ಚಿತ್ರ ಸುದ್ದಿ: ರಾಜಕೀಯ ಹೊರತುಪಡಿಸಿದ ಪ್ರಸಂಗಗಳ ಝಲಕ್
ತಮಿಳುನಾಡಿನ ರಾಜಕೀಯವೇ ಗುರುವಾರದ ಸುದ್ದಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಸುದ್ದಿ. ಆದರೆ, ಅದನ್ನೂ ಹೊರತಾದ, ಕುತೂಹಲಗಳುಳ್ಳ ಸುದ್ದಿಗಳು ಚಿತ್ರ ಮಾಹಿತಿ ಇಲ್ಲಿ ನಿಮಗಾಗಿ.
ಅಂತೂ ಇಂತು ತಮಿಳುನಾಡು ರಾಜಕೀಯದಾಟಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲಿದೆ. . ನಾಳೆ (ಫೆ. 18) ತಮಿಳುನಾಡು ವಿಧಾನಸಭೆಯಲ್ಲಿ ನಡೆಯಲಿರುವ ಬಹುಮತ ಸಾಬೀತು ಪರೀಕ್ಷೆಯಲ್ಲಿ ಹಾಲಿ ಮುಖ್ಯಮಂತ್ರಿ ಪಳನಿ ಸ್ವಾಮಿ ಗೆದ್ದರೆ ಅಲ್ಲಿಗೆ ತಾರ್ಕಿಕ ಅಂತ್ಯ ಸಿಕ್ಕಂತೆ.
ತಮಿಳುನಾಡು ರಾಜಕೀಯದ ನಡುವೆಯೇ ಅಲ್ಲಿಲ್ಲಿ ಕೆಲ ಸುದ್ದಿಗಳು ಗಮನ ಸೆಳೆದಿದ್ದುಂಟು. ಅವುಗಳಲ್ಲಿ, ಬೆಂಗಳೂರಿನ ಏರ್ ಶೋ, ನಟ ದರ್ಶನ್ ಹುಟ್ಟುಹಬ್ಬ ಪ್ರಮುಖವಾದವು. ಗುರುವಾರ ಸಂಜೆ ವೇಳೆಗೆ ಹಂಪಿಯಲ್ಲಿ ಚಿರತೆಗಳು ಕಾಣಿಸಿಕೊಂಡು ಕೊಂಚ ಆತಂಕ ಸೃಷ್ಟಿಸಿದ್ದು ಜನರ ಗಮನ ಸೆಳೆಯುಂಥ ಮತ್ತೊಂದು ಸುದ್ದಿ.
ಶುಕ್ರವಾರದ ಪ್ರಮುಖ ಸುದ್ದಿಗಳಲ್ಲಿ ತಮಿಳುನಾಡು ರಾಜಕೀಯ ಹೊರತುಪಡಿಸಿದಂತೆ ಉತ್ತರ ಪ್ರದೇಶದ ಚುನಾವಣಾ ಪ್ರಚಾರ, ಕನ್ನಡ ಚಿತ್ರರಂಗದ ಕಲಾ ನಿರ್ದೇಶಕ ಅರುಣ್ ಸಾಗರ್ ಗೋದಾಮಿಗೆ ಬೆಂಕಿ ಬಿದ್ದ ಘಟನೆಗಳು ಪ್ರಮುಖವಾದವು. ಇವು ಬಿಟ್ಟರೆ, ಕೆಲವಾರು ಸಮಾರಂಭಗಳೂ ಗಮನ ಸೆಳೆದವರು. ಘಟಿಸಿದ್ದರೂ ಸುದ್ದಿಯಾಗದ ಕೆಲವೊಂದು ಸುದ್ದಿಗಳ ಚಿತ್ರ ಸಂಪುಟ ಇಲ್ಲಿ ನಿಮಗಾಗಿ ನೀಡಲಾಗಿದೆ.
ಸುದ್ದಿಗಳೆಂದರೆ, ರಾಜಕೀಯ, ದೊಂಬಿ, ಕೊಲೆ, ರಕ್ತಪಾತ, ಮುಷ್ಕರ... ಇವೇ ಮುಂದಾದ ಸುದ್ದಿಗಳಿಂದ ಸಾಕುಸಾಕೆನಿಸಿರುವರು ಇದನ್ನು ನೋಡಿ ಕೊಂಚ ನಿರಾಳರಾಗಬಹುದು.
ವಿಶಿಷ್ಠವಾದ ಕಸರತ್ತು
ಉಕ್ರೇನಿನ ಕೀವ್ ನಲ್ಲಿ ನಡೆದ ವಿಶಿಷ್ಠವಾದ 'ಸರ್ಕಸ್ ಆನ್ ವಾಟರ್' ಸರ್ಕಸ್ ನಲ್ಲಿ ಸಾಹಸಗಾರ್ತಿಯೊಬ್ಬಳು ನೀರು ತುಂಬಿದ ಪಾರದರ್ಶಕ ಪಾತ್ರೆಯಲ್ಲಿ ಕುಳಿತು ನೃತ್ಯಗೈದರು.
ಯುಎಸ್ ಅಧ್ಯಕ್ಷರ ಸಹಿಯೊಂದಿಗೆ
ಇವು ಅಮೆರಿಕದ ಅಧ್ಯಕ್ಷರ ಸಹಿಯುಳ್ಳ ವಿಶೇಷ ಪೆನ್ನುಗಳು. ಇವುಗಳನ್ನು ಅಮೆರಿಕದ ರೋಲೆಂಡ್ ಐಲ್ಯಾಂಡ್ ನಲ್ಲಿರುವ ಷೋ ರೂಂನಲ್ಲಿ ಮಾತ್ರ ಅಧಿಕೃತವಾಗಿ ಮಾರಾಟ ಮಾಡಲಾಗುತ್ತದೆ. ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ, ಅವರಿಗಿಂತಲೂ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್ ಹಾಗೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯುಳ್ಳ ಪೆನ್ನುಗಳು ಮಾರಾಟಕ್ಕಿವೆ.
ಸಮಾಜವಾದಿ ಪಕ್ಷದ ಬಿರುಸಿನ ಪ್ರಚಾರ
ವಿಧಾನಸಭಾ ಚುನಾವಣಾ ಬಿಸಿಯಿರುವ ಲಖನೌದಲ್ಲಿ ಗುರುವಾರ ರಾತ್ರಿ ನಡೆದ ಸಮಾಜವಾದಿ ಪಕ್ಷದ ರ್ಯಾಲಿಯಲ್ಲಿ ಆ ಕ್ಷೇತ್ರದ ಸಮಾಜವಾದಿ ಪಕ್ಷದ ಚುನಾವಣಾ ಅಭ್ಯರ್ಥಿ ಅಪರ್ಣಾ ಯಾದವ್ (ಬಲ ತುದಿ), ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಪಾಲ್ಗೊಂಡಿದ್ದರು.
ನನ್ನ ಭಾವಚಿತ್ರ ತೆಗಿಯಿರಿ!
ಜರ್ಮನಿಯ ಸ್ಟಟ್ ಗರ್ಟ್ ನಲ್ಲಿ ವಿಲ್ಹೆಮಲ್ಹಾ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ದೈತ್ಯ ಉಡ, ಛಾಯಾಗ್ರಾಹಕನ ಕ್ಯಾಮೆರಾಕ್ಕೆ ನೀಡಿದ ಭಂಗಿ ಹೀಗಿತ್ತು.
ಜರ್ಮನಿಯ ಹಕ್ಕಿಗಳ ಪ್ರೀತಿ ವಿನಿಮಯ
ಜರ್ಮನಿಯ ಸ್ಟಟ್ ಗರ್ಟ್ ನ ಪ್ರಾಣಿ ಸಂಗ್ರಹಾಲಯದಲ್ಲಿ ಆಫ್ರಿಕಾದ ಪೆಂಗ್ವಿನ್ ಗಳು ಪರಸ್ಪರ ಮುದ್ದಿಸುತ್ತಿರುವ ಚಿತ್ರ ನೋಡುಗರನ್ನು ಸೂರೆಗೊಂಡಿತು.
ಬಾವಿಯಲ್ಲಿ ಬಂದು ಬಿತ್ತೆ?!
ಹಂಪಿ, ಉತ್ತರ ಪ್ರದೇಶಗಳಷ್ಟೇ ಅಲ್ಲ, ಗುಜರಾತ್ ನ ದಾಹೋಡ್ ಜಿಲ್ಲೆಯ ಬಾರಿಯಾ ತೆಹಸೀಲ್ ಎಂಬ ತಾಲೂಕಿನ ಹಾರಖ್ ಪುರ ಎಂಬ ಹಳ್ಳಿಯಲ್ಲಿ ಚಿರತೆಯೊಂದು 60 ಅಡಿಯ ಆಳದ ಬಾವಿಗೆ ಬಿದ್ದು ಅಬ್ಬರಿಸುತ್ತಿತ್ತು.
ಆದರೂ ಗ್ರಾಮಸ್ಥರಲ್ಲಿ ಆತಂಕ
ಅವರತ್ತು ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಎತ್ತುವಲ್ಲಿ ಕೊನೆಯೂ ಯಶಸ್ವಿಯಾದರು. ಅಂತೂ ಇಂತೂ ಕೆಲ ಕಾಲ ಈ ಚಿರತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ.
ಸಂಬಂಧಿಕರ ರೋದನೆ
2005ರಲ್ಲಿ ದೆಹಲಿಯಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳಿಗೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಗುರುವಾರ ಶಿಕ್ಷೆ ವಿಧಿಸಿತು. ಪ್ರಕರಣದಲ್ಲಿ ಸಾವಿಗೀಡಾಗಿದ್ದವರ ಸಂಬಂಧಿಯೊಬ್ಬರು ಈ ವೇಳೆ ಕಣ್ಣೀರು ಹಾಕುತ್ತಿದ್ದರು.
ವಾಯು ಸೇವೆಯ ಬಲ ಅನಾವರಣ
ಬೆಂಗಳೂರಿನಲ್ಲಿ ನಡೆದ ಏರ್ ಷೋನಲ್ಲಿ ಗುರುವಾರ ಭಾರತೀಯ ವಾಯು ಸೇನೆಯು ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಭೂ ಸೇವೆಯ ಆಕಾಶ್ ಕ್ಷಿಪಣಿಗಳ ಬ್ಯಾಕ್ ಡ್ರಾಪ್ ನಲ್ಲಿ ಯುದ್ಧ ವಿಮಾನವಾದ ರುದ್ರ ಹಾರಾಟ ಎಲ್ಲರ ಗಮನ ಸೆಳೆಯಿತು.