ಉಪ್ರ ಚುನಾವಣೆ ಮೊದಲ ಹಂತ: ಮೋದಿಗೆ ಅಗ್ನಿ ಪರೀಕ್ಷೆ ಮತ್ತು 10 ಅಂಶಗಳು
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆ ಫೆ.11ರಂದು. ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರದ ಬಗ್ಗೆ ಮತದಾರರ ಅಭಿಪ್ರಾಯ ಏನಾಗಿರಬಹುದು ಎಂಬ ಕುತೂಹಲ ಇದೆ
ಲಖನೌ, ಫೆಬ್ರವರಿ 11: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೊದಲನೇ ಹಂತದ ಮತದಾನ ಶನಿವಾರ 73 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯುತ್ತಿದೆ. 2019ನೇ ಇಸವಿಯಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಮುನ್ನ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಸೆಮಿಫೈನಲ್ ಅಂತಲೇ ಪರಿಗಣಿಸಲಾಗುತ್ತದೆ.
2014ರ ಲೋಕಸಭೆ ಚುನಾವಣೆಯಲ್ಲಿ ಇಂದು ಚುನಾವಣೆ ನಡೆಯುತ್ತಿರುವ ಭಾಗದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ನೋಟು ನಿಷೇಧದ ನಂತರ ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ನೋಟು ನಿಷೇಧದ ಪರಿಣಾಮವನ್ನು ಗ್ರಾಮೀಣ ಭಾಗದ ಬಡವರು ಎದುರಿಸಿದ್ದು, ಉತ್ತರ ಪ್ರದೇಶ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಮತದಾರರ ಪ್ರಮಾಣವೇ ಪ್ರಮುಖ.[ಉಪ್ರ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ 256 ಕೋಟ್ಯಧೀಶರು]
ನೋಟು ನಿಷೇಧ ವಿಚಾರವಾಗಿ ಎಲ್ಲೆಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ಮಾಡಬಹುದೋ ಅಂಥ ಯಾವ ಅವಕಾಶವನ್ನೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಹಾಗೂ ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ, ಇನ್ನು ಯುಪಿಯ ಪಶ್ಚಿಮ ಭಾಗದಲ್ಲಿ ಜಾಟ್ ಸಮುದಾಯದ ಕೋಪವನ್ನು ಕೂಡ ಬಿಜೆಪಿ ಎದುರಿಸಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಬಿಜೆಪಿ ಭರವಸೆ ಈಡೇರಿಸಿಲ್ಲ ಎಂಬ ಸಿಟ್ಟು ಜಾಟ್ ಸಮುದಾಯದಲ್ಲಿದೆ. ಮೂರು ವರ್ಷದ ಹಿಂದೆ ಈ ಸಮುದಾಯ ಕಮಲ ಪಕ್ಷದ ಬೆನ್ನಿಗೆ ನಿಂತಿತ್ತು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆ ಸಮುದಾಯ ಯಾರನ್ನು ಬೆಂಬಲಿಸುತ್ತದೆ ಎಂಬ ಕುತೂಹಲ ಇದೆ. ಅಂದಹಾಗೆ ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಿವೆ.[ಉ.ಪ್ರ ಚುನಾವಣೆ: ಮಹತ್ವ ಪಡೆದುಕೊಂಡ ಜಾಮಾ ಮಸೀದಿ ಇಮಾಮ್ ಬುಖಾರಿ ಕರೆ]
ಪ್ರಬಲ ಪೈಪೋಟಿ
ಬಿಜೆಪಿ, ಎಸ್ ಪಿ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಎಸ್ ಪಿ ಮಧ್ಯೆ ಉ.ಪ್ರದ ಪಶ್ಚಿಮ ಭಾಗದಲ್ಲಿ ಪ್ರಬಲ ಪೈಪೋಟಿ ಇದೆ. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳವು ಜಾಟ್ ಸಮುದಾಯದ ಮತವನ್ನು ಸೆಳೆಯುವ ಸಾಧ್ಯತೆ ಇದ್ದು, ರಾಜಕೀಯ ಪ್ರಾಶಸ್ತ್ಯ ಪಡೆಯುವ ಲಕ್ಷಣ ಗೋಚರಿಸುತ್ತಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿಲ್ಲ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ಮತ ಯಾಚಿಸುತ್ತಿದ್ದಾರೆ. ಸರ್ವೇ, ಸಮೀಕ್ಷೆ ಹಾಗೂ ಮೌಲ್ಯಮಾಪನ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಬಿಜೆಪಿ. ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತರಲಾಗಿದೆ ಎಂಬ ಕಾರಣಕ್ಕೆ ಪಕ್ಷದೊಳಗೆ ಕಾರ್ಯಕರ್ತರಿಗೆ ಅಸಮಾಧಾನವಿದೆ. ಆ ಕಾರಣಕ್ಕೆ ಪ್ರತಿಭಟನೆಗಳಾಗಿವೆ.
ನೋಟು ನಿಷೇಧದ ಸಮರ್ಥನೆ
ಚುನಾವಣೆ ಪ್ರಚಾರಗಳಲ್ಲಿ ನೋಟು ನಿಷೇಧದ ಕ್ರಮವನ್ನು ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ಕಪ್ಪು ಹಾಗೂ ಅಘೋಷಿತ ಹಣದ ನಿರ್ಮೂಲನೆ ನನ್ನ ಗುರಿ. ಬಡವರಿಗೆ ನನ್ನ ಹೃದಯದಲ್ಲಿ ಸ್ಥಾನವಿದೆ ಎಂದಿರುವ ಮೋದಿ, ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಿಂದ ಮುಂದೆ 2019ರ ಲೋಕಸಭೆ ಚುನಾವಣೆಯಲ್ಲೂ ದೊಡ್ಡ ಪ್ರಮಾಣದ ಮತವನ್ನು ಸೆಳೆಯಲು ಶ್ರಮಿಸುತ್ತಿದ್ದಾರೆ.
71 ಸ್ಥಾನಗಳ ಗೆದ್ದಿದ್ದ ಬಿಜೆಪಿ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ 42ರಷ್ಟು ಮತ ಬಿದ್ದಿತ್ತು. ಒಟ್ಟು 80 ಲೋಕಸಭಾ ಸ್ಥಾನಗಳ ಪೈಕಿ 71 ಬಿಜೆಪಿ ಪಾಲಿಗೆ ಒಲಿದಿತ್ತು. ಇನ್ನು ಶನಿವಾರ ನಡೆಯುತ್ತಿರುವ ಮತದಾನದ ಭಾಗದ ಲೆಕ್ಕವನ್ನೇ ಹೇಳಬೇಕೆಂದರೆ, 73 ವಿಧಾನಸಭೆ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳನ್ನು ಗೆಲ್ಲುವಷ್ಟು ಮತಗಳು ಪಡೆದಿತ್ತು.
ಶೇ 29ರಷ್ಟು ಮತ ಪಡೆದಿದ್ದ ಸಮಾಜವಾದಿ ಪಕ್ಷ
ಇನ್ನು ಆಡಳಿತಾರೂಢ ಸಮಾಜವಾದಿ ನೇತೃತ್ವ ವಹಿಸಿರುವ ಅಖಿಲೇಶ್ ಯಾದವ್ ತನ್ನ ತಂದೆ ಮುಲಾಯಂ ಸಿಂಗ್ ಯಾದವ್ ವಿರುದ್ಧವೇ ಬಂಡೆದ್ದು, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಪ್ರಬಲ ಮೈತ್ರಿಕೂಟವಾಗಿದೆ. ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಶೇ 29ರಷ್ಟೇ ಮತ ಪಡೆದು ಬಹುಮತ ಪಡೆದಿತ್ತು.
ಮುಸ್ಲಿಂ ಮತಗಳನ್ನು ಸೆಳೆಯಲಿವೆ ಎಸ್ ಪಿ-ಕಾಂಗ್ರೆಸ್
ಮೊದಲನೇ ಹಂತದ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಎಸ್ ಪಿ-ಕಾಂಗ್ರೆಸ್ ಮೈತ್ರಿಕೂಟ ಮುಸ್ಲಿಮರ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮಧ್ಯೆ ಮುಸ್ಲಿಂ ಮತಗಳು ಹಂಚಿಹೋಗಿದ್ದವು.
ಬಿಎಸ್ ಪಿಯಿಂದ ನೂರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ
ಇನ್ನು ಬಿಎಸ್ ಪಿಯ ಮಾಯಾವತಿ ಈ ಬಾರಿ ದಲಿತ ಮತಗಳ ಜತೆಗೆ ಮುಸ್ಲಿಮರ ಮತಗಳ ಮೇಲೂ ಕಣ್ಣಿರಿಸಿದ್ದಾರೆ. ಹತ್ತಿರಹತ್ತಿರ ನೂರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ
ರಾಜ್ ನಾಥ್ ಸಿಂಗ್ ಮಗ ಕಣದಲ್ಲಿ
ನೋಯಿಡಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಮಗ ಪಂಕಜ್ ಸಿಂಗ್ ಹಾಗೂ ಮೃಗಾಂಕ ಸಿಂಗ್ ಮೊದಲ ಹಂತದ ಚುನಾವಣೆಯಲ್ಲಿ ಗಮನ ಸೆಳೆದಿರುವ ಅಭ್ಯರ್ಥಿಗಳು
ಗೆಲುವಿನ ಸಂಖ್ಯೆ
ಶನಿವಾರ ಮತದಾನ ನಡೆಯುತ್ತಿರುವ 73 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 11ರಲ್ಲಿ ಜಯ ಗಳಿಸಿತ್ತು. ಬಿಎಸ್ ಪಿ ಹಾಗೂ ಎಸ್ ಪಿ ತಲಾ 24, ಆರ್ ಎಲ್ ಡಿ 9, ಕಾಂಗ್ರೆಸ್ 5ರಲ್ಲಿ ಜಯ ಗಳಿಸಿದ್ದವು. ಇಪ್ಪತ್ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸುವುದರ ಜೊತೆಗೆ ಮೂವತ್ತು ಕ್ಷೇತ್ರದಲ್ಲಿ ಬಿಎಸ್ ಪಿ ಮತ ಗಳಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು.
ಬಿಜೆಪಿ ವರ್ಸಸ್ ಎಸ್ ಪಿ-ಕಾಂಗ್ರೆಸ್ ಮೈತ್ರಿ ಕೂಟ
ಈ ಬಾರಿ ಸ್ಪರ್ಧೆ ಏನಿದ್ದರೂ ಬಿಜೆಪಿ ಮತ್ತು ಎಸ್ ಪಿ-ಕಾಂಗ್ರೆಸ್ ಮೈತ್ರಿ ಕೂಟದ ಮಧ್ಯೆ ಎಂದು ಹೇಳಿಕೊಳ್ಳುತ್ತಿವೆ. ಬಿಎಸ್ ಪಿ ಮಾತೇ ಕೇಳಿಬರುತ್ತಿಲ್ಲ. ಎಲ್ಲ ಏಳು ಹಂತದ ಚುನಾವಣೆ ಮುಗಿದ ನಂತರ ಮಾರ್ಚ್ 11ರಂದು ಮತ ಎಣಿಕೆ ನಡೆಯಲಿದೆ.