ಗುಜರಾತ್ ಮುಂದಿನ ಸಿಎಂ ಅಮಿತ್ ಶಾ ಅಲ್ವಂತೆ!, ಮತ್ತ್ಯಾರು?
ನವದೆಹಲಿ, ಆಗಸ್ಟ್ 03: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಆನಂದಿ ಬೆನ್ ಪಟೇಲ್ ಅವರು ನೀಡಿದ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ಬುಧವಾರ ಸ್ವೀಕರಿಸಿದೆ. ಈ ನಡುವೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸುದ್ದಿಯನ್ನು ಬಿಜೆಪಿ ತಳ್ಳಿಹಾಕಿದೆ.
ಬಿಜೆಪಿ ಹಿರಿಯ ನಾಯಕರು ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ಸೇರಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.
ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಶಾ ಅವರು ಯಾವುದೇ ಕಾರಣಕ್ಕೂ ಮುಂದಿನ ಮುಖ್ಯಮಂತ್ರಿಯಾಗುವುದಿಲ್ಲ. ಗುಜರಾತಿನನಲ್ಲಿರುವ ಹಾಲಿ ಶಾಸಕರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಅಮಿತ್ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ್ದಾರೆ. ಅಷ್ಟೇ ಅಲ್ಲ ಇನ್ನು ಮುಂದೆ ಕೂಡ ಪಕ್ಷಕ್ಕೆ ಅವರ ಅಗತ್ಯತೆ ಇದೆ ಎಂದರು.
ಸದ್ಯ ಗುಜರಾತಿನಲ್ಲಿರುವ ಅಮಿತ್ ಶಾ ಅವರು ಗುರುವಾರ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕ್ಯಾಬಿನೆಟ್ ಸಚಿವ ನಿತಿನ್ ಭಾಯ್ ಪಟೇಲ್, ಸೌರಭ್ ಪಟೇಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ಭಾಯ್, ಬಡಕಟ್ಟು ನಾಯಕ ಗಣಪತ್ ವಾಸವ ಮತ್ತು ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಹೆಸರು ಕೇಳಿ ಬಂದಿದೆ.
ದಲಿತ ಹಾಗೂ ಪಾಟಿದಾರ್ ಸಮುದಾಯದ ಮನಗೆಲ್ಲಬಲ್ಲ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ. ಪಕ್ಷದ ಕಾರ್ಯಕರ್ತರು ಗುಜರಾತಿನ ಶಾಸಕರೂ ಆಗಿರುವ ಅಮಿತ್ ಶಾರನ್ನೆ ಆಯ್ಕೆ ಮಾಡುವಂತೆ ಆಗ್ರಹಿಸಿದ್ದಾರೆ.