ಬಂದ್ ಅಥವಾ ಪ್ರತಿಭಟನೆ: ಒಡೆದ ಪ್ರತಿಪಕ್ಷಗಳಲ್ಲೇ ಗೊಂದಲ
ಬೆಂಗಳೂರು, ನವೆಂಬರ್ 28: ಸೋಮವಾರ ಭಾರತ್ ಬಂದ್ ನಡೆಸುವ ಬಗ್ಗೆ ವಿಪಕ್ಷಗಳೇ ಗೊಂದಲಕ್ಕೆ ಸಿಕ್ಕಿದ್ದು, ಪಕ್ಷಗಳ ಮಧ್ಯೆ ಅಭಿಪ್ರಾಯ ಭೇದ ಉಂಟಾಗಿದೆ. ಕೆಲ ಪಕ್ಷಗಳು ಬಂದ್ ಗೆ ಉತ್ಸುಕವಾಗಿದ್ದರೆ, ಕೆಲವು ಪ್ರತಿಭಟನೆ ಸಾಕು ಎಂಬ ಮನಸ್ಥಿತಿಯಲ್ಲಿವೆ. ಕಾಂಗ್ರೆಸ್ ನೇತೃತ್ವದಲ್ಲಿ ನವೆಂಬರ್ 28ರಂದು ಆಕ್ರೋಶ್ ದಿವಸ್ ಆಚರಿಸುವುದಾಗಿ ಘೋಷಿಸಲಾಗಿತ್ತು.
ಇದರರ್ಥ ಸರಕಾರದ ವಿರುದ್ಧ ಪ್ರತಿಭಟನೆ ರೂಪದಲ್ಲಿ ಆಕ್ರೋಶ ವ್ಯಕ್ತಪಡಿಸುವುದಾಗಿತ್ತು. ಆದರೆ ಯಾವುದೇ ಬಂದ್ ಇಲ್ಲ ಎಂದು ಮುಂಚೆಯೇ ಹೇಳಲಾಗಿತ್ತು. ಬಂದ್ ಇಲ್ಲ, ಬರೀ ಹರತಾಳ ಎಂದು ಕೇರಳ ಸರಕಾರ ಹೇಳಿತ್ತು. ಪಶ್ಚಿಮ ಬಂಗಾಲದಲ್ಲಿ ಸಿಪಿಎಂ ನಿಲವು ಬೇರೆ ಇದೆ. ಆದರೆ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪ್ರತಿಭಟನೆಯಷ್ಟೇ ನಡೆಸ್ತೀವಿ ಎಂದು ತಿಳಿಸಿತ್ತು.[ಆಕ್ರೋಶ ದಿವಸದಂದು ಕರ್ನಾಟಕದಲ್ಲಿ ಏನಿರುತ್ತೆ? ಏನಿಲ್ಲ?]
ಬಿಹಾರ, ಒಡಿಶಾದಲ್ಲಿ ಬಂದ್ ಪ್ರಸ್ತಾವವೇ ಇಲ್ಲ. ಏಕೆಂದರೆ ಎರಡೂ ಕಡೆ ನೋಟು ರದ್ದು ನಿರ್ಧಾರವನ್ನು ಸರಕಾರಗಳು ಸ್ವಾಗತಿಸಿದ್ದವು. ಆದ್ದರಿಂದ ಬಂದ್ ಕರೆಯೇ ಅರ್ಥ ಕಳೆದುಕೊಂಡಿತು. ಇನ್ನು ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಯಾವುದೇ ಬಂದ್ ಮಾಡಲ್ಲ. ಇದು ಬಿಜೆಪಿ ತಪ್ಪಾದ ಮಾಹಿತಿ ಹರಡುತ್ತಿದೆ ಎಂದು ಹೇಳಿದ್ದರು. ಜತೆಗೆ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾತ್ರ ನಡೆಸ್ತೀವಿ ಎಂದಿದ್ದರು. ಈ ಹೇಳಿಕೆ ಗಮನಿಸಿದ್ದರೆ ಕರ್ನಾಟಕದಲ್ಲೂ ಬಂದ್ ನಡೆಯಲ್ಲ ಎಂದಾಯಿತು.[ಆಕ್ರೋಶ್ ದಿವಸಕ್ಕೆ ಜೆಡಿಎಸ್ ಬೆಂಬಲವಿಲ್ಲ: ದೇವೇಗೌಡ]
ಆಯಾ ಜಿಲ್ಲಾಡಳಿತವು ಶಾಲೆಗಳಿಗೆ ರಜೆ ನೀಡಬೇಕು ಬೇಡವೋ ನಿರ್ಧರಿಸಲಿ ಎಂದು ಸರಕಾರವೇ ಹೇಳಿದೆ. ಈ ವರೆಗೆ ಯಾವುದೇ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಜನಜೀವನ ಸಹಜವಾಗಿದ್ದರೆ ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.