ಅಶುಭ ಶುಕ್ರವಾರ : ದೇಶಾದ್ಯಂತ 30ಕ್ಕೂ ಹೆಚ್ಚು ಸಾವು
ನವದೆಹಲಿ, ಡಿಸೆಂಬರ್ 30 : ಭಾರತದ ಪಾಲಿಗೆ ಶುಕ್ರವಾರ ಅಶುಭವಾಗಿ ಪರಿಣಮಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸಾಲುಸಾಲು ದುರ್ಘಟನೆಗಳು ಸಂಭವಿಸಿದ್ದು, ವಿವಿಧ ಘಟನೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಜಾರ್ಖಂಡ್ ಕಲ್ಲಿದ್ದಲು ಗಣಿ : ಜಾರ್ಖಂಡ್ನ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ನ ಕಲ್ಲಿದ್ದಲು ಗಣಿಯಲ್ಲಿ ಮಣ್ಣು ಕುಸಿದ ಪರಿಣಾಮವಾಗಿ ಕನಿಷ್ಠಪಕ್ಷ 10 ಜನರು ಅಸುನೀಗಿದ್ದು, ಇನ್ನೂ ಕೆಲವರು ಸಿಲುಕಿರಬಹುದೆಂದು ಅಂದಾಜಿಸಲಾಗಿದೆ. ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. [ಜಾರ್ಖಂಡ್ ಕಲ್ಲಿದ್ದಲು ಗಣಿ ದುರಂತ]
ಪುಣೆಯಲ್ಲಿ ಅಗ್ನಿ ಅವಘಡ : ಪುಣೆಯ ಬೇಕ್ಸ್ ಅಂಡ್ ಕೇಕ್ಸ್ ಅಂಗಡಿಯ ನೆಲಮಾಳಿಗೆಯಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ 6 ಮಂದಿ ಸಾವಿಗೀಡಾಗಿದ್ದಾರೆ. ಕೆಲಸಗಾರರು ಗುರುವಾರ ರಾತ್ರಿ ಕೆಲಸ ಮಾಡಿ ಅಲ್ಲಿಯೇ ಮಲಗಿದ್ದರು. ಆದರೆ ಹೊರಗಡೆಯಿಂದ ಬೀಗ ಹಾಕಿದ ಕಾರಣ ಒಳಗೆಯೇ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. [ಪುಣೆ ಬೇಕರಿಯಲ್ಲಿ ಅಗ್ನಿಅವಘಡ, 6 ಮಂದಿ ಸಾವು]
ಗೋಧ್ರಾದಲ್ಲಿ ಭಾರೀ ಅಪಘಾತ : ಗುಜರಾತ್ ನ ಗೋಧ್ರಾದಲ್ಲಿ ಗ್ರಾಮ ಪಂಚಾಯತ್ ವಿಜಯಿಯ ಮೆರವಣಿಗೆಯ ಮೇಲೆ ಟೆಂಪೋ ಹಾಯ್ದಿದ್ದರಿಂದ 5 ಜನರು ಸಾವಿಗೀಡಾಗಿದ್ದು, 7 ಜನ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.