ಬಿಜೆಪಿಯಿಂದ ಸ್ಪರ್ಧಿಸುವಂತೆ 36 ಕೋಟಿ ರುಪಾಯಿ ಆಮಿಷ: ಶರ್ಮಿಳಾ
ಮಣಿಪುರ ವಿಧಾನಸಬೆ ಚುನಾವಣೆಗೆ ಕೇಸರಿ ಪಕ್ಷದಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು 36 ಕೋಟಿ ರುಪಾಯಿ ಆಮಿಷ ಒಡ್ಡಿದ್ದರು ಎಂದು ಸಾಮಾಜಿಕ ಕಾರ್ಯಕರ್ತೆ ಐರೋಮ್ ಶರ್ಮಿಳಾ ಆರೋಪ ಮಾಡಿದ್ದಾರೆ
ಇಂಫಾಲ್, ಫೆಬ್ರವರಿ 13: ಬಿಜೆಪಿಯಿಂದ ಸ್ಪರ್ಧಿಸುವುದಕ್ಕೆ 36 ಕೋಟಿ ರುಪಾಯಿ ಆಮಿಷ ಒಡ್ಡಿತ್ತು ಎಂದು ಸಾಮಾಜಿಕ ಕಾರ್ಯಕರ್ತೆ ಐರೋಮ್ ಶರ್ಮಿಳಾ ಹೇಳಿದ್ದಾರೆ. "ನಾನು ಉಪವಾಸ ಸತ್ಯಾಗ್ರಹ ಕೊನೆ ಮಾಡಿದ ಬಳಿಕ, ನಾನು ಬಿಜೆಪಿ ಮುಖಂಡರೊಬ್ಬರನ್ನು ಭೇಟಿ ಮಾಡಿದೆ. ಚುನಾವಣೆಗೆ ಈಗಿನ ಪರಿಸ್ಥಿತಿಯಲ್ಲಿ ತುಂಬ ಹಣ ಬೇಕು" ಎಂದರು.
ಚುನಾವಣೆಯಲ್ಲಿ ಹೋರಾಡುವುದಕ್ಕೆ ಸರಾಸರಿ 36 ಕೋಟಿ ರುಪಾಯಿ ಬೇಕಾಗುತ್ತದೆ. ಒಂದು ವೇಳೆ ನನ್ನ ಹತ್ತಿರ ಇದ್ದರೆ ಅಷ್ಟು ಹಣ ಹಾಕಬಹುದು, ಇಲ್ಲದಿದ್ದರೆ ಕೇಂದ್ರ ಸರಕಾರ ಕೊಡುತ್ತದೆ" ಎಂದು ಅವರು ಹೇಳಿದ್ದಾಗಿ ಶರ್ಮಿಳಾ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಆದರೆ, ಈ ಆರೋಪವನ್ನು ಬಿಜೆಪಿ ನಾಯಕ ರಾಮ್ ಮಾಧವ್ ನಿರಾಕರಿಸಿದ್ದಾರೆ. "ಇಡೀ ಮಣಿಪುರದ ಚುನಾವಣೆ ಪ್ರಚಾರಕ್ಕೆ ಅಷ್ಟು ಖರ್ಚಾಗುವುದಿಲ್ಲ. ಚುನಾವಣೆ ಸ್ಪರ್ಧಿಸುವುದಕ್ಕೆ ಆಕೆ ಗೌರವಯುತವಾದ ಮಾರ್ಗವನ್ನು ಕಂಡುಕೊಳ್ಳಬೇಕು" ಎಂದು ಟ್ವೀಟ್ ಮಾಡಿದ್ದಾರೆ. ಮಣಿಪುರದಲ್ಲಿ ಜಾರಿಯಲ್ಲಿರುವ ವಿವಾದಾತ್ಮಕ ಶಸ್ತ್ರಾಸ್ತ್ರ ಕಾಯ್ದೆ ವಾಪಸ್ ಪಡೆಯಬೇಕು ಎಂದು ಶರ್ಮಿಳಾ ಹದಿನಾರು ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದರು.[16 ವರ್ಷದ ಉಪವಾಸ ಅಂತ್ಯಗೊಳಿಸಿದ ಉಕ್ಕಿನ ಮಹಿಳೆ ಶರ್ಮಿಳಾ]
ಕಳೆದ ವರ್ಷ ಆಗಸ್ಟ್ 9ರಂದು ತಮ್ಮ ಸತ್ಯಾಗ್ರಹ ಕೊನೆಗೊಳಿಸಿ, ಹೊಸ ಪಕ್ಷವೊಂದನ್ನು ಘೋಷಿಸಿದ್ದರು. ಶರ್ಮಿಳಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಒಂದು ತನ್ನ ತವರು ಕ್ಷೇತ್ರ ಕುರೈ. ಮತ್ತೊಂದು ಮುಖ್ಯಮಂತ್ರಿ ಒಕ್ರಾಂ ಇಬೋಬಿ ಸಿಂಗ್ ವಿರುದ್ಧ ತೌಬಲ್ ಕ್ಷೇತ್ರದಿಂದ.
ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಮಾರ್ಚ್ 4, 8ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 11ರಂದು ಮತ ಎಣಿಕೆ ನಡೆಯಲಿದೆ.