ಆಹಾರದ ಅವ್ಯವಸ್ಥೆ ಪ್ರಶ್ನಿಸಿದ್ದ ತೇಜ್ ಬಹದ್ದೂರ್ ಸೇನೆಯಿಂದ ಔಟ್
ಹಲವು ತಿಂಗಳುಗಳ ಹಿಂದೆ ತೇಜ್ ಬಹದ್ದೂರ್ ಯಾದವ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದರು. ಇದರಲ್ಲಿ ಸೈನಿಕರಿಗೆ ಪೂರೈಸಲಾಗುತ್ತಿರುವ ಆಹಾರದ ಬಗ್ಗೆ ತೇಜ್ ಬಹದ್ದೂರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ನವದೆಹಲಿ, ಏಪ್ರಿಲ್ 19: ಆಹಾರದ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಬಿಎಸ್ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ರನ್ನು ಸೇನೆ (ಬಿಎಸ್ಎಫ್) ಕೆಲಸದಿಂದ ಕಿತ್ತೊಗೆದಿದೆ.
ಹಲವು ತಿಂಗಳುಗಳ ಹಿಂದೆ ತೇಜ್ ಬಹದ್ದೂರ್ ಯಾದವ್ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಸೈನಿಕರಿಗೆ ಪೂರೈಸಲಾಗುತ್ತಿರುವ ಆಹಾರದ ಬಗ್ಗೆ ತೇಜ್ ಬಹದ್ದೂರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ತನ್ನನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೂ ಮನವಿಯನ್ನು ಸಲ್ಲಿಸಿದ್ದರು ತೇಜ್ ಬಹದ್ದೂರ್.['ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ]
ಮತ್ತೊಂದು ವಿಡಿಯೋದಲ್ಲಿ ತಾನು ಭ್ರಷ್ಟಾಚಾರವನ್ನು ಬಯಲಿಗೆಳಿದಿದ್ದಕ್ಕಾಗಿ ತನಗೆ ಮಾನಸಿಕ ಹಿಂಸೆಯ ನೀಡಲಾಗುತ್ತಿರುವ ಬಗ್ಗೆಯೂ ತೇಜ್ ಬಹದ್ದೂರ್ ಪ್ರಸ್ತಾಪಿಸಿದ್ದರು. ಜತೆಗೆ ತನ್ನ ಫೋನ್ ಕಿತ್ತುಕೊಂಡಿದ್ದಾರೆ ಎಂದು ತೇಜ್ ಬಹದ್ದೂರ್ ಹೇಳಿದ್ದರು.
ಇದಾದ ನಂತರ ತೇಜ್ ಬಹದ್ದೂರ್ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಜ್ ಬಹದ್ದೂರ್ ಗೆ ಇರುವ ಪಾಕಿಸ್ತಾನಿ ಗೆಳೆಯರ ಬಗ್ಗೆಯೂ ಹದ್ದಿನ ಕಣ್ಣಿಡಲಾಗಿತ್ತು. ಆದರೆ ಇದನ್ನು ನಿರಾಕರಿಸಿದ್ದ ತೇಜ್ ಬಹದ್ದೂರ್ ತನ್ನ ಫೋನನ್ನು ಕಿತ್ತುಕೊಂಡ ನಂತರ ತಿರುಚಲಾಗಿದೆ ಎಂದು ಹೇಳಿದ್ದರು.[ನನ್ನ ಗಂಡನನ್ನು ಹುಡುಕಿಕೊಡಿ.. ತೇಜ್ ಬಹದ್ದೂರ್ ಪತ್ನಿಯ ಅಳಲು]
ಜತೆಗೆ ತೇಜ್ ಬಹದ್ದೂರ್ ಯಾದವ್ ರ ಸ್ವಯಂ ನಿವೃತ್ತಿ ಅರ್ಜಿಯನ್ನೂ ಕ್ಯಾನ್ಸಲ್ ಮಾಡಲಾಗಿತ್ತು. ಇದಾದ ನಂತರ ತೇಜ್ ಬಹದ್ದೂರ್ ಸಾವನ್ನಪ್ಪಿದ್ದಾರೆ ಎಂಬ ವದಂತಿಗಳೆಲ್ಲಾ ಹರಿದಾಡಿತ್ತು. ಆದರೆ ಇದೀಗ ಕೊನೆಗೂ ತೇಜ್ ಬಹದ್ದೂರ್ ರನ್ನು ಸೇನೆಯಿಂದ ಕಿತ್ತೊಗೆಯಲಾಗಿದೆ.