ಬಿಹಾರದಲ್ಲಿ ಕೂಡ ಸಮೀಕ್ಷೆ ಸುಳ್ಳಾಗಿತ್ತು : ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್ 10 : "ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಏನಾಯಿತು? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು, ಬಿಹಾರದಲ್ಲಿ ಆಗಿದ್ದೇನು? ಉತ್ತರಪ್ರದೇಶದಲ್ಲಿಯೂ ಹೀಗೇ ಆಗುತ್ತದೆ ನಾಳೆಯವರೆಗೆ ಕಾದು ನೋಡಿ."
ಇವು ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಜೊತೆ ಕೈಜೋಡಿಸಿ ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿ, ಗೆದ್ದೇ ಗೆಲ್ಲುತ್ತೇವೆಂಬ ರಂಗುರಂಗಿನ ಕನಸು ಕಾಣುತ್ತಿರುವ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಡುವ ಆತ್ಮವಿಶ್ವಾಸದ ಮಾತುಗಳು.[ಚುನಾವಣೋತ್ತರ ಸಮೀಕ್ಷೆ : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು]
ಗುರುವಾರ ಸಂಜೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಯ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ ಉತ್ತರಪ್ರದೇಶದಲ್ಲಿ ಗೆದ್ದೇಗೆಲ್ಲುತ್ತದೆ. ನಾಳೆಯವರೆಗೂ ಕಾದುನೋಡಿ ಎಂದು ತಿರುಗೇಟು ನೀಡಿದ್ದಾರೆ.[ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಅಧಿಕಾರ ಎಂದ ಬೆಟ್ಟಿಂಗ್ ಲೋಕ!!]
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತದೆ, ಎಸ್ಪಿ ಮತ್ತು ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಡುತ್ತವೆ. ಬಹುತೇಕ ಸಮೀಕ್ಷೆಗಳು ಇದೇ ವರದಿಯನ್ನು ಕೊಟ್ಟಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆಂದು ಚಾಣಕ್ಯ ಮತ್ತು ಇಂಡಿಯಾ ಟುಡೇ ವರದಿಗಳು ಮಾತ್ರ ಹೇಳಿವೆ.
ಓಪಿನಿಯನ್ ಪೋಲ್ಸ್ ಬಗ್ಗೆ ಓಪಿನಿಯನ್ ಹೇಳಲ್ಲ
ನಾನು ಓಪಿನಿಯನ್ ಪೋಲ್ಸ್ ಬಗ್ಗೆ ಓಪಿನಿಯನ್ ಹೇಳಲು ಇಚ್ಛಿಸುವುದಿಲ್ಲ. ಉತ್ತರಪ್ರದೇಶದಲ್ಲಿ ನಾವು (ಎಸ್ಪಿ ಕಾಂಗ್ರೆಸ್ ಮೈತ್ರಿಕೂಟ) ಖಂಡಿತ ಗೆಲ್ಲುತ್ತೇವೆ. ಬಿಹಾರದಲ್ಲಿ ಮಾಡಲಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿದ್ದವು. ಮಾರ್ಚ್ 11ರಂದು ನಾನು ನಿಮ್ಮೊಂದಿಗೆ ಮತ್ತೆ ಮಾತನಾಡುತ್ತೇನೆ.[ಗೆಲುವಿನ ಮಣಿ ಪೋಣಿಸುವ ಪಕ್ಷಗಳ ಮಜವಾದ ಲೆಕ್ಕಾಚಾರ]
ಬಿಹಾರದಲ್ಲಿ ಮೋದಿ ಅಲೆಯಿದೆ ಎಂದಿದ್ದ ಸಮೀಕ್ಷೆ
2015ರಲ್ಲಿ ಬಿಹಾರದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅಲೆಗಳು ಬಲವಾಗಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವುದು ಸಾಧಿಸುತ್ತದೆ ಎಂದು ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಸಂಯುಕ್ತ ಜನತಾದಳ, ರಾಷ್ಟ್ರೀಯ ಜನದಾದಳ ಮತ್ತು ಕಾಂಗ್ರೆಸ್ ಪಕ್ಕಗಳ ಮಹಾಘಟಬಂಧನ್ ಬಿಜೆಪಿಯನ್ನು ಹೇಳಹೆಸರಿಲ್ಲದಂತೆ ಗುಡಿಸಿಹಾಕಿದ್ದವು.[ಉತ್ತರಪ್ರದೇಶದಲ್ಲಿ ಯಾವ ಎಕ್ಸಿಟ್ ಪೋಲ್ ಆಟ ನಡೆಯಲ್ಲ ಏಕೆ?]
ಬಿಹಾರದಲ್ಲಿ ಉಲ್ಟಾಪುಲ್ಟಾ ಆಗಿದ್ದ ಸಮೀಕ್ಷೆಗಳು
2014ರ ಲೋಕಸಭೆ ಚುನಾವಣೆಯಲ್ಲಿ ನಿಖರವಾದ ಸಮೀಕ್ಷೆ ನಡೆಸಿದ್ದ ಚಾಣಕ್ಯ, ಬಿಹಾರದಲ್ಲಿ ಎನ್ಡಿಎ 155ಕ್ಕೂ ಹೆಚ್ಚು ಸ್ಥಾನ ಗಳಿಸುತ್ತದೆ ಮತ್ತು ಮಹಾಘಟಬಂಧನ್ 80ರ ಆಸುಪಾಸಿನಲ್ಲಿ ಇರುತ್ತದೆ ಎಂದು ವರದಿ ನೀಡಿತ್ತು. ಆದರೆ, ಆಗಿದ್ದೇನು? ಬಿಜೆಪಿ ಕೇವಲ 53 ಸೀಟುಗಳನ್ನು ಮಾತ್ರ ಗೆಲ್ಲಲು ಯಶಸ್ವಿಯಾಗಿತ್ತು. 243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ ಉಳಿದೆಲ್ಲ ಸ್ಥಾನಗಳು ಮಹಾಘಟಬಂದನ್ ಪಾಲಾಗಿದ್ದವು.
ಬಿಜೆಪಿಗೆ ಸರಳ ಬಹುಮತ ಎಂದಿದೆ ಚಾಣಕ್ಯ
ಈ ಬಾರಿ ಕೂಡ, 403 ಸ್ಥಾನಗಳಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 285 ಸ್ಥಾನಗಳನ್ನು ಪಡೆದು ಸರಳ ಬಹುಮತ ತನ್ನದಾಗಿಸಿಕೊಳ್ಳುತ್ತದೆ ಎಂದು ಚಾಣಕ್ಯ ಸಮೀಕ್ಷೆ ಹೇಳಿದೆ. ಬಿಹಾರದಂತೆಯೇ ಉತ್ತರಪ್ರದೇಶದಲ್ಲಿಯೂ ಚುನಾವಣೋತ್ತರ ಸಮೀಕ್ಷೆ ತಿರುವುಮುರುವು ಆಗುತ್ತದೆಂದು ರಾಹುಲ್ ಗಾಂಧಿ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.[ಚಾಣಕ್ಯ ಭವಿಷ್ಯ: ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಭರ್ಜರಿ ಜಯ]
ಇದು ಮೈತ್ರಿಗೆ ದ್ರೋಹ ಬಗೆದಂತಲ್ಲವೆ?
ಚುನಾವಣೋತ್ತರ ಸಮೀಕ್ಷೆಯಲ್ಲಿ ತಮಗೆ ಸೋಲು ಎಂದು ಖಚಿತವಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ನಾಯಕ, ಉತ್ತರಪ್ರದೇಶದ ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಅಗತ್ಯ ಬಿದ್ದರೆ ತಮ್ಮ ಬದ್ಧವೈರಿ ಬಿಎಸ್ಪಿ ಜೊತೆ ಕೈಜೋಡಿಸಲು ಮುಂದಾಗಿರುವುದಕ್ಕೆ ರಾಹುಲ್ ಗಾಂಧಿ ಏಕೆ ಪ್ರತಿಕ್ರಿಯಿಸಿಲ್ಲ ಎಂಬುದು ರಹಸ್ಯವಾಗಿ ಉಳಿದಿದೆ. ಇದು ಮೈತ್ರಿಗೆ ದ್ರೋಹ ಬಗೆದಂತಲ್ಲವೆ?
ಮಾರ್ಚ್ 11ರಂದು 5 ರಾಜ್ಯಗಳ ಫಲಿತಾಂಶ
ಮಾರ್ಚ್ 11ರಂದು ಉತ್ತರಪ್ರದೇಶ ಸೇರಿದಂತೆ ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಗಲಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದಾ ಅಥವಾ ಮಣ್ಣು ಮುಕ್ಕುತ್ತದಾ ಎಂಬುದು ತಿಳಿದುಬರಲಿದೆ. ಯಾವುದಕ್ಕೂ ಒನ್ಇಂಡಿಯಾ ಕನ್ನಡ ವೆಬ್ ತಾಣ ನೋಡುತ್ತಿರಿ.