ಅಯೋಧ್ಯೆ ಬಳಿ ಮಸೀದಿ ನಿರ್ಮಿಸಲು ಅನುಮತಿ ಕೇಳಿದ ಶಿಯಾ ಪಂಗಡ
ರಾಮಜನ್ಮ ಭೂಮಿಯ ವಿವಾದಿತ ಸ್ಥಳದಿಂದ ದೂರ ಮಸೀದಿ ನಿರ್ಮಿಸಲು ಅನುಮತಿ ಕೋರಿದ ಶಿಯಾ ಪಂಗಡ. ಈ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಶಿಯಾ ವಕ್ಫ್ ಮಂಡಳಿಯಿಂದ ಅರ್ಜಿ.
ನವದೆಹಲಿ/ ಅಯೋಧ್ಯಾ, ಆಗಸ್ಟ್ 8: ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿಯೊಂದನ್ನು ಸಲ್ಲಿಸಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯು, ವಿವಾದತ್ಮಕ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ತಾನು ಮಸೀದಿಯೊಂದನ್ನು ನಿರ್ಮಾಣ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ಇದಕ್ಕಾಗಿ, ಅನುಮತಿ ನೀಡಬೇಕೆಂದು ಅದು ತನ್ನ ಅರ್ಜಿಯಲ್ಲಿ ಕೋರಿದೆ.
ಬಾಬ್ರಿ ಮಸೀದಿ ಧ್ವಂಸ: ಅಡ್ವಾಣಿ ಸೇರಿ 12 ಜನರಿಗೆ ಜಾಮೀನು
ಅರ್ಜಿಯನ್ನು ವಿಚಾರಣೆಗಾಗಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಆಗಸ್ಟ್ 11ರಂದು ಈ ಬಗ್ಗೆ ಆದೇಶ ನೀಡುವುದಾಗಿ ತಿಳಿಸಿದೆ.
ವಿವಾದಿತ ಸ್ಥಳದಲ್ಲಿದ್ದ ಮಸೀದಿಯು (ಬಾಬ್ರಿ ಮಸೀದಿ) ತನ್ನ ಪಂಗಡಕ್ಕೆ (ಶಿಯಾ) ಸೇರಿದ್ದು. ಹಾಗೆ ನೋಡಿದರೆ ನಾವು ಅಲ್ಲೇ ಮಸೀದಿ ಕಟ್ಟಬೇಕು. ಆದರೆ, ಬಾಬ್ರಿ ಮಸೀದಿ ಇದ್ದಿದ್ದ ಸ್ಥಳ ಈಗ ವಿವಾದದ ಕೇಂದ್ರಬಿಂದು ಆಗಿರುವುದರಿಂದ ಅಲ್ಲಿ ಮಸೀದಿ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ಹುಟ್ಟಿರುವ ಅಯೋಧ್ಯೆಗೆ ಸಮೀಪವಿರುವ, ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಿಸಲು ತನಗೆ ಅವಕಾಶ ಕೊಡಬೇಕೆಂದು ಪ್ರಾರ್ಥಿಸಿದೆ.
ಅಡ್ವಾಣಿ ಕನಸಿನ ರಾಷ್ಟ್ರಪತಿ ಹುದ್ದೆಗೆ ಮುಳ್ಳಾಯ್ತಾ ಬಾಬ್ರಿ ಕೇಸ್?
ಇದೇ ವೇಳೆ, ಸುಪ್ರೀಂ ಕೋರ್ಟ್ ಗೆ ಸಲಹೆಯೊಂದನ್ನು ನೀಡಿರುವ ಅದು, ದಶಕಗಳ ಹಿಂದಿನ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಶೀಘ್ರವೇ ಇತ್ಯರ್ಥಗೊಳಿಸಬೇಕು. ಇದಕ್ಕಾಗಿ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪ್ರತಿನಿಧಿಗಳು, ಕಾನೂನು ತಜ್ಞರು ಉಳ್ಳ ಸಮಿತಿಯೊಂದನ್ನು ರಚಿಸಬೇಕು ಎಂದು ಅದು ಕೋರಿದೆ.
ಇದೇ ವೇಳೆ, 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನ ಲಖ್ನೋ ಪೀಠವು, ವಿವಾದಿತ ಭೂಮಿಯನ್ನು ರಾಮ ಜನ್ಮಭೂಮಿ, ನಿರ್ಮೋಶಿ ಅಖಾಡಾ ಹಾಗೂ ಸುನ್ನಿ ವಕ್ಫ್ ಮಂಡಳಿಗಳಿಗೆ ಸಮನಾಗಿ ಹಂಚಬೇಕೆಂದು ತೀರ್ಪು ನೀಡಿತ್ತು. ಮಸೀದಿಯು ಶಿಯಾ ಪಂಗಡಕ್ಕೆ ಸೇರಿದ್ದರೂ ಶಿಯಾ ಪಂಗಡಕ್ಕೆ ಯಾವುದೇ ಜಾಗ ಸಿಗಲಿಲ್ಲ. ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಪುನರಾವಲೋಕನ ಮಾಡಬೇಕೆಂದು ಅದು ಕೋರಿದೆ.