ಬಿಹಾರದಲ್ಲಿ ಚುನಾವಣಾ ರಂಗು: ಮಹಾತ್ಮ ಗಾಂಧಿ ಸಾವಿಗೆ ಮೋದಿ ಕಾರಣ?
ಪಾಟ್ನಾ, ಅ 3: ಯಶಸ್ವೀ ಅಮೆರಿಕಾ ಪ್ರವಾಸದ ನಂತರ ಮತ್ತು ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಮೊದಲ ಚುನಾವಣಾ ಸಭೆ ನಡೆಸುವ ಮೂಲಕ ಬಿಹಾರದ ಚುನಾವಣಾ ಕಾವು ಏರತೊಡಗಿದೆ.
ಐದು ಹಂತದ ಚುನಾವಣೆಯಲ್ಲಿ 49 ಕ್ಷೇತ್ರಗಳಿಗೆ (ಒಟ್ಟು ಸ್ಥಾನ 243) ಅಕ್ಟೋಬರ್ ಹನ್ನೆರಡರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. (ಬಿಹಾರ ಸಮೀಕ್ಷೆ: ಸಮಬಲದ ಹೋರಾಟ)
ಬಿಜೆಪಿಯ ಪರಮ ವಿರೋಧಿ ಆರ್ಜೆಡಿ ಪಕ್ಷದ ಪ್ರಮುಖ ಲಾಲೂ ಪ್ರಸಾದ್ ಯಾದವ್, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗೆ ಪ್ರಧಾನಿ ಮೋದಿ ಕಾರಣ ಎನ್ನುವ ಅರ್ಥ ಬರುವ ಟ್ವೀಟ್ ಸಂದೇಶ ರವಾನಿಸಿದ್ದಾರೆ. ಅಲ್ಲದೇ, ಬಿಜೆಪಿ ರಾಷ್ಟ್ರಾಧಕ್ಷ ಅಮಿತ್ ಶಾ ಒಬ್ಬ ನರಭಕ್ಷಕ ಎಂದು ಲಾಲೂ ಟೀಕಿಸಿದ್ದಾರೆ.
ಬಂಕಾದಲ್ಲಿ ಶುಕ್ರವಾರ (ಅ 2) ನಡೆದ ಸಾರ್ವಜನಿಕ ಸಭೆಯಲ್ಲಿ ಈಗ ಅಧಿಕಾರದಲ್ಲಿರುವ ವ್ಯಕ್ತಿ (ನಿತೀಶ್ ಕುಮಾರ್) ಒಬ್ಬ ದುರಹಂಕಾರಿ ಎಂದು ಮೋದಿ ಕಿಡಿಕಾರಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಹಾರದ ಚುನಾವಣೆಯ ಬಗ್ಗೆ ಮಾತನಾಡುತ್ತಾ, ನಮ್ಮ ಪಕ್ಷ ಬಿಹಾರದಲ್ಲಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸುವುದಿಲ್ಲ ಎನ್ನುವ ಆಶ್ಚರ್ಯಕಾರಿ ಹೇಳಿಕೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಇತ್ತೀಚೆಗೆ ನಾನು ಬಿಹಾರಕ್ಕೆ ಹೋಗಿದ್ದು ಕಾರ್ಯಾಗಾರಕ್ಕಾಗಿ (workshop), ನಮ್ಮ ಪಕ್ಷ ಬಿಹಾರದಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ನಿತೀಶ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದು ಒಂದು ಕರ್ಟೆಸಿ ವಿಸಿಟ್ ಅಷ್ಟೇ ಎಂದು ಕೇಜ್ರಿವಾಲ್ ಸ್ಪಷ್ಟ ಪಡಿಸಿದ್ದಾರೆ.
|
ಲಾಲೂ ಪ್ರಸಾದ್ ಯಾದವ್ ಟ್ವೀಟ್
ಪ್ರಶ್ನೆ, ಉತ್ತರ ರೀತಿಯಲ್ಲಿ ಟ್ವೀಟ್ ಮಾಡಿರುವ ಲಾಲೂ, ಗೋಡ್ಸೆಯನ್ನು ಯಾರು ಪೂಜಿಸುತ್ತಾರೆ - ಆರ್ ಎಸ್ ಎಸ್. ಬಿಜೆಪಿಯನ್ನು ಮುನ್ನಡೆಸುತ್ತಿರುವವರು ಯಾರು - ಬಿಜೆಪಿ. ಹಾಗಾದರೆ ಗಾಂಧಿಯನ್ನು ಕೊಂದಿದ್ದು ಯಾರು ಎಂದು ಪರೋಕ್ಷವಾಗಿ ಗಾಂಧಿ ಹತ್ಯೆಗೆ ಮೋದಿ ಕಾರಣ ಎಂದು ಟ್ವೀಟ್ ಮಾಡಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ರಾಬ್ರಿ ದೇವಿ ಮತ್ತು ಲಾಲೂ
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಬಿಜೆಪಿ ವಿರುದ್ದ ಕಿಡಿಕಾರುತ್ತಾ, ಅಮಿತ್ ಶಾ ಸಾವಿರಾರು ಅಮಾಯಕರನ್ನು ಹತ್ಯೆ ಮಾಡಿದ ಕ್ರೂರಿ ಎಂದಿದ್ದಾರೆ. ಇನ್ನು ಲಾಲೂ, ಶಾ ಒಬ್ಬ ನರಭಕ್ಷಕ ಎಂದು ವಿವಾದಕಾರಿ ಹೇಳಿಕೆ ನೀಡಿದ್ದರು. ಲಾಲೂ ಈ ಹೇಳಿಕೆಗೆ ಚುನಾವಣಾ ಆಯೋಗ ಎಚ್ಚರಿಕೆಯನ್ನೂ ನೀಡಿತ್ತು.
ಅರುಣ್ ಜೇಟ್ಲಿ ತಿರುಗೇಟು
ಲಾಲೂ ಟೀಕೆಗೆ ಪ್ರತ್ಯುತ್ತರ ನೀಡಿದ್ದ ಕೇಂದ್ರ ಹಣಕಾಸು ಸಚಿವ ಜೇಟ್ಲಿ, ಆರ್ಜೆಡಿ ಸಮಾಜವನ್ನು ಒಡೆಯುವ ಕೆಲಸವನ್ನು ಮೊದಲು ನಿಲ್ಲಿಸಲಿ. ಲಾಲೂ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ಗೋಧ್ರಾ ರೈಲು ದುರಂತದ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇಕೆ ಎಂದು ತಿರುಗೇಟು ನೀಡಿದ್ದಾರೆ.
ನಿತೀಶ್ ವಿರುದ್ದ ಮೋದಿ ವಾಕ್ ಪ್ರಹಾರ
ಬಿಹಾರದ ಮುಖ್ಯಮಂತ್ರಿಗೆ ಸೊಕ್ಕು ಹೆಚ್ಚು. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ನೀಡಿದ ವಿಶೇಷ ಪ್ಯಾಕೇಜನ್ನು ತಿರಸ್ಕರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿ ಬಿಡಲಿ, ನಾವು ಜಾತಿ ರಾಜಕೀಯ ಮಾಡುವುದಿಲ್ಲ. ನಮ್ಮ ಏಕೈಕ ಗುರಿ ಅಭಿವೃದ್ದಿ ಎಂದು ಮೋದಿ ಚುನಾವಣಾ ಸಭೆಯಲ್ಲಿ ಹೇಳಿದ್ದಾರೆ.