ಪಾಕ್ ಪ್ರೇಮಪಕ್ಷಿಗಳು ಭಾರತಕ್ಕೆ ಬಂದಿದ್ದು ನೇಪಾಳದಿಂದ
ಬೆಂಗಳೂರಿನಲ್ಲಿ ಬಂಧಿತರಾದ ಪಾಕಿಸ್ತಾನಿಯರು ನೇಪಾಳದ ಮಾರ್ಗವಾಗಿ ಭಾರತದ ಒಳಕ್ಕೆ ಬಂದವರು ಎಂಬುದು ಬಹಳ ಮುಖ್ಯ. ಈ ಮೂಲಕ ಭಾರತಕ್ಕೆ ಬರಲು ನೇಪಾಳ ಸುಲಭ ದಾರಿ ಎಂಬುದು ಮತ್ತೆ ಸಾಬೀತಾಗಿದೆ.
ಬೆಂಗಳೂರು, ಮೇ 26: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಪಾಕಿಸ್ತಾನಿಯರು ಸೇರಿ ನಾಲ್ವರನ್ನು ಗುರುವಾರ ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಪರಸ್ಪರ ಪ್ರೀತಿಯ ಕಾರಣಕ್ಕೆ ಮನೆಯಲ್ಲಿ ಪ್ರೀತಿ ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ಬೆಂಗಳೂರಿಗೆ ಬಂದಿದ್ದರು.
ಆದರೆ ವಿಷಯ ಅದಲ್ಲ. ಇವರು ನೇಪಾಳದ ಮಾರ್ಗವಾಗಿ ಭಾರತದ ಒಳಕ್ಕೆ ಬಂದವರು ಎಂಬುದು ಇಲ್ಲಿ ಬಹಳ ಮುಖ್ಯ. ಪಾಕಿಸ್ತಾನವನ್ನು ಬಿಟ್ಟ ಪ್ರೇಮ ಪಕ್ಷಿಗಳು ನೇಪಾಳ ಮಾರ್ಗವಾಗಿ ಭಾರತದೊಳಕ್ಕೆ ಕಾಲಿಟ್ಟಿದ್ದರು. ಈ ಮೂಲಕ ಭಾರತಕ್ಕೆ ಬರಲು ನೇಪಾಳ ಸುಲಭ ದಾರಿ ಎಂಬುದು ಮತ್ತೆ ಸಾಬೀತಾಗಿದೆ.[ಅಧಿಕಾರ ಹಸ್ತಾಂತರಕ್ಕಾಗಿ ಪ್ರಧಾನಿ ಹುದ್ದೆ ತೊರೆದ ಪ್ರಚಂಡ!]
ಕಾಶ್ಮೀರ ಹೊರತುಪಡಿಸಿ ಭಾರತದೊಳಕ್ಕೆ ಬರಲು ಉಗ್ರರೂ ಇದೇ ದಾರಿಯನ್ನು ಹೆಚ್ಚಾಗಿ ಬಳಸುತ್ತಿರುವುದು ಬೆಳಕಿಗೆ ಬರುತ್ತಿರುತ್ತದೆ. ಅದರಲ್ಲೂ ಇಂಡಿಯನ್ ಮುಜಾಹಿದ್ದೀನ ಪ್ರಕರಣಗಳಲ್ಲಿ ಹಲವು ಬಾರಿ ಉಗ್ರರು ನೇಪಾಳ ಮಾರ್ಗವಾಗಿಯೇ ಭಾರತಕ್ಕೆ ಬಂದ ಉದಾಹರಣೆಗಳಿವೆ.
ಒಂದು ಮಾತಿನ ಪ್ರಕಾರ ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಭಾರತಕ್ಕೆ ಕೇವಲ 1,000 ಸಾವಿ ರೂಪಾಯಿಗೆ ವ್ಯಕ್ತಿಯನ್ನು ತಂದು ಬಿಡಲಾಗುತ್ತದೆ. ಇದರಲ್ಲಿ 500 ರೂಪಾಯಿ ಸಾರಿಗೆ ವೆಚ್ಚಕ್ಕೆ ಖರ್ಚಾದರೆ, ಉಳಿದಿದ್ದು ಏಜೆಂಟ್ ಗೆ. ಆತ ನೇರ ತಂದು ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ದುಟ್ಟು ಕೊಟ್ಟವರನ್ನು ತಂದು ಬಿಡುತ್ತಾನೆ.
ಹಲವು ಪ್ರಕಣಗಳಲ್ಲಿ ಬೈಕಿನಲ್ಲೇ ಭಾರತಕ್ಕೆ ವ್ಯಕ್ತಿಗಳನ್ನು ಕರೆತರುತ್ತಾರೆ ಎನ್ನಲಾಗಿದೆ. ಹೀಗೆ ನೇಪಾಳದಿಂದ ಭಾರತಕ್ಕೆ ಬರುವುದು ಎಷ್ಟು ಸುಲಭ ಎಂಬುದನ್ನು ಬೆಂಗಳೂರು ಪ್ರಕರಣ ಮತ್ತೆ ನೆನಪಿಸಿದೆ.