ಗಾಜಿಯಾಬಾದ್ ರೈಲ್ವೆ ಹಳಿ ಮೇಲೆ ಐಎಎಸ್ ಅಧಿಕಾರಿ ಶವ ಪತ್ತೆ
ಗಾಜಿಯಾಬಾದ್(ಉತ್ತರಪ್ರದೇಶ), ಆಗಸ್ಟ್ 11: ಗಾಜಿಯಾಬಾದಿನ ರೈಲ್ವೆ ನಿಲ್ದಾಣದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ರೈಲ್ವೆ ಹಳಿ ಮೇಲೆ ಐಎಎಸ್ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ.
ಮೃತರನ್ನು ಬಕ್ಸಾರ್ ನ ಜಿಲ್ಲಾಧಿಕಾರಿ ಮುಕೇಶ್ ಪಾಂಡೆ ಎಂದು ಗುರುತಿಸಲಾಗಿದ್ದು, ಸಮೀಪದಲ್ಲಿ ಡೆತ್ ನೋಟ್ ಕೂಡಾ ಲಭ್ಯವಾಗಿದೆ. ಇದೊಂದು ಆತ್ಮಹತ್ಯಾ ಪ್ರಕರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಗಾಜಿಯಾಬಾದ್ ಪೊಲೀಸರು ಹೇಳಿದ್ದಾರೆ.
2012 ರ ಬ್ಯಾಚ್ ನಲ್ಲಿ ಐಎಎಸ್ ಅಧಿಕಾರಿ ಪಾಂಡೆ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪತ್ರದಿಂದ ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಪಾಂಡೆ ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಶವ ಪರೀಕ್ಷೆ ನಂತರ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಪಾಂಡೆ ಅವರು ತಮ್ಮ ಸ್ನೇಹಿತರಿಗೆ ಆತ್ಮಹತ್ಯೆಯ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದ ಪೊಲೀಸರು, ತಕ್ಷಣವೇ ಅವರನ್ನು ಹಿಂಬಾಲಿಸಲು ದೆಹಲಿ ಮಾಲ್ ಗೆ ಹೋದರಾದರೂ ಪ್ರಯೋಜನವಾಗಲಿಲ್ಲ.
ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ಅಲ್ಲಿನ ದೃಶ್ಯದಂತೆ ಅವರು ಮಾಲ್ ನಿಂದ ಹತ್ತಿರದ ಮೆಟ್ರೋ ನಿಲ್ದಾಣದ ಕಡೆಗೆ ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಆದರೆ, ಯಾವುದೂ ಸ್ಪಷ್ಟವಾಗಲಿಲ್ಲ. ತನಿಖೆ ಮುಂದುವರೆದಿದೆ.(ಪಿಟಿಐ)