5 ರಾಜ್ಯಗಳ ಚುನಾವಣೆ, ಕೇಂದ್ರ ಬಜೆಟ್ ಮುಂದೆ ಹೋಗಬಹುದಾ?
ನವದೆಹಲಿ, ಜನವರಿ 5: ಮಾರ್ಚ್ 8ರವರೆಗೆ ಕೇಂದ್ರ ಬಜೆಟ್ ಮಂಡನೆಯನ್ನು ಮುಂದಕ್ಕೆ ಹಾಕಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಬುಧವಾರವಷ್ಟೇ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಚುನಾವಣೆ ಆಯೋಗ ಈ ವಿಚಾರವಾಗಿ ನಿರ್ಧರಿಸಬೇಕಾಗಿದೆ.
ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ್, ಮಣಿಪುರ ಹಾಗೂ ಪಂಜಾಬ್ ನಲ್ಲಿ ಚುನಾವಣೆಗೆ ದಿನಾಂಕ ಘೋಷಣೆ ಮಾಡಿಯಾಗಿದೆ. ವಿರೋಧ ಪಕ್ಷಗಳೇನೋ ಒತ್ತಾಯ ಮಾಡಿರಬಹುದು. ಆದರೆ ಬಜೆಟ್ ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದಕ್ಕೆ ಹಾಕೋದಿಕ್ಕೆ ಅಗಲ್ಲ ಎನ್ನುತ್ತಾರೆ ಕಾನೂನು ತಜ್ಞರು. ಆದರೆ ಬಜೆಟ್ ನಲ್ಲಿ ಆ ಐದು ರಾಜ್ಯಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ತಾತ್ಕಾಲಿಕವಾಗಿ ಘೋಷಿಸದೆ ಇದ್ದರೆ ಆಯಿತು ಎನ್ನುತ್ತಾರೆ.[ಉತ್ತರಪ್ರದೇಶ ಚುನಾವಣೆ: ಹೊರಬಿದ್ದ ಕುತೂಹಲಕಾರಿ ಸಮೀಕ್ಷೆ ಫಲಿತಾಂಶ]
ಈಗಾಗಲೇ ವಿಪಕ್ಷಗಳು ಈ ಬಗ್ಗೆ ರಾಷ್ಟ್ರಪತಿ ಹಾಗೂ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿವೆ. ಸಂವಿಧಾನ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಈ ಬಗ್ಗೆ ಚುನಾವಣೆ ಆಯೋಗ ನಿರ್ಧಾರ ಮಾಡಬೇಕಿದೆ. ಈಗಾಗಲೇ ನಿಗದಿಯಾಗಿರುವಂತೆ ಫೆಬ್ರವರಿ 1ರಂದೇ ಬಜೆಟ್ ಮಂಡಿಸಬೇಕೆ ಅಥವಾ ಕೊನೆ ಹಂತದ ಚುನಾವಣೆ ನಡೆಯುವ ಮಾರ್ಚ್ 1ರವರೆಗೆ ಮುಂದಕ್ಕೆ ಹಾಕಬೇಕೆ ಎಂಬುದನ್ನು ಕಾದುನೋಡಬೇಕಿದೆ.
ಈ ಮಧ್ಯೆ ಸರಕಾರವೇ ಹೇಳಿದೇ ಇದು ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದೂಡಲು ಸಾಧ್ಯವಿಲ್ಲ. ಈ ಹಿಂದೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಜೆಟ್ ಮುಂದೂಡಲಾಗಿದೆಯಾ ಎಂಬುದನ್ನು ವಿಪಕ್ಷಗಳು ನೋಡುತ್ತಿವೆ. ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ.[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]
ವಿರೋಧ ಪಕ್ಷಗಳ ವಾದವೇನೆಂದರೆ, ಬಜೆಟ್ ಘೋಷಣೆಯಿಂದ ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲವಾಗುತ್ತದೆ. ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಆದರೆ ಕಾನೂನು ತಜ್ಞರ ಪ್ರಕಾರ, ಚುನಾವಣೆ ಘೋಷಣೆಯಾದ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮಾತ್ರ ತಾತ್ಕಾಲಿಕವಾಗಿ ಮಂಡಿಸದಂತೆ ಸರಕಾರಕ್ಕೆ ಚುನಾವಣೆ ಆಯೋಗ ಸಲಹೆ ಮಾಡಬಹುದು.