖಲಿಸಿಲ್ಲ. ನೀವು ಯಾವ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದೀರಿ? ಕನಿಷ್ಠಪಕ್ಷ ಭಾರತದಲ್ಲಂತೂ ಹೀಗೆ ಎಲ್ಲೂ ದಾಖಲಾಗಿಲ್ಲ ಎಂದು ಕಾರ್ತಿಕ್ ಎಂಬುವವರು ಮಾತಿನ ರುಚಿ ತೋರಿಸಿದ್ದಾರೆ.
ವೆಂಕಯ್ಯನವರಿಗೆ ತ್ವರಿತವಾಗಿ ವಿಶ್ರಾಂತಿ ಬೇಕಾಗಿದೆ
ವೆಂಕಯ್ಯ ನಾಯ್ಡು ಅವರು ತಮ್ಮ ಮಾನಸಿಕ ಸಮತೋಲನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಅವರಿಗೆ ತ್ವರಿತವಾಗಿ ವಿಶ್ರಾಂತಿ ಬೇಕಾಗಿದೆ. ಅವರಿಗೆ ತಮ್ಮ ಸ್ವಂತ ನೆಲವಾದ ಆಂಧ್ರಪ್ರದೇಶದಲ್ಲಿ ಹಿಂದಿ ಭಾಷೆಯನ್ನು ಹೇರುವ ಧೈರ್ಯವಿದೆಯೆ ಎಂದು ಸಚಿನ್ ಎಂಬುವವರು ವೆಂಕಯ್ಯ ಅವರನ್ನು ಕೆಣಕಿದ್ದಾರೆ.
ಹಿಂದಿ ವಿರುದ್ಧ ಕನ್ನಡ ನಾಡಲ್ಲಿ ಉಗ್ರ ಹೋರಾಟ
ಈ ನಡುವೆ ಕನ್ನಡ ನಾಡಿನಲ್ಲಿ ಹಿಂದಿ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಹಿಂದಿ ಹೇರಿಕೆಯ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕನ್ನಡಿಗರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸದ್ಯದಲ್ಲೇ ಚುನಾವಣೆಯೂ ಬರುತ್ತಿರುವುದರಿಂದ, ಈ ಕೇಂದ್ರ ಸಚಿವರು ಭಾಷೆಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಮಾತನಾಡುವುದು ಒಳಿತು.