ಪಾಕ್ ಕಪಿಮುಷ್ಠಿಯಿಂದ ಪಾರಾದ ಆ ಮೂವರು ಗೂಢಾಚಾರರ ಗೋಳಿನ ಕಥೆ!
ಈ ಹಿಂದೆ ಇದೇ ರೀತಿ ಪಾಕಿಸ್ತಾನ ಸರ್ಕಾರದಿಂದ ಬಂಧಿತರಾಗಿ ಅದರ ಕಪಿಮುಷ್ಠಿಯಿಂದ ಪಾರಾಗಿ ಮರಳಿ ಭಾರತಕ್ಕೆ ಬಂದಿರುವ ಮೂವರು ಭಾರತದ ಮಾಜಿ ಗೂಢಾಚಾರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಗೂಢಾಚಾರದ ಆರೋಪದ ಮೇರೆಗೆ ಪಾಕಿಸ್ತಾನ ಸರ್ಕಾರದಿಂದ ಬಂಧಿತನಾಗಿ, ಇದೀಗ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಮರಳಿ ಭಾರತಕ್ಕೆ ತರಲು ಭಾರತ ಸರ್ಕಾರ ಶತಪ್ರಯತ್ನ ಮಾಡುತ್ತಿದೆ.
ಈ ಕಾಲಘಟ್ಟದಲ್ಲಿ ಈ ಹಿಂದೆ ಇದೇ ರೀತಿ ಪಾಕಿಸ್ತಾನ ಸರ್ಕಾರದಿಂದ ಬಂಧಿತರಾಗಿ ಅದರ ಕಪಿಮುಷ್ಠಿಯಿಂದ ಪಾರಾಗಿ ಮರಳಿ ಭಾರತಕ್ಕೆ ಬಂದಿರುವ ಮೂವರು ಭಾರತದ ಮಾಜಿ ಗೂಢಾಚಾರಿಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ನೀಡಿರುವ ಈ ವಿಶೇಷ ವರದಿಯ ಸಂಕ್ಷಿಪ್ತ ರೂಪ ಇಲ್ಲಿದೆ.
ಆ ರೀತಿ ಪಾಕಿಸ್ತಾನದಿಂದ ಪಾರಾಗಿ ಬಂದ ಮೂವರೂ ಪಂಜಾಬ್ ನವರೇ. ಅವರು ಯಾವಾಗ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲಿ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು. ಅವರು ಹೇಗೆ ಅಲ್ಲಿಂದ ಪಾರಾಗಿ ಬಂದರು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿ ನಿಮಗಾಗಿ.
1999ರಲ್ಲಿ ಬಂಧನ, 2007ರಲ್ಲಿ ಬಿಡುಗಡೆ
ಈಗ ಭಾರತದ ಪಂಜಾಬ್ ನಲ್ಲಿರುವ ಮೂವರು ಮಾಜಿ ಗೂಢಾಚಾರರಲ್ಲೊಬ್ಬರು ಸುನಿಲ್ ಮಸಿಹ್. ಇವರಿಗೆ ಈಗ 70 ವರ್ಷ. 1999ರಲ್ಲಿ ಅವರು ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಅವರನ್ನು ಅಲ್ಲಿನ ಸರ್ಕಾರ ಬಂಧಿಸಿತ್ತು. ಪಾಕಿಸ್ತಾನದಲ್ಲಿ ಐದು ವರ್ಷ ಜೈಲು ವಾಸ ಅನುಭವಿಸಿದ್ದಾರೆ. ಆ ವೇಳೆ ಅವರನ್ನು ಪ್ರತಿದಿನ ಹೊಡೆಯಲಾಗುತ್ತಂತೆ. ಆಗಾಗ ಅವರಿಗೆ ವಿದ್ಯುತ್ ಶಾಕ್ ಕೂಡಾ ನೀಡಲಾಗುತ್ತಿತ್ತಂತೆ. ಅದೆಲ್ಲವನ್ನೂ ಆರ್ದ್ರ ಕಂಗಳಿಂದ ನೆನೆಯುವ ಅವರು, ತಮ್ಮನ್ನ ಪಶುಗಳಿಗಿಂತಲೂ ಕೀಳಾಗಿ ನಡಿಸಿಕೊಳ್ಳಲಾಗುತ್ತಿತ್ತು ಎಂದಿದ್ದಾರೆ. ಭಾರತ ಸರ್ಕಾರದ ಸತತ ಪ್ರಯತ್ನದಿಂದಾಗಿ ಅವರು, 2007ರಲ್ಲಿ ಗುರ್ದಾಸ್ ಪುರ ಜಿಲ್ಲೆಯ ದಾದ್ವಾನ್ ಎಂಬ ತಮ್ಮ ಹಳ್ಳಿಗೆ ವಾಪಸ್ಸಾಗಿದ್ದಾರೆ.
1999ರಲ್ಲಿ ಬಂಧನ, 2006ರಲ್ಲಿ ಬಿಡುಗಡೆ
ಮತ್ತೊಬ್ಬರ ಹೆಸರು ಡೇವಿಡ್ ಮೈಷ್. ವಯಸ್ಸು 55 ವರ್ಷ. ಭಾರತೀಯ ಗೂಢಾಚಾರನಾಗಿ ಪಾಕಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತಮ್ಮನ್ನು ಬಂಧಿಸಲಾಗಿತ್ತು ಎಂದು ಹೇಳುವ ಇವರು, ಸಾಕಷ್ಟು ನೋವುಗಳನ್ನು ಅನುಭವಿಸಿದ ನಂತರ ಬಿಡುಗಡೆಗೊಂಡು ಸ್ವದೇಶಕ್ಕೆ ಮರಳಿದ್ದಾರೆ. 1993ರ ಜುಲೈನಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದ ಅವರು, 1999ರಲ್ಲಿ ಪಾಕಿಸ್ತಾನ ಸೇನೆಯಿಂದ ಬಂಧಿಸಲ್ಪಟ್ಟಿದ್ದರಂತೆ. ಗೋರಾ ಜೈಲಿನಲ್ಲಿ ಅವರಿಗೆ ಸಾಕಷ್ಟು ಹಿಂಸೆ ನೀಡಲಾಗಿತ್ತು. ಗುಲಾಮರಂತೆ ತಮ್ಮನ್ನು ನಡೆಸಿಕೊಳ್ಳಲಾಗಿತ್ತೆಂದು ಅವರು ನೆನೆಯುತ್ತಾರೆ. 2006ರಲ್ಲಿ ಅವರು ಬಿಡುಗಡೆಯಾಗಿದ್ದಾರೆ.
1999ರಲ್ಲಿ ಬಂಧನ, 2006ರಲ್ಲಿ ಬಿಡುಗಡೆ
ಇನ್ನು, ಪಂಜಾಬ್ ನಲ್ಲಿರುವ ಮೂರನೇ ಮಾಜಿ ಗೂಢಾಚಾರಿ ಡೇನಿಯಲ್ ಮಾಸಿ. ಇವರಿಗೀಗ 40 ವರ್ಷ. ಇವರನ್ನು ಗೂಢಾಚಾರಿಯನ್ನಾಗಿ ಬಳಸಿಕೊಂಡಿದ್ದ ಭಾರತ ಸರ್ಕಾರ , ಅವರನ್ನು 1992ರಿಂದಲೇ ಕೆಲಸಕ್ಕೆ ತೊಡಗಿಸಿತ್ತು. ಹಾಗಾಗಿ, ಅದೇ ವರ್ಷ ಅವರು, ಸುಮಾರು ಏಳು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದರು. ಆದರೆ,1999ರಲ್ಲಿ ಅದೊಂದು ದಿನ ಗುರುದಾಸ್ ಪುರ ಜಿಲ್ಲೆಯ ಸಮೀಪವಿರುವ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರನ್ನು ಪಾಕಿಸ್ತಾನ ಸೇನೆಯು ಬಂಧಿಸಿತ್ತು. 2006ರಲ್ಲಿ ಬಿಡುಗಡೆಯಾಗಿ ತಮ್ಮ ಗೂಡು ಸೇರಿಕೊಂಡಿದ್ದರು.
ಮಾಜಿ ಗೂಢಾಚಾರಿಗಳ ಹೇಳಿಕೆ
ಭಾರತೀಯ ಸೇನೆಯಿಂದಲೇ ನಿಯೋಜಿತರಾಗಿದ್ದ ಈ ಎಲ್ಲಾ ಗೂಢಾಚಾರಿಗಳಿಗೂ ಒಂದು ನಿರ್ದಿಷ್ಟ ಮಾಹಿತಿಗೆ ಸುಮಾರು 3 ಸಾವಿರ ರು.ಗಳನ್ನು ಹಣ ನೀಡುವುದಾಗಿ ಮೌಖಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಈ ಮಾಜಿ ಗೂಢಾಚಾರಿಗಳು ಹೇಳುತ್ತಾರೆ.
ಮಾಜಿ ಗೂಢ
ಅದೃಷ್ಟವೆಂಬಂತೆ ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದ ನಂತರ, ಇವರ ಜೀವನಕ್ಕೆ ಭಾರತ ಸರ್ಕಾರ ಯಾವುದೇ ಸಹಾಯ ಮಾಡಿಲ್ಲವೆಂಬ ದೂರು ಇವರದ್ದು. ಸುನಿಲ್ ಮೈಸ್ ಅವರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬಿಡುಗಡೆಯಾಗಿ ಬಂದ ನಂತರ, ತಮ್ಮೊಂದಿಗೆ ಯಾವುದೇ ಸಂಬಂಧವಿಲ್ಲವೆಂಬಂತೆ ಭಾರತ ಸರ್ಕಾರ ನಡೆದುಕೊಂಡಿತು. ಜೀವನಾಧಾರಕ್ಕೂ ಯಾವುದೇ ದಾರಿ ಮಾಡಿಕೊಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.