ಅತಿ ಉದ್ದದ ಸೇತುವೆ ನಿರ್ಮಿಸಿದ ಭಾರತಕ್ಕೆ ಚೀನಾ ವಾರ್ನಿಂಗ್
ಅತಿ ದೊಡ್ಡ ಸೇತುವೆಯೊಂದು ಲೋಕಾರ್ಪಣೆಗೊಂಡಿದೆ ಎಂಬುದು ಭಾರತೀಯರಲ್ಲಿ ಸಂತಸ ಉಂಟು ಮಾಡಿದ್ದರೆ, ನೆರೆಯ ಚೀನಾ ದೇಶಕ್ಕೆ ಈ ವಿಚಾರ ಅಸಮಾಧಾನ ತಂದಿದ್ದು, ಇದೇ ಕಾರಣಕ್ಕೆ ಅದು ಭಾರತಕ್ಕೆ ಎಚ್ಚರಿಕೆ ನೀಡಿದೆ.
ನವದೆಹಲಿ, ಮೇ 29: ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳನ್ನು ಬೆಸೆಯುವ 19.2 ಕಿ.ಮೀ. ಉದ್ದದ ಸೇತುವೆಯನ್ನು (ಭುಪಿನ್ ಹಜಾರಿಕಾ ಸೇತುವೆ) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದನ್ನು ನಾವೆಲ್ಲರೂ ಓದಿದ್ದೇವೆ.
ಆದರೆ, ಇದು ನೆರೆಯ ಚೀನಾ ದೇಶದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅದು ಭಾರತಕ್ಕೆ ವಾರ್ನಿಂಗ್ ಒಂದನ್ನು ರವಾನಿಸಿದೆ.
ಭಾರತ- ಚೀನಾದ ಗಡಿ ಭಾಗಗಳೊಂದಿಗೆ ಎರಡೂ ದೇಶಗಳ ನಡುವೆ ಇರುವ ಭಿನ್ನಾಪ್ರಾಯಗಳು ಬಗೆಹರಿಯುವ ತನಕ ಭಾರತವು ಆ ಭಾಗಗಳಲ್ಲಿ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳಕೂಡದೆಂದು ಈಗಾಗಲೇ ಚೀನಾ ನೀಡಿದ್ದ ಎಚ್ಚರಿಕೆಯನ್ನು ಭಾರತ ಕಡೆಗಣಿಸಿದೆ. ಇನ್ನಾದರೂ, ಈ ಬಗ್ಗೆ ಎಚ್ಚರಿಕೆಯಿಂದಿದ್ದು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಚೀನಾದೊಂದಿಗೆ ಶ್ರಮಿಸುವ ಅವಶ್ಯಕತೆ ಭಾರತಕ್ಕಿದೆ ಎಂದು ಅದು ಹೇಳಿದೆ.
ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆಯುವ ಚೀನಾ, ಅದು ತನಗೆ ಸೇರಬೇಕಾದ ಪ್ರದೇಶವೆಂದು ಈಗಾಗಲೇ ಹಲವಾರು ಬಾರಿ ಹೇಳಿಕೊಂಡಿದೆ. ಆದರೆ, ಚೀನಾದ ಇಂಥ ಪ್ರಯತ್ನಗಳನ್ನು ಭಾರತ ಕಡೆಗಣಿಸಿದ್ದು, ಪ್ರತಿ ಬಾರಿಯೂ ಅರುಣಾಚಲ ಭಾರತದ ಅವಿಭಾಜ್ಯ ಅಂಗವೆಂದು ಘೋಷಿಸುತ್ತಿದೆ.