1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ
ಅಯೋಧ್ಯಾ ರಾಮಮಂದಿರ ವಿವಾದಕ್ಕೆ 158 ವರ್ಷಗಳ ಇತಿಹಾಸವಿದೆ. ಹಲವು ಬಾರಿ ರಾಜಿ-ಸಂಧಾನದ ಮೂಲಕ ವಿವಾದ ಬಗೆಹರಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಅದರ ಮಾಹಿತಿ ಇಲ್ಲಿದೆ.
ನವದೆಹಲಿ, ಮಾರ್ಚ್ 22: ರಾಮಜನ್ಮ ಭೂಮಿ ವಿವಾದವನ್ನು ಕೋರ್ಟ್ ನ ಹೊರಗೆ ಬಗೆಹರಿಸಿಕೊಳ್ಳುವುದಾದರೆ ಬಗೆಹರಿಸಿಕೊಳ್ಳಿ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ. ಅಂದಹಾಗೆ, ಈ ವಿವಾದವನ್ನು ಕೋರ್ಟ್ ನಿಂದ ಹೊರಗೆ ಬಗೆಹರಿಸಿಕೊಳ್ಳುವಂತೆ ಸಲಹೆ ಕೇಳಿಬರುತ್ತಿರುವುದು ಇದೇ ಮೊದಲ ಬಾರಿ ಏನಲ್ಲ.
ಈ ಹಿಂದೆಯೂ ಸಾಕಷ್ಟು ಸಲ ಇಂಥ ಸನ್ನಿವೇಶಗಳು ಎದುರಾಗಿವೆ. ಈ ವಿಚಾರದಲ್ಲಿ ಮೊದಲ ಬಾರಿಗೆ ಸಂಧಾನದ ಮಾತುಕತೆಯ ಪ್ರಯತ್ನ ಆಗಿದ್ದು 1859ರಲ್ಲಿ. ಯಾವಾಗ ಎರಡು ಕೋಮಿನ ಮಧ್ಯೆ ಸಂಘರ್ಷಗಳು ಕಾಣಿಸಿಕೊಂಡವೋ ಆಗ ಬ್ರಿಟಿಷರ ಮೊದಲ ಬಾರಿಗೆ ಸಂಧಾನ ನಡೆಸಲು ಮುಂದಾದರು.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]
1859ರಿಂದ ಇಲ್ಲಿವರೆಗೆ ಹಲವಾರು ಸಲ ರಾಜಿ-ಸಂಧಾನದ ಪ್ರಯತ್ನಗಳು ನಡೆದಿವೆ. ನೂರೈವತ್ತು ವರ್ಷಗಳೇ ಕಳೆದುಹೋದ ವಿವಾದವೊಂದು ಶೀಘ್ರವೇ ಬಗೆಹರಿಯಲಿ ಎಂಬುದೇ ಇಡೀ ದೇಶವಷ್ಟೇ ಅಲ್ಲ, ಜಗತ್ತಿನ ನಾನಾ ಭಾಗದಲ್ಲಿರುವ ಜನರ ಆಶೀಸ್ಸು. ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಇದೀಗ ಸುಪ್ರೀಂ ಕೋರ್ಟೇ ಹೇಳಿದೆ. ರಾಮ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಮುಖವಾದ ಬೆಳವಣಿಗೆಗಳ ಹಿನ್ನೋಟ ಇಲ್ಲಿದೆ.
ಬೇಲಿ ನಿರ್ಮಿಸಿದ ಬ್ರಿಟಿಷ್ ಸರಕಾರ
1859ರಲ್ಲಿ ಎರಡೂ ಕೋಮುಗಳ ಮಧ್ಯೆ ಮೊದಲ ಬಾರಿಗೆ ಸಂಘರ್ಷ ಬುಗಿಲೆದ್ದಿತು. ಆಗ ಬ್ರಿಟಿಷ್ ಸರಕಾರ ಮಧ್ಯಪ್ರವೇಶಿಸಿ, ಎರಡೂ ಸ್ಥಳಗಳ ಮಧ್ಯೆ ಬೇಲಿ ನಿರ್ಮಿಸಿತು. ಆ ವ್ಯವಸ್ಥೆ ಹೆಚ್ಚು ಕಾಲ ಇರಲಿಲ್ಲ. ಏಕೆಂದರೆ ಈ ವಿವಾದ ಕೋರ್ಟ್ ಮೆಟ್ಟಿಲೇರಿದ್ದರಿಂದ ರಾಮ ಮಂದಿರ ನಿರ್ಮಾಣದ ವಿವಾದಕ್ಕೆ ಪರಿಹಾರ ಸಿಗಲೇ ಇಲ್ಲ.
ಪ್ರಧಾನಿ ಚಂದ್ರಶೇಖರ್ ಪ್ರಯತ್ನ
ಆ ನಂತರ ಈ ವಿವಾದಕ್ಕೆ ಪೂರ್ಣ ವಿರಾಮ ಹಾಕಬೇಕು ಎಂಬ ಯತ್ನ ನಡೆದಿದ್ದು 1990ರಲ್ಲಿ. ಪ್ರಧಾನಿಯಾಗಿದ್ದ ಚಂದ್ರಶೇಖರ್ ಸಂಧಾನಕ್ಕೆ ಯತ್ನಿಸಿದರು. ಆದರೆ ಮಾತುಕತೆ ವಿಫಲವಾಯಿತು.
ಪಿವಿ ನರಸಿಂಹರಾವ್
ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಬಾಬ್ರಿ ಮಸೀದಿ ಕೆಡವಿದ ನಂತರ ರಾಮ ಜನ್ಮ ಭೂಮಿ ವಿವಾದ ಇತ್ಯರ್ಥಕ್ಕೆ ಆಯೋಗವೊಂದನ್ನು ರಚಿಸಿದ್ದರು. ಅದರ ವರದಿಯನ್ನು ಹದಿನೇಳು ವರ್ಷಗಳ ನಂತರ ನೀಡಿತು.
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಅಯೋಧ್ಯಾ ವಿವಾದದ ಸಂಧಾನಕ್ಕೆ ಯತ್ನಿಸಿದರು. ಎರಡೂ ಕಡೆಯ ಮಾತುಕತೆಗಾಗಿ ಆಯೋಧ್ಯಾ ಸೆಲ್ ಎಂದೇ ರಚಿಸಿದರು. ಆದರೆ ಮಾತುಕತೆ ಪ್ರಕ್ರಿಯೆ ಆರಂಭವಾಗಲೇ ಇಲ್ಲ.
ಕೋರ್ಟ್ ನ ಪ್ರಯತ್ನ
ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠವು ತೀರ್ಪು ಕಾಯ್ದಿರಿಸಿದ ನಂತರ, ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಎರಡೂ ಕಡೆಯವರಿಗೆ ಸಲಹೆ ನೀಡಿತು. ಆದರೆ ಇದಕ್ಕೆ ಎರಡೂ ಕಡೆಯವರೂ ಒಪ್ಪಲಿಲ್ಲ.
ಮತ್ತೊಂದು ವಿಫಲ ಯತ್ನ
ಕೋರ್ಟ್ ನ ಹೊರಗೆ ವ್ಯಾಜ್ಯ ಬಗೆಹರಿಸಿಕೊಳ್ಳಲು ಸೂಚಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿವೊಂದನ್ನು ಸಲ್ಲಿಸಲಾಯಿತು. ಆದರೆ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠಕ್ಕೆ ತೀರ್ಪು ನೀಡುವಂತೆ ಆದೇಶ ನೀಡಿತು.
ರಾಜಿ ಸೂತ್ರ ವಿಫಲ
ಹಳೆಯ ದೂರುದಾರ ಮೊಹಮ್ಮದ್ ಹಶೀಂ ಅನ್ಸಾರಿ ಆಕಾರ ಪರಿಷದ್ ಅಧ್ಯಕ್ಷ ಮಹಂತ ಗ್ಯಾನ್ ದಾಸ್ ರನ್ನು ಭೇಟಿಯಾಗಿ ವಿವಾದ ಬಗೆಹರಿಸಲು ಪ್ರಯತ್ನಿಸಿದರು. ಆದರೆ ರಾಜಿ ಸೂತ್ರ ವಿಫಲವಾಯಿತು.
ಮೊದಲ ಸುತ್ತಿನಲ್ಲೇ ವಿಫಲ
ಎರಡೂ ಕಡೆಯವರು ಭೇಟಿಯಾಗಿ ವಿವಾದ ಬಗೆಹರಿಸಿಕೊಳ್ಳಲು 2015ರಲ್ಲಿ ಯತ್ನಿಸಿದರು. ಆದರೆ ಮೊದಲ ಸುತ್ತಿನ ಮಾತುಕತೆಯೇ ವಿಫಲವಾಯಿತು.
ಹಶೀಂ ಅನ್ಸಾರಿ ನಿಧನ
ಮೇ 31, 2016ರಂದು ಮಹಂತ ನರೇಂದ್ರ ಗಿರಿ ಜತೆಗೆ ಹಶೀಂ ಅನ್ಸಾರಿ ಅವರ ಜತೆಗೆ ಭೇಟಿ ನಿಗದಿಯಾಗಿತ್ತು. ಆದರೆ ಅನ್ಸಾರಿ ಅವರು ನಿಧರಾದರು.