ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನ ಕೊಂದು ಹಾಕಿದ ಯೋಧರು
ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ, ಬುರ್ಹಾನ್ ವನಿ ಆಪ್ತ ಸಬ್ಜರ್ ಭಟ್ ಸೇರಿದಂತೆ 8 ಮಂದಿ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ.
ಶ್ರೀನಗರ, ಮೇ 27: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ, ಬುರ್ಹಾನ್ ವನಿ ಆಪ್ತ ಸಬ್ಜರ್ ಭಟ್ ಸೇರಿದಂತೆ 8 ಮಂದಿ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಮುಂದಾಳತ್ವ ವಹಿಸಿಕೊಂಡಿದ್ದ ಸಬ್ಜರ್ ವಯಸ್ಸು ಇನ್ನೂ 21 ವರ್ಷ ಮಾತ್ರ. ಚಂದೀಗಢದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿರುವ ಸಬ್ಜರ್, ವನಿ ಸಾವಿನ ನಂತರ ಹಿಜ್ಬುಲ್ ಸಂಘಟನೆಯ ಮುಖಂಡನಾಗಿ ಗುರುತಿಸಿಕೊಂಡಿದ್ದ.
ದಕ್ಷಿಣ ಕಾಶ್ಮೀರದಲ್ಲಿ 2016ರಲ್ಲಿ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ಬುರ್ಹಾನ್ ವನಿಯನ್ನು ಹತ್ಯೆ ಮಾಡಲಾಗಿತ್ತು. ಕಾಶ್ಮೀರದ ಯುವಕರಿಗೆ ಬಂದೂಕು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದ ಬುರ್ಹಾನ್ ತಲೆಗೆ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.[ಬಾಂಗ್ಲಾ ದಾಳಿ: ಸ್ನೇಹಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುಸೇನ್]
15ನೇ ವಯಸ್ಸಿನಲ್ಲಿಯೇ ಉಗ್ರ ಸಂಘಟನೆ ಸೇರಿದ್ದ ಬುರ್ಹಾನ್ ಬಹು ಬೇಗನೆ ಕಮಾಂಡರ್ ಆಗಿದ್ದ. ಉಗ್ರ ಸಂಘಟನೆ ಸೇರಿದ ಮೊದಲ ವಿದ್ಯಾವಂತ ಯುವಕ ಎಂಬ ಹಣೆಪಟ್ಟಿಯನ್ನು ಈತ ಹೊಂದಿದ್ದ. ಕಾಶ್ಮೀರದ ಯುವಕರು ಬಂದೂಕು ಹಿಡಿಯಿರಿ ಎಂದು ಆತ ಕರೆ ಕೊಟ್ಟಿದ್ದ. ಅಲ್ ಖೈದಾ, ಐಎಸ್ ಐಎಸ್ ಸಂಘಟನೆಗಳ ನಾಯಕರಂತೆ ಸಂಘಟನೆಯ ಪ್ರಚಾರಕ್ಕೆ ಈತ ಸಾಮಾಜಿಕ ಜಾಲ ತಾಣಗಳನ್ನು ಬಳಸುತ್ತಿದ್ದ
ಇದೇ ಮಾರ್ಗದಲ್ಲಿ ಸಬ್ಜರ್ ಭಟ್ ಕೂಡಾ ಸಾಗಿದ್ದ, ಚಂಡೀಗಢದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸಬ್ಜರ್ ಗೆ ಹಿಜ್ಬುಲ್ ನ ಪರಿಚಯ ಮಾಡಿಸಿದ್ದು ಬುರ್ಹಾನ್ ನ ಸೋದರ ಖಾಲೀದ್. ಖಾಲೀದ್ ಹಾಗೂ ಬುರ್ಹಾನ್ ಹತ್ಯೆಯಾದ ಎರಡು ದಿನಗಳ ಬಳಿಕ ಜುಲೈ 10, 2016ರಂದು ಸಭ್ಜರ್ ನನ್ನು ಸಂಘಟನೆಯ ಮುಖ್ಯಸ್ಥನಾಗಿ ಹಂಗಾಮಿ ನಾಯಕ ಸೈಯದ್ ಸಲಾವುದ್ದೀನ್ ಘೋಷಿಸಿದ್ದರು. ಈಗ ಮೇ 27ರಂದು ಸಬ್ಜರ್ ನನ್ನು ಭಾರತೀಯ ಯೋಧರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದಾರೆ.