ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿ: ಅಮಿತ್ ಶಾ
ಬೆಂಗಳೂರು, ಜು. 05: 'ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೆ ಬಿಜೆಪಿಯೇ ಅಧಿಕಾರದಲ್ಲಿರಬೇಕು. ಹಾಗೆ ಮಾಡುವುದು ನಿಮ್ಮ ಮೇಲಿದೆ' ಹೀಗೆಂದು ಕಾರ್ಯಕರ್ತರಿಗೆ ಕರೆ ನೀಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.
ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕರ್ನಾಟಕವನ್ನು ಹೆಬ್ಬಾಗಿಲು ಮಾಡಿಕೊಂಡು ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ದಕ್ಷಿಣ ಭಾರತದ ಬಿಜೆಪಿ ಮಹಾಸಂಪರ್ಕ ಅಭಿಯಾನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, 2015ರ ವೇಳೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ತೆರೆಯಲಾಗುವುದು ಎಂದು ಶಾ ತಿಳಿಸಿದರು.[ನೆಹರೂ ಅಜ್ಜ ಮುಸ್ಲಿಂ: ನರೇಂದ್ರ ಮೋದಿ ಮಾತನಾಡಲಿ]
ಪಾಂಡಿಚೆರಿ, ತಮಿಳುನಾಡು, ಕೇರಳ, ಲಕ್ಷದ್ವೀಪ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಕರ್ನಾಟಕ ಹಾಗೂ ರಾಜ್ಯ ಬಿಜೆಪಿ ಪದಾಧಿಕಾರಿಗಳು ಮಹಾಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಬಿಜೆಪಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ, ಅನಂತ ಕುಮಾರ್, ಪ್ರಹ್ಲಾದ್ ಜೋಷಿ, ಸದಾನಂದ ಗೌಡ ಸೇರಿದಂತೆ ಅನೇಕರು ಹಾಜರಿದ್ದರು.
3 ಹಂತದ ಕಾರ್ಯಕ್ರಮ
ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ 3 ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸದಸ್ಯತ್ವ ನೋಂದಣಿಯನ್ನು ಈಗಾಗಲೇ ಮಾಡಲಾಗಿದೆ. ಕರ್ನಾಟದಲ್ಲಿ 88 ಲಕ್ಷ ಮಂದಿಯನ್ನು ಸದಸ್ಯರನ್ನಾಗಿ ದೇಶದಲ್ಲಿ 11 ಕೋಟಿಗೂ ಹೆಚ್ಚು ಹೊಸ ಸದಸ್ಯರು ಪಕ್ಷ ಸೇರಿದ್ದು ಮುಂದೆ ಸಂಪರ್ಕಕ್ಕೆ ಕರೆತರಲಾಗುವುದು ಎಂದು ಶಾ ತಿಳಿಸಿದರು.
ಪ್ರದೇಶವಾರು ಪ್ರಗತಿ ವಿವರ
ದಕ್ಷಿಣ ಭಾರತದ ಬಿಜೆಪಿ ಪ್ರತಿನಿಧಿಗಳು ಅಭಿಯಾನದಲ್ಲಿ ಸದಸ್ಯತ್ವ ನೋಂದಣಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪ್ರಗತಿಯ ವಿವರವನ್ನು ಶಾ ಎದುರು ಮಂಡಿಸಿದರು.
12 ತಿಂಗಳಲ್ಲಿ 24 ಯೋಜನೆ
ಕೇಂದ್ರ ಸರ್ಕಾರ 12 ತಿಂಗಳಲ್ಲಿ 24 ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. 14 ಯೋಜನೆಗಳಲ್ಲಿ ಕೇಂದ್ರದೊಂದಿಗೆ ಕಾರ್ಯಕರ್ತರು ಕೈ ಜೋಡಿಸಬೇಕು. ಈ ಬಗ್ಗೆ ನಿರಾಶದಾಯಕ ಪ್ರತಿಕ್ರಿಯೆ ಬರಬಾರದು ಎಂದರು. ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಎಂದು ಶಾ ತಿಳಿಸಿದರು.
ಜನಾಭಿಪ್ರಾಯ ಮುಖ್ಯ
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಡಿ. ಜನರ ಭಾವನೆಗಳನ್ನು ಪ್ರತಿದಿನ ಅರ್ಥಮಾಡಿಕೊಳ್ಳಿ. ಜನರೊಂದಿಗೆ ಬೆರೆತರೆ ಮಾತ್ರ ಅವರ ಸಮಸ್ಯೆ ಗಳು ಅರ್ಥವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪಕ್ಷ ಸಂಘಟನೆಗೆ ಮೊದಲ ಆದ್ಯತೆ
ದಕ್ಷಿಣ ಭಾರತ ರಾಜ್ಯಗಳಲ್ಲಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುವುದು. ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳೇ ಇದಕ್ಕೆ ಅಡಿಪಾಯವಾಗಲಿದೆ ಎಂದು ಶಾ ಹೇಳಿದರು.