ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ
ನವದೆಹಲಿ, ಜುಲೈ 14: ವಿಪಕ್ಷಗಳು ಮಹಾತ್ಮಾ ಗಾಂಧಿ ಮೊಮ್ಮಗನನ್ನು ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬೆನ್ನಿಗೆ ಬಿಜೆಪಿ ಮೇಲೆ ಒತ್ತಡ ಬಿದ್ದಿದೆ. ಇದೀಗ ತನ್ನ ಅಭ್ಯರ್ಥಿಯ ಆಯ್ಕೆ ಬಗ್ಗೆ ಕೇಸರಿ ಪಕ್ಷ ತಲೆಕೆಡಿಸಿಕೊಂಡಿದೆ.
ಈ ದೇಶದ 'ನಾಗರಿಕರ ಅಭ್ಯರ್ಥಿ' ನಾನು: ಗೋಪಾಲಕೃಷ್ಣ ಗಾಂಧಿ
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಹಿರಿಯ ಮುಖಂಡರ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಇನ್ನು ಸಂಸದೀಯ ಮಂಡಳಿ ಸಭೆ ಸದ್ಯದಲ್ಲೇ ನಡೆಯಲಿದ್ದು ಈ ಸಭೆಯಲ್ಲಿ ಬಿಜೆಪಿ ತನ್ನ ಅಂತಿಮ ಆಯ್ಕೆಯನ್ನು ನಿರ್ಧರಿಸಲಿದೆ.
ಮುಖ್ಯವಾಗಿ ಉಪರಾಷ್ಟ್ರಪತಿಗಳಾದವರು ರಾಜ್ಯಸಭಾ ಸ್ಪೀಕರ್ ಕೂಡಾ ಆಗಿರುವುದರಿಂದ ಮೇಲ್ಮನೆಯನ್ನು ಮುನ್ನಡೆಸುವ ಸಾಮರ್ಥ್ಯ ಇರುವವರಿಗಾಗಿ ಬಿಜೆಪಿ ಹುಡುಕಾಡುತ್ತಿದೆ. ಜತೆಗೆ ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರು ಪಕ್ಷಕ್ಕೆ ಬೇಕಾಗಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ: ಗೋಪಾಲ ಕೃಷ್ಣ ಗಾಂಧಿ ವಿಪಕ್ಷಗಳ ಅಭ್ಯರ್ಥಿ
ಬಿಜೆಪಿ ಮೂಲಗಳ ಪ್ರಕಾರ ಪಕ್ಷದ ಒಳಗಿನವರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಹೊರಗಿನವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ತುಂಬಾ ಕಡಿಮೆ. ಇನ್ನು ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆಯಲಿದೆ.