ಪಕ್ಕದ ರಾಜ್ಯದಲ್ಲಿ ವಿಸ್ಮಯ: ಒಂದೇ ಸಮನೆ ತಿರುಗುತ್ತಿರುವ ಬೇವಿನ ಸಸಿ
ಕರೀಂನಗರ, ಸೆ 17: ಜನ ಮರುಳೋ, ಜಾತ್ರೆ ಮರುಳೋ ಎನ್ನುವ ಗಾದೆ ಮಾತಿಗೆ ಕೊಡಬಹುದಾದ ಉತ್ತಮ ಉದಾಹರಣೆ ಎನ್ನುವಂತೆ ಬೇವಿನ ಸಸಿಯೊಂದು ತನ್ನಿಂತಾನೇ ತಿರುಗುತ್ತಾ ನೆರೆದವರಲ್ಲಿ ಅಚ್ಚರಿಯನ್ನು ಮೂಡಿಸಿದೆ.
ತೆಲಂಗಾಣ ಕರೀಂನಗರ ಜಿಲ್ಲೆಯ ಸಿರಸಿಲ್ಲಾ ನಗರದ ಶಾಂತಿನಗರದ ಬಡಾವಣೆಯಲ್ಲಿ ಬೇವಿನ ಸಸಿಯೊಂದು ಗಾಳಿಯ ಆಸರೆಯಿಲ್ಲದೇ, ತನ್ನಿಂತ್ತಾನೆ ತಿರುಗತ್ತಲೇ ಇದೆ. (ಮೂಢನಂಬಿಕೆಯ ಪರಮಾವಧಿ ಅಂದರೆ ಇದೇನಾ)
ಕಳೆದ ಎರಡು ದಿನಗಳಿಂದ ಬೇವಿನ ಸಸಿ ನಿರಂತರವಾಗಿ ತಿರಗುತ್ತಿದ್ದು ಅಕ್ಕಪಕ್ಕದ ಊರಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ.
ಬಡಾವಣೆಯ ನಿವಾಸಿಯೊಬ್ಬರ ಮನೆಯ ಬೇವಿನ ಗಿಡದ ಮರದ ಕೆಳಗೆ ಈ ಬೇವಿನ ಸಸಿಯಿದ್ದು, ಇದು ತಿರುಗುತ್ತಿರುವುದನ್ನು ನೋಡಿದ ಮಾಲೀಕ, ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಅದು ಊರೆಲ್ಲಾ ಸುದ್ದಿಯಾಗಿ ಸಾಗರೋಪಾದಿಯಲ್ಲಿ ಬೇವಿನ ಸಸಿಯನ್ನು ಜನ ದಾಂಗುಡಿಯಿಡುತ್ತಿದ್ದಾರೆ.
ಭೂಮಿಯಲ್ಲಿನ ಚಲನೆಯಿಂದ ಈ ರೀತಿ ಆಗಿರಬಹುದೆಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದರೂ ಒಪ್ಪಿಕೊಳ್ಳದ ಕೆಲವರು, ಇದು 'ದೈವೀಸ್ವರೂಪ' ಎಂದು ಬೇವಿನ ಸಸಿಯ ಬುಡಕ್ಕೆ ಅರಸಿನ, ಕುಂಕುಮ, ಅಗರಬತ್ತಿ ಹಾಕಿ ಧನ್ಯತಾಭಾವ ಮೆರೆಯುತ್ತಿದ್ದಾರೆ.
ಬೇವಿನ ಸಸಿಯನ್ನು ಯಾರೂ ಮುಟ್ಟಲು ಧೈರ್ಯ ಮಾಡುತ್ತಿಲ್ಲ. ಇದರ ನಡುವೆ ಹೆಂಗಸಳೊಬ್ಬಳು, ಕೂದಲು ಕೆರೆದುಕೊಂಡು, ನಾನು ದೇವತೆ.. ಬೇವಿನ ಗಿಡದ ರೂಪದಲ್ಲಿ ದೇವರು ನನ್ನ ಮೇಲೆ ಬಂದಿದ್ದಾರೆ.. ಎಂದು ಹೇಳುತ್ತಿದ್ದಾಳೆ. ಸಸಿಯನ್ನು ನೋಡುವುದಕ್ಕಿಂತ ಹೆಚ್ಚಾಗಿ ಜನರು, ಮಹಿಳೆಯನ್ನು ನೋಡಲು ಮುಗಿಬೀಳುತ್ತಿದ್ದಾರೆ.
ನಂಬಿಕೆ ಮತ್ತು ಮೂಢನಂಬಿಕೆ ಒಟ್ಟಾದರೆ ಏನಾಗುತ್ತದೆ ಎನ್ನುವುದಕ್ಕೆ ಕರೀಂನಗರ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ. (ಮಾಹಿತಿ, ಚಿತ್ರ - ಟಿವಿ9)