ಬಿಜೆಪಿ, ಕೇಜ್ರಿವಾಲ್, ಶೌಚಾಲಯ: ಏನಿದು ಆವಾಂತರ?
ನವದೆಹಲಿ, ಅ 15: ದೆಹಲಿ ಬಿಜೆಪಿ ಕಚೇರಿಯಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸುವುದರ ಬಗ್ಗೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಕೇಜ್ರಿವಾಲ್ ಪ್ರಚಾರ ಪ್ರಿಯರು ಹಾಗಾಗಿ ಇಂತಹ ಅಗ್ಗದ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ಟೀಕಿಸಿದ್ದಾರೆ. (ಭೂಗಳ್ಳರ ವಿರುದ್ಧ ಆಪ್ ಉಪವಾಸ)
ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಕೀಟುಮಟ್ಟದ ರಾಜಕೀಯ ಮಾಡುವುದು ಕೇಜ್ರಿವಾಲ್ ಅವರಿಗೆ ಶೋಭೆ ತರುವುದಿಲ್ಲ. ಮಾಧ್ಯಮದವರು ಆಮ್ ಆದ್ಮಿ ಪಕ್ಷದ ಕಚೇರಿಗೆ ತೆರಳಿ ವಸ್ತುಸ್ಥಿತಿಯನ್ನು ಅರಿತುಕೊಳ್ಳಬೇಕೆಂದು ಉಪಾಧ್ಯಾಯ ಸಲಹೆ ನೀಡಿದ್ದಾರೆ.
ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ, ನಮ್ಮ ಕಚೇರಿಯಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಲು ಆಪ್ ಆದ್ಮಿ ಪಕ್ಷದ ಅನುದಾನದ ಅವಶ್ಯಕತೆಯಿಲ್ಲ ಎಂದು ಉಪಾಧ್ಯಾಯ, ಕೇಜ್ರಿವಾಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಏನಿದು ಶೌಚಾಲಯದ ಗೊಂದಲ: ಸದಾ ಸುದ್ದಿಯಲ್ಲಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ಸುದ್ದಿಯಾಗುವ ಹೇಳಿಕೆಯನ್ನು ಎರಡು ದಿನದ ಹಿಂದೆ ನೀಡಿದ್ದರು.
ದೆಹಲಿಯ ಪಂಡಿತ್ ಪಂತ್ ಮಾರ್ಗದಲ್ಲಿರುವ ಮತ್ತು ಕೇಜ್ರಿವಾಲ್ ಅವರು ಪ್ರತಿನಿಧಿಸುವ ವಿಧಾನಸಭಾ ವ್ಯಾಪ್ತಿಗೆ ಬರುವ ದೆಹಲಿ ಬಿಜೆಪಿ ಘಟಕದಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲ ಎನ್ನುವ ಕಾರಣಕ್ಕಾಗಿ ಅಲ್ಲಿ ಶೌಚಾಲಯ ನಿರ್ಮಿಸುವುದಾಗಿ ಕೇಜ್ರಿವಾಲ್ ಹೇಳಿಕೆ ನೀಡಿದ್ದರು.
ಭಾರತ್ ಸ್ವಚ್ಚ ಅಭಿಯಾನ ಎಂದು ಭಾಷಣ ಮಾಡುವು ಪ್ರಧಾನಿ ಮೋದಿಗೆ ತಮ್ಮ ಪಕ್ಷದ ಕಚೇರಿಯಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ ಎನ್ನುವದರ ಬಗ್ಗೆ ಕಾಳಜಿಯಿಲ್ಲ ಇಲ್ಲದಿರುವುದು ವಿಷಾದನೀಯ.
ಹಾಗಾಗಿ, ದೆಹಲಿ ಬಿಜೆಪಿ ಘಟಕದಲ್ಲಿ ಮಹಿಳೆಯರಿಗಾಗಿ ನನ್ನ ಶಾಸಕರ ಅನುದಾನದ ಕೋಟಾದಡಿಯಲಿ ಶೌಚಾಲಯ ನಿರ್ಮಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.