ಕಪ್ಪುಹಣ ಭಾರತವನ್ನು ಕಾಪಾಡಿದೆ: ಅಖಿಲೇಶ್ ಯಾದವ್!
ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಕಪ್ಪುಹಣ ಭಾರತವನ್ನು ಕಾಪಾಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲಖನೌ, ನವೆಂಬರ್, 15: ನೋಟು ನಿಷೇಧದ ನಂತರ ದೇಶದಾದ್ಯಂತ ಕಪ್ಪು ಹಣದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತ್ರ ಕಪ್ಪು ಹಣದ ಪರ ಬ್ಯಾಂಟಿಂಗ್ ಮಾಡಿದ್ದಾರೆ.
ಕಪ್ಪು ಹಣ ಸಂಗ್ರಹಿಸಿಕೊಳ್ಳುವುದನ್ನು ಸಮರ್ಥಿಸಿ ಮಾತನಾಡಿರುವ ಅವರು ಜಾಗತಿಕ ಹಣದ ಮುಗ್ಗಟ್ಟು ಎದುರಿಸಲು ಕಪ್ಪು ಹಣ ಸಹಾಯ ಮಾಡಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಇಲ್ಲಿ ಏರ್ಪಡಿಸಲಾಗಿದ್ದ ಇಂಡೋ-ಮಯನ್ಮಾರ್ ಕಾರ್ ಜಾಥಾಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
"ಕಪ್ಪು ಹಣದ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ವಿಶ್ವದಾದ್ಯಂತ ಹಣದ ಮುಗ್ಗಟ್ಟು ಎದುರಾದ ಸಂದರ್ಭದಲ್ಲಿ ಭಾರತ ಮಾತ್ರ ಆರ್ಥಿಕ ಬಿಕ್ಕಟ್ಟಿನ ಬಲೆಗೆ ಸಿಲುಕಲಿಲ್ಲ.[ಬಿಳಿ ಹಣದವರ ಬೆರಳಿಗೆ, ಕಾಳಧನ ಇರುವವರ ಮುಖಕ್ಕೆ ಮಸಿ!]
ಭಾರತದಲ್ಲಿ ಅತಿ ಹೆಚ್ಚು ಕಪ್ಪು ಹಣ ಇದ್ದುದರಿಂದಲೇ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ" ಎಂದು ಅವರು ಹೇಳಿದರು.
ಗರಿಷ್ಠ ಮೌಲ್ಯದ ನೋಟುಗಳ ನಿಷೇಧದ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಆನಂತರ ಬೇರೆಯದೇ ರೀತಿ ಹೇಳಿಕೆ ನೀಡಿದರು"ನಾನು ಸಹ ಕಪ್ಪು ಹಣದ ವಿರೋಧಿ, ಆ ರೀತಿಯ ಹಣ ನನಗೂ ಬೇಡ" ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು ಸರ್ಕಾರದ ಈ ಕ್ರಮದಿಂದ ಹಲವು ಜನಸಾಮಾನ್ಯರು ಯಾತನೆ ಅನುಭವಿಸುವಂತಾಗಿದೆ ಎಂದು ಹೇಳಿದರು. ಕಪ್ಪುಹಣದ ನಿರ್ಮೂಲನೆಗಾಗಿ ನೋಟುಗಳನ್ನು ನಿಷೇಧಿಸಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
500ರೂ. ಮತ್ತು 1000ರೂ. ನೋಟುಗಳ ನಿಷೇಧದಿಂದ ಕಾಳಧನಿಕರಿಗೆ ಯಾವುದೇ ತೊಂದರೆ ಆಗಿಲ್ಲ, ಅವರು 2000ರೂ. ನೋಟಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.