ಭಾರತದ ನೀರಿನ ಯೋಜನೆಗಳ ಮೇಲೆ ಆತ್ಮಾಹುತಿ ದಾಳಿಗೆ ಉಗ್ರ ಅಜರ್ ಕರೆ
ನವದೆಹಲಿ, ಅಕ್ಟೋಬರ್ 13: ಜೈಶ್ ಎ ಮೊಹಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಬೆದರಿಕೆ ಹೇಳಿಕೆಗಳನ್ನು ಭಾರತವು ಗಂಭೀರವಾಗಿ ಗಮನಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ಆತ ನಿರಂತರವಾಗಿ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಭಾರತದ ವಿರುದ್ಧ ಹೋರಾಡಲು ಮುಜಾಹಿದೀನ್ ಗೆ ಅವಕಾಶ ನೀಡುವಂತೆ ಪಾಕಿಸ್ತಾನ ಸರಕಾರವನ್ನು ಕೇಳಿದ್ದಾನೆ.
ಭಾರತದ ನೀರಿನ ಯೋಜನೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವಂತೆ ಅಜರ್ ಕರೆ ನೀಡಿದ್ದು, ಈ ಎಲ್ಲ ಬೆಳವಣಿಗೆಗಳನ್ನು ದೇಶವು ಗಂಭೀರವಾಗಿ ಗಮನಿಸುತ್ತಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ.[ಗುಜರಾತಿನ ಕಚ್ ನಲ್ಲಿ ಐಎಸ್ಐ ಏಜೆಂಟ್ ಗಳ ಬಂಧನ]
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಮಾಡಿದ ಒತ್ತಾಯಕ್ಕೂ ಚೀನಾ ಅಡ್ಡಗಾಲು ಹಾಕಿದೆ. ಮಸೂದ್ ಅಜರ್ ಭಾರತದಲ್ಲಿ ಪ್ರಮುಖ ದಾಳಿ ನಡೆಸಲು ಯೋಜನೆ ಹಾಕಿದ್ದಾನೆ. ಒಂದೆಡೆ ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಬಗ್ಗೆ ಮಾತನಾಡುತ್ತಿರುವ ಅವನು, ನೀರಿನ ಯೋಜನೆಗಳ ಮೇಲೆ ದಾಳಿ ನಡೆಸಲು ಕರೆ ನೀಡುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಜತೆಗಿನ ಸಿಂಧು ನದಿ ಒಪ್ಪಂದದ ಮರುಪರಿಶೀಲನೆಗೆ ಭಾರತ ಮುಂದಾದ ನಂತರ ಅಜರ್ ತನ್ನ ಸಂಘಟನೆಯ ಉಗ್ರರಿಗೆ ಆಡಿಯೋವೊಂದನ್ನು ಕಲಿಸಿದ್ದಾನೆ. ಸಿಂಧು ನದಿ ಒಪ್ಪಂದ ಮರು ಪರಿಶೀಲನೆ ಹೆಸರಿನಲ್ಲಿ ಭಾರತವು ಪಾಕಿಸ್ತಾನಿಯರನ್ನು ಹೆದರಿಸಲು ಯತ್ನಿಸುತ್ತಿದೆ. ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಅವನು ಹೇಳಿದ್ದಾನೆ.[ಪಿಎಂ ಮೋದಿ ದಸರಾ ಭಾಷಣ; ಉಗ್ರರ ವಿರುದ್ದ ವಾಕ್ ಪ್ರಹಾರ]
ಪಾಕಿಸ್ತಾನಕ್ಕೆ ನೀರು ಹರಿಯುವ ಯೋಜನೆಯನ್ನೇ ಗುರಿ ಮಾಡಿಕೊಂಡು ಆತ್ಮಹತ್ಯೆ ದಾಳಿ ಮಾಡಿ. ಇಂಥ ದಾಳಿಗೆ ನಾಲ್ವರು ಫಿದಾಯಿನ್ ಗಳು ಸಾಕು. ನಾಲ್ವರೇ ಉಗ್ರರು ರಕ್ಷಣಾ ದಳದವರನ್ನು ನಾಲ್ಕು ದಿನ ಪರದಾಡುವಂತೆ ಮಾಡಿದ್ದರು ಎಂದು ಪಠಾಣ್ ಕೋಟ್ ದಾಳಿಯ ಪ್ರಸ್ತಾವ ಮಾಡದೆ ಪರೋಕ್ಷವಾಗಿ ಭಾರತವನ್ನು ಕೆರಳಿಸಿದ್ದಾನೆ.
ಸರ್ಜಿಕಲ್ ದಾಳಿಯ ನಂತರ ಹಲವು ಬಾರಿ ಮಸೂದ್ ಅಜರ್ ಬೆದರಿಕೆ ಹಾಕಿದ್ದಾನೆ. ಇದು ಪಾಕಿಸ್ತಾನದ್ದೇ ಕುಮ್ಮಕ್ಕು. ಭಾರತವನ್ನು ಪರೋಕ್ಷವಾಗಿ ಹೆದರಿಸುವ ತಂತ್ರ ಇದು. ಅಜರ್ ನ ವಿರುದ್ಧ ದೇಶ ನೀಡಿದ ಹಲವು ಸಾಕ್ಷ್ಯ, ಆಧಾರವನ್ನು ಪಾಕ್ ಪಕ್ಕಕ್ಕೆ ಸರಿಸಿದೆ. ಏನು ಬೇಕಾದರೂ ಮಾತನಾಡುವುದಕ್ಕೆ ಅಜರ್ ಗೆ ಐಎಸ್ ಐನಿಂದ ಲೈಸೆನ್ಸ್ ಸಿಕ್ಕಿದೆ.[ಗಡಿಯಲ್ಲಿ ಹೈ ಅಲರ್ಟ್ : ಶಸ್ತ್ರಸನ್ನದ್ಧವಾಗಿದೆ ಭಾರತೀಯ ಸೇನೆ]
ಆದರೆ, ಇದನ್ನು ಭಾರತ ಹಗುರವಾಗೇನೂ ನೋಡಿಲ್ಲ. ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.