ಬಿಹಾರ ರಾಜಕೀಯ ಬೆಳವಣಿಗೆ : ಯಾರು ಏನು ಹೇಳಿದರು?
ಬೆಂಗಳೂರು, ಜುಲೈ 27 : ಬಿಹಾರದಲ್ಲಿ ನಡೆದಿರುವ ಬೆಳವಣಿಗೆಯಿಂದ ಭಾರತೀಯ ಜನತಾ ಪಕ್ಷದ ಹರ್ಷೋದ್ಘಾರ ಮುಗಿಲುಮುಟ್ಟಿದ್ದರೆ, ಅವರ ವಿರೋಧಿಗಳು ನಾವು ಮೋಸ ಹೋಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಇನ್ನು ಎರಡು ವರ್ಷ ಬಾಕಿಯಿರುವಾಗ, ಕರ್ನಾಟಕ ಮತ್ತು ಗುಜರಾತ್ ಚುನಾವಣೆಗಳಿಗೆ ಕೆಲವೇ ತಿಂಗಳು ಇರುವಾಗ, ಜೆಡಿಯು ಜೊತೆ ಭಾರತೀಯ ಜನತಾ ಪಕ್ಷ ಕೈಜೋಡಿಸಿ ಹೊಸ ಸರಕಾರವನ್ನು ಬಿಹಾರದಲ್ಲಿ ರಚಿಸಿರುವುದು ಮುಂದಿನ ಚುನಾವಣಾ ಮೈತ್ರಿಗಳಿಗೆ ಹೊಸಭಾಷ್ಯ ಬರೆದಂತಾಗಿದೆ.
ತಿರುಗುಬಾಣವಾಯ್ತು ಆರ್ ಜೆಡಿ ಹೂಡಿದ್ದ ನಯವಂಚನೆಯ ಸಂಚು!
ಆರ್ಜೆಡಿ ಪಕ್ಷದ ತೇಜಸ್ವಿ ಮತ್ತಿತರರ ಭ್ರಷ್ಟಾಚಾರಕ್ಕೆ ಬೇಸತ್ತು ನಿತೀಶ್ ಕುಮಾರ್ ಅವರು ಮಹಾಘಟಬಂಧನದಿಂದ ಹೊರಬಂದಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಅವರನ್ನೇ ಕೆಳಗಿಳಿಸಿಲು ಆರ್ಜೆಡಿ ನಡೆಸಿದ್ದ ಹುನ್ನಾರಕ್ಕೆ ಇದು ನಿತೀಶ್ ನೀಡಿರುವ ಪೆಟ್ಟು ಎಂಬುದು ರಾಜಕೀಯ ಪಂಡಿತರು ಚೆನ್ನಾಗಿ ಬಲ್ಲರು.
ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಅತ್ಯದ್ಭುತ ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದುಳಿದ ರಾಜ್ಯವಾಗಿದ್ದ ಬಿಹಾರವನ್ನು ಈಗ ಅಭಿವೃದ್ಧಿಯ ಪಥದತ್ತ ಮುನ್ನಡೆಸುತ್ತಿದ್ದಾರೆ. ಆದರೆ, ಅವರ ಜೊತೆಯಲ್ಲಿದ್ದವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಸಹಿಸಿಕೊಳ್ಳುವುದಾದರೂ ಹೇಗೆ?
6ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ
ಒಟ್ಟಿನಲ್ಲಿ ಬಿಹಾರದಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆ ಸಂತೋಷದ, ಖಿನ್ನತೆ ಹಲವಾರು ಮಾತುಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೇಗೆ ಇದನ್ನು ವ್ಯಾಖ್ಯಾನಿಸುತ್ತಿದ್ದಾರೆ ನೋಡೋಣ ಬನ್ನಿ.
ಭ್ರಷ್ಟರ ವಿರುದ್ಧ ಹೋರಾಡೋಣ : ನರೇಂದ್ರ ಮೋದಿ
ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರಿಗೆ ಹುತ್ಪೂರ್ವಕ ಅಭಿನಂದನೆಗಳು. ಬಿಹಾರದ ಅಭಿವೃದ್ಧಿಗಾಗಿ ಮತ್ತು ಒಳಿತಿಗಾಗಿ ಒಟ್ಟಿಗೆ ಕೆಲಸ ಮಾಡಲು ಮುಂದೆ ನೋಡುತ್ತಿದ್ದೇನೆ. ದೇಶದ ಮತ್ತು ವಿಶೇಷವಾಗಿ ಬಿಹಾರದ ಉನ್ನತಿಗಾಗಿ ರಾಜಕೀಯ ಮತಭೇದವನ್ನು ಮರೆತು, ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ತಿಂಗಳಿನಿಂದ ಪ್ಲಾನ್ ನಡೆದಿತ್ತು : ರಾಹುಲ್ ಗಾಂಧಿ
ಕೋಮುವಾದಿಗಳ ವಿರುದ್ಧ ಹೋರಾಡಲು ಬಿಹಾರದ ಜನತೆ ನಿತೀಶ್ ಕುಮಾರ್ ಅವರಿಗೆ ಬಹುಮತವನ್ನು ನೀಡಿದ್ದರು. ಆದರೆ, ಅವರು ತಮ್ಮ ವೈಯಕ್ತಿಕ ರಾಜಕೀಯಕ್ಕಾಗಿ ಅಂಥ ಕೋಮುವಾದಿಗಳ ಜೊತೆಯೇ ಕೈಜೋಡಿಸಿದ್ದಾರೆ. 3-4 ತಿಂಗಳಿನಿಂದಲೇ ಬಿಹಾರದ ಜನತೆಗೆ ಮೋಸ ಮಾಡಲು ಪ್ಲಾನಿಂಗ್ ನಡೆದಿತ್ತು. ಜನತು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಬಿಹಾರದ ಬೆಳವಣಿಗೆಯೇ ಸಾಕ್ಷಿ.
ಅಧಿಕಾರದ ದುರಾಸೆ : ರಾಮಚಂದ್ರ ಗುಹಾ
ನಿತೀಶ್ ಕುಮಾರ್ ಅವರು ವಿಧಾನಸಭೆಯನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಮನವಿ ಮಾಡಬೇಕಿತ್ತು. ಲಾಲೂ ಪ್ರಸಾದ್ ಯಾದವ್ ಅವರಿಗೆ ಹಣದ ದುರಾಸೆ ಇದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಆದರೆ, ತಮಗೆ ಅಧಿಕಾರದ ದುರಾಸೆ ಇದೆ ಎಂದು ಅವರೇ ತೋರಿಸಿಕೊಟ್ಟಿದ್ದಾರೆ.
ವಿರೋಧಿಗಳ ಸರಕಾರ ಕೆಡವುತ್ತಿದೆ : ಮಲ್ಲಿಕಾರ್ಜುನ ಖರ್ಗೆ
ಯಾವ್ಯಾವ ರಾಜ್ಯಗಳಲ್ಲಿ ವಿರೋಧ ಪಕ್ಷವು ಆಡಳಿತ ನಡೆಸುತ್ತಿದೆಯೇ ಅಲ್ಲೆಲ್ಲ ಸರಕಾರವನ್ನು ಅಭದ್ರಗೊಳಿಸಲು ಭಾರತೀಯ ಜನತಾ ಪಕ್ಷ ಯತ್ನಿಸುತ್ತಿದೆ ಎಂದು ಬಿಹಾರದ ಬೆಳವಣಿಗೆಯನ್ನು ವ್ಯಾಖ್ಯಾನಿಸಿದ್ದಾರೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.
ಅವಕಾಶವಾದಿ ವಿದ್ರೋಹಿ : ತೇಜಸ್ವಿ ಯಾದವ್
ಅತ್ಯಂತ ಸ್ವಚ್ಛ ಕೈಗಳಿಂದ, ಬಿಹಾರದ ಜನತೆಗಾಗಿ ಧನಾತ್ಮಕವಾಗಿ ಕೆಲಸ ಮಾಡುವ ಉದ್ದೇಶದಿಂದ ರಾಜಕೀಯವನ್ನು ಪ್ರವೇಶಿಸಿದೆ. ಆದರೆ, ಅವಕಾಶವಾದಿ ವಿದ್ರೋಹಿಗಳನ್ನೇ ಕಂಡುಕೊಂಡೆ ಎಂದು, ಹೋಟೆಲಿಗಾಗಿ ಅಕ್ರಮವಾಗಿ ಜಮೀನನ್ನು ನೀಡಿ, ಸಿಬಿಐನಿಂದ ತನಿಖೆಗೆ ಒಳಪಟ್ಟಿರುವ ತೇಜಸ್ವಿ ಯಾದವ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದೇ ನೈತಿಕತೆಯಾ : ದಿಗ್ವಿಜಯ್ ಸಿಂಗ್
ಅವರಿಗೆ (ನಿತೀಶ್ ಕುಮಾರ್) ತೇಜಸ್ವಿ ವಿರುದ್ಧ ಭಿನ್ನಾಭಿಪ್ರಾಯವಿದ್ದಿದ್ದರೆ ಅವರನ್ನು ಸಂಪುಟದಿಂದ ತೆಗೆದುಹಾಕಬಹುದಾಗಿತ್ತು. ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳ ಸಭೆಯನ್ನು ಕರೆಯಬೇಕಾಗಿತ್ತು. ಹೀಗೆ ಮಹಾಘಟಬಂಧನಕ್ಕೆ ಮೋಸ ಮಾಡುವುದು ಆದರ್ಶವಲ್ಲ. ನಿತೀಶ್ ಅವರು ಯಾವಾಗಲೂ ನೈತಿಕತೆಯ ಮಾತು ಆಡುತ್ತಿರುತ್ತಾರೆ. ಇದೇ ನೈತಿಕತೆಯಾ?