ಸೋನಿಯಾ ಸಭೆಗೆ ಚಕ್ಕರ್, ಮೋದಿ ಸಭೆಗೆ ರಾಜಕೀಯ ಕಡುವೈರಿ ಹಾಜರ್!
ಬದಲಾದ ರಾಜಕೀಯದಲ್ಲಿ, ಮೋದಿ ಕಡುವೈರಿ ಸಾಲಿನಲ್ಲಿ ಮಂಚೂಣಿಯಲ್ಲಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ಬದಲಾಗುತ್ತಿದ್ದಾರಾ? ಸೋನಿಯಾ ಗಾಂಧಿ ಕರೆದಿದ್ದ ಸಭೆಗೆ ಹಾಜರಾಗದ ನಿತೀಶ್, ಮೋದಿ ಕರೆದ ಔತಣಕೂಟದಲ್ಲಿ ಹಾಜರಾಗಲಿದ್ದಾರೆ.
ನಿತೀಶ್ ಕುಮಾರ್ ಅವರ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೋನಿಯಾ ಗಾಂಧಿ ಕರೆದಿದ್ದ ವಿರೋಧ ಪಕ್ಷಗಳ ಜಂಟಿ ಸಭೆಗೆ ತಾನು ಹೋಗದಿದ್ದರೂ, ಪಕ್ಷದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ಕಳುಹಿಸಿ, ಮೋದಿ ಕರೆದಿರುವ ಔತಣಕೂಟಕ್ಕೆ ತಾನು ಹಾಜರಾಗುವ ಮೂಲಕ ಜೆಡಿಯು ಸದ್ಯ 'ಸೇಫ್ ಗೇಮ್' ಆಡುತ್ತಿದೆಯಾ?
ಮೋದಿ ಸರಕಾರದ ಅಪನದೀಕರಣದ ನಂತರ ಹೆಚ್ಚುಕಮ್ಮಿ ತಮ್ಮಿಬ್ಬರ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತಾ ಬರುತ್ತಿರುವ ಮೋದಿ ಮತ್ತು ನಿತೀಶ್, ತಮ್ಮಿಬ್ಬರ ಸರಕಾರದ ಪ್ರಮುಖ ನಿರ್ಧಾರಗಳನ್ನು ಪರಸ್ಪರ ಹೊಗಳಿಕೊಂಡಿದ್ದುಂಟು.
ವಿರೋಧ ಪಕ್ಷಗಳು ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ನಿಲ್ಲಿಸಬೇಕೆನ್ನುವ ನಿರ್ಧಾರಕ್ಕೆ ಮೊದಲು ಪ್ರಸ್ತಾವನೆ ಸಲ್ಲಿಸಿದ್ದೇ ನಿತೀಶ್ ಕುಮಾರ್. ಆದರೆ ಮೊದಮೊದಲು ನಿತೀಶ್ ತೋರಿಸುತ್ತಿದ್ದ ಉತ್ಸುಕತೆ ನಂತರದ ದಿನಗಳಲ್ಲಿ ಅಷ್ಟು ತೀವ್ರತೆ ಪಡೆಯದೇ ಇದ್ದದ್ದು 'ದಾಲ್ ಮೇ ಕುಚ್ ಕಾಲಾಹೇ' ಎನ್ನುವಂತಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿ ಶುಕ್ರವಾರ (ಮೇ 26) ಕರೆದಿದ್ದ ಸಭೆಗೆ ಹದಿನೇಳು ಪಕ್ಷಗಳು ತಮ್ಮ ಮುಖಂಡರನ್ನು ಕಳುಹಿಸಿದ್ದರು. ಸಂಯುಕ್ತ ಜನತಾದಳದಿಂದ (ಜೆಡಿಯು) ಶರದ್ ಯಾದವ್ ಸಭೆಯಲ್ಲಿ ಭಾಗವಹಿಸಿದ್ದರೂ, ನಿತೀಶ್ ಗೈರು ಎದ್ದುಕಾಣುತ್ತಿತ್ತು. ಮುಂದೆ ಓದಿ..
ವಿದೇಶಿ ಪ್ರಧಾನಿಗೆ ನೀಡುವ ಭೋಜನಕೂಟದಲ್ಲಿ ನಿತೀಶ್
ಭಾರತಕ್ಕೆ ಭೇಟಿ ನೀಡಿರುವ ಮೊರಿಷಸ್ ಪ್ರಧಾನಿ ಗೌರವಾರ್ಥ ಪ್ರಧಾನಮಂತ್ರಿ ಶನಿವಾರ (ಮೇ 27) ಕರೆದಿರುವ ಔತಣಕೂಟದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಆಹ್ವಾನದ ಮೇರೆಗೆ ನಿತೀಶ್ ಈ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆಂದು ನಿತೀಶ್ ಕುಮಾರ್ ಕಾರ್ಯಾಲಯ ಸ್ಪಷ್ಟ ಪಡಿಸಿದೆ.
ಸೋನಿಯಾ ಸಭೆಗೆ ಉತ್ತಮ ರೆಸ್ಪಾನ್ಸ್
ಸೋನಿಯಾ ಕರೆದಿದ್ದ ಸಭೆಯಲ್ಲಿ ಯುಪಿಎ ಮೈತ್ರಿಕೂಟ, ಎಡರಂಗ, ತೃತೀಯ ರಂಗದ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಪ್ರಮುಖವಾಗಿ ರಾಜಕೀಯವಾಗಿ ಕಡುವೈರಿಗಳೆಂದೇ ಬಿಂಬಿತವಾಗಿರುವ ಎಡಪಕ್ಷಗಳು ಮತ್ತು ಟಿಎಂಸಿ, ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಮುಖಂಡರು ವೇದಿಕೆ ಹಂಚಿಕೊಂಡಿದ್ದು ವಿಶೇಷ. (ಚಿತ್ರ : ಪಿಟಿಐ)
ಎಲ್ಲರಿದ್ದರೂ ಎದ್ದು ಕಾಣುತ್ತಿದ್ದ ನಿತೀಶ್ ಗೈರು
ಸೋನಿಯಾ ಸಭೆಗೆ ಗೈರಾಗಿ, ಮರುದಿನವೇ ಮೋದಿ ಕರೆದಿರುವ ಕಾರ್ಯಕ್ರಮಕ್ಕೆ ನಿತೀಶ್ ಹಾಜರಾಗುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಮೋದಿ ಜೊತೆ ನಿತೀಶ್ ಯಾವುದೇ ವೈಯಕ್ತಿಕ ವಿಚಾರ ಚರ್ಚೆ ನಡೆಸುವುದಿಲ್ಲ ಎಂದು ಜೆಡಿಯು ಮುಖಂಡರು ಹೇಳಿಕೆ ನೀಡಿದ್ದರೂ, ನಿತೀಶ್ ಮತ್ತು ಲಾಲೂ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೇಳಿ ಬರುತ್ತಿರುವ ಮಾತಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.
ಲಾಲೂ ಮತ್ತು ಮಕ್ಕಳ ಮೇಲಿನ ಭ್ರಷ್ಟಾಚಾರದ ಆರೋಪ
ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಮಕ್ಕಳ ಮೇಲೆ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪ ಮತ್ತು ರಿಪಬ್ಲಿಕ್ ಸುದ್ದಿವಾಹಿನಿ ಇತ್ತೀಚೆಗೆ ಬಿಡುಗಡೆಗೊಳಿಸಿದ ಲಾಲೂ - ಕ್ರಿಮಿನಲ್ ರಾಜಕಾರಣಿ ಶಹಾಬುದ್ದೀನ್ ನಡುವಿನ ಆಡಿಯೋ ಟೇಪ್ ನಿಂದಾಗಿ, ಇಬ್ಬರ ಸಂಬಂಧ ಹಳಸುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ನಿತೀಶ್ ಮತ್ತು ಮೋದಿ ಹತ್ತಿರುವಾಗುತ್ತಿದ್ದಾರಾ?
ಮೇಲ್ನೋಟಕ್ಕೆ ವಿದೇಶಿ ಪ್ರಧಾನಿಯೊಬ್ಬರಿಗೆ ನೀಡುವ ಔತಣಕೂಟದಲ್ಲಿ ನಿತೀಶ್ ಭಾಗವಹಿಸುತ್ತಿದ್ದರೂ, ನಿರ್ಣಾಯಕ ರಾಷ್ಟ್ರಪತಿ ಚುನಾವಣೆ ಹೆಸರಿನಲ್ಲಿ ನಿತೀಶ್ ಮತ್ತು ಮೋದಿ ಹತ್ತಿರವಾಗುತ್ತಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.